
ಬೆಂಗಳೂರು: ವಿಧಾನಪರಿಷತ್ ಸದಸ್ಯರಾದ ಕೆ. ಗೋವಿಂದರಾಜ್ ಮತ್ತು ನಜೀರ್ ಅಹ್ಮದ್ ಅವರನ್ನು ಸಿಎಂ ಸಿದ್ಧರಾಮಯ್ಯ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. ಸಂಪುಟ ದರ್ಜೆ ಸ್ಥಾನಮಾನಗಳನ್ನು ನೀಡುವ ಮೂಲಕ ಸಿಎಂ ಕಾನೂನು ಸಲಹೆಗಾರರಾಗಿ ಕೊಡಗು ಜಿಲ್ಲೆಯ ವಿರಾಜಪೇಟೆ ಶಾಸಕ ಪೊನ್ನಣ್ಣ ನೇಮಕ ಮಾಡಲಾಗಿದೆ. ಚುನಾವಣಾ ನೀತಿ ತಂತ್ರಜ್ಞ ಸುನೀಲ್ ಕನುಗೋಳು ಅವರು ಸಿಎಂ ಮುಖ್ಯ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಈ ನಾಲ್ವರಿಗೆ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ, ಎಲ್ಲ ಸೌಲಭ್ಯಗಳನ್ನು ನೀಡುವಂತೆ ಆದೇಶಿಸಲಾಗಿದೆ.

ವಿಧಾನಪರಿಷತ್ ಸದಸ್ಯ ಕೆ. ಗೋವಿಂದರಾಜ್ ಏಷ್ಯಾ ಬಾಸ್ಕೆಟ್ಬಾಲ್ನ ನೂತನ ಅಧ್ಯಕ್ಷರಾಗಿ ಮೇ ತಿಂಗಳಿನಲ್ಲೇ ನೇಮಕವಾಗಿದ್ದರು. ಈ ಹುದ್ದೆಗೇರಿದ ಭಾರತದ ಮೊದಲ ವ್ಯಕ್ತಿ ಎನ್ನುವ ಹಿರಿಮೆಗೂ ಗೋವಿಂದರಾಜು ಪಾತ್ರರಾಗಿದ್ದರು.

ಪಕ್ಷದ ಗೆಲುವಿಗೆ ತೆರೆಮರೆಯಲ್ಲಿ ತಂತ್ರಗಾರಿಕೆಯನ್ನು ಹೆಣೆದಿದ್ದ ಚುನಾವಣಾ ನೀತಿ ತಂತ್ರಜ್ಞ ಸುನೀಲ್ ಕನುಗೋಳು ಈಗ ಆಡಳಿತದಲ್ಲೂ ಸಿಎಂಗೆ ಮುಖ್ಯ ಸಲಹೆಗಾರರಾಗಿ ಜವಾಬ್ದಾರಿ ನಿಭಾಯಿಸಲಿದ್ದಾರೆ. ಚುನಾವಣಾ ವೇಳೆ ಪೇಸಿಎಂ, ಸೇಸಿಎಂ ಅಭಿಯಾನ, ಉಚಿತ ಗ್ಯಾರಂಟಿಗಳ ಹಿಂದಿನ ಮಾಸ್ಟರ್ ಮೈಂಡ್ ಇವರೆ ಎನ್ನಲಾಗುತ್ತಿದೆ.
