
ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್ ಜೋರಾಗಿದೆ. ಈ ನಡುವೆ ಕರಾವಳಿ ಕೋಟಾದ ಸಚಿವ ಸ್ಥಾನಕ್ಕೆ ಲಾಬಿ ಹೆಚ್ಚಾಗಿದೆ. ದಕ್ಷಿಣಕನ್ನಡ – ಉಡುಪಿ ಜಿಲ್ಲೆಯಲ್ಲಿ ಕೇವಲ ಎರಡು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದ್ದು, ಅದರಲ್ಲಿಯೂ ಯುಟಿ ಖಾದರ್ ಅವರನ್ನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಿದ್ದು ಇದೀಗ ಪರಿಷತ್ ಸದಸ್ಯರು ಮಿನಿಷ್ಟರ್ ರೇಸ್ನಲ್ಲಿದ್ದಾರೆ.
ಬೆಂಗಳೂರು: ದೆಹಲಿಯಲ್ಲಿ ಸಚಿವ ಸಂಪುಟ ಸರ್ಕಸ್ ಜೋರಾಗಿದೆ. ಈ ನಡುವೆ ಕರಾವಳಿ ಕೋಟಾದ ಸಚಿವ ಸ್ಥಾನಕ್ಕೆ ಲಾಬಿ ಹೆಚ್ಚಾಗಿದೆ. ದಕ್ಷಿಣಕನ್ನಡ – ಉಡುಪಿ ಜಿಲ್ಲೆಯಲ್ಲಿ ಕೇವಲ ಎರಡು ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿದ್ದು, ಅದರಲ್ಲಿಯೂ ಯು. ಟಿ. ಖಾದರ್ (UT Khader) ಅವರನ್ನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಿದ್ದು ಇದೀಗ ಪರಿಷತ್ ಸದಸ್ಯರು ಮಿನಿಷ್ಟರ್ ರೇಸ್ನಲ್ಲಿದ್ದಾರೆ. ಹೌದು, ಸಿಎಂ ಸಿದ್ದರಾಮಯ್ಯ ಸಂಪುಟ ಸರ್ಕಸ್ ದಿಲ್ಲಿಗೆ ಶಿಫ್ಟ್ ಆಗಿದೆ. ಯಾರಿಗೆ ಸಚಿವ ಸ್ಥಾನ ಸಿಗುತ್ತೆ, ಪೂರ್ಣ ಮಂತ್ರಿ ಮಂಡಲ ಯಾವಾಗ ಆಗುತ್ತೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಇದರ ಜೊತೆ ಮಂಗಳೂರಿನ ಸೋಲಿಲ್ಲದ ಸರದಾರ ಯುಟಿ ಖಾದರ್ ಅವರನ್ನು ಸ್ಪೀಕರ್ ಸ್ಥಾನದಲ್ಲಿ ಕುಳ್ಳಿರಿಸಿದ ಬಳಿಕ ಕರಾವಳಿ ಕೋಟಾದ ಸಚಿವ ಸ್ಥಾನಕ್ಕೆ ವಿಧಾನಪರಿಷತ್ ಸದಸ್ಯರ ಲಾಬಿ ಜೋರಾಗಿಯೆ ನಡೆಯುತ್ತಿದೆ.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ 13 ಸ್ಥಾನಗಳಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್ ಗೆದ್ದಿತ್ತು. ಅದರಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು, ಮಂಗಳೂರು ಕಾಂಗ್ರೆಸ್ ಶಾಸಕ ಯುಟಿ ಖಾದರ್ ಸಭಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಹೀಗಾಗಿ ಕರಾವಳಿಯ ಉಸ್ತುವಾರಿ ಸಚಿವರು ಯಾರಾಗುತ್ತಾರೆ ಎಂಬ ಜಿಜ್ಞಾಸೆ ಮತದಾರರಲ್ಲಿ ಮೂಡಿದೆ. ಆದ್ರೆ ಈ ಅವಕಾಶವನ್ನು ಪರಿಷತ್ ಸದಸ್ಯರು ಬಳಸಿಕೊಳ್ಳಲು ಮುಂದಾಗಿದ್ದು ಎಂ.ಎಲ್.ಸಿಯೂ ಆಗಿರುವ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕ ಬಿ.ಕೆ ಹರಿಪ್ರಸಾದ್ ಸಚಿವ ಸ್ಥಾನ ಪಡೆಯುವ ಪ್ರಯತ್ನದಲ್ಲಿದ್ದಾರೆ. ಇವರ ಜೊತೆ ಎಂ.ಎಲ್.ಸಿ ಮಂಜುನಾಥ್ ಭಂಡಾರಿ ಹೆಸರು ಸಹ ಕೇಳಿಬಂದಿದೆ.

ಫಲಿತಾಂಶ ಬಂದ ದಿನ ಯುಟಿ ಖಾದರ್ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗುತ್ತಾರೆ. ಇದರ ಜೊತೆ ಯುಟಿ ಖಾದರ್ಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಎಂದು ಜನ ಅಂದುಕೊಂಡಿದ್ದರು. ಆದ್ರೆ ಅನೀರಿಕ್ಷಿತವಾಗಿ ನಡೆದ ಬೆಳವಣಿಗೆಯಲ್ಲಿ ಖಾದರ್ ಅವರನ್ನು ಸಭಾಧ್ಯಕ್ಷ ಸ್ಥಾನದಲ್ಲಿ ಕುಳ್ಳಿರಿಸಿದ್ದು ಜಿಲ್ಲೆಯ ಮತದಾರರಿಗೆ ಕೊಂಚ ಬೇಸರವನ್ನು ಮೂಡಿಸಿದೆ. ಈ ನಡುವೆಯೂ ಸ್ಪೀಕರ್ ಆದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಸ್ಪೀಕರ್ ಯುಟಿ ಖಾದರ್ಗೆ ಗುರುವಾರ ಅದ್ದೂರಿ ಸ್ವಾಗತ ನೀಡಲಾಯಿತು. ಇದೇ ಸಂದರ್ಭ ಮಾತನಾಡಿದ ಯುಟಿ ಖಾದರ್ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು, ಸಭಾಧ್ಯಕ್ಷನಾದರೂ ನನ್ನ ಸೇವೆಗೆ ಯಾವುದೇ ಅಡ್ಡಿಯಾಗಲ್ಲ, ಕ್ಷೇತ್ರದ ಜನರ ಕಾರ್ಯಕರ್ತರ ಜೊತೆ ನಿಕಟ ಸಂಪರ್ಕ ಇರಲಿದೆ ಎಂದು ಹೇಳಿದ್ದಾರೆ.

ಇದೆಲ್ಲದರ ನಡುವೆ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವ ರಮನಾಥ್ ರೈ ಅವರನ್ನು ಎಂ.ಎಲ್.ಸಿ ಮಾಡಿ ಸಚಿವ ಸ್ಥಾನ ನೀಡಿ ಎಂಬ ಒತ್ತಾಯ ಕೂಡ ಕೇಳಿ ಬರುತ್ತಿದೆ. ಸದ್ಯ ಹೈಕಮಾಂಡ್ ಅಂಗಳದಲ್ಲಿ ಸಚಿವ ಸಂಪುಟದ ಚೆಂಡು ಇದ್ದು ಸದ್ಯದಲ್ಲೇ ಈ ಕುತೂಹಲಗಳಿಗೆ ತೆರೆ ಬೀಳುವ ಸಾಧ್ಯತೆಯಿದೆ.