
ಚುನಾವಣೆಯಲ್ಲಿ ನಕಲಿ ಮತದಾನ ಮಾಡಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಷ್ಟ್ರಪತಿಗೆ ದೂರು ಸಲ್ಲಿಸಲಾಗಿದೆ
ವಿಜಯಪುರ: ಚುನಾವಣೆಯಲ್ಲಿ ನಕಲಿ ಮತದಾನ ಮಾಡಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರಾಷ್ಟ್ರಪತಿಗೆ ದೂರು ಸಲ್ಲಿಸಲಾಗಿದೆ. ಡಿಸಿ ಮೂಲಕ ರಾಷ್ಟ್ರಪತಿಗೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರಫ್ ದೂರು ನೀಡಿದ್ದಾರೆ. ಯತ್ನಾಳ್ ಅಧ್ಯಕ್ಷರಾಗಿರುವ ಸಿದ್ಧಸಿರಿ ಸಂಸ್ಥೆಯ ಬ್ಯಾಂಕ್ ಸಿಬ್ಬಂದಿ, ಸಕ್ಕರೆ ಕಾರ್ಖಾನೆ ಸಿಬ್ಬಂದಿ ಹೆಸರಲ್ಲಿ ನಕಲಿ ಮತದಾನ ಮಾಡಿಸಿದ್ದಾರೆ. ನಕಲಿ ಮತದಾನದ ಬಗ್ಗೆ ಸಾಕ್ಷಿ ನೀಡಿದರು ಕ್ರಮ ಕೈಗೊಂಡಿಲ್ಲ. ಇದರಲ್ಲಿ ಕೆಲ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ. ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಮುಶ್ರಫ್ ಆಗ್ರಹಿಸಿದ್ದಾರೆ.

ಈ ಭಾರಿಯ ಚುನಾವಣೆಯಲ್ಲಿ ಗಮನ ಸೆಳೆದ ವಿಜಯಪುರ ನಗರ ಕ್ಷೇತ್ರ
ಪ್ರತಿ ಚುನಾವಣೆಯಲ್ಲೂ ಧರ್ಮಾಧಾರಿತ ರಾಜಕಾರಣದ ಅಖಾಡವಾಗುವ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ, ರಾಜ್ಯ ರಾಜಕೀಯದ ಗಮನ ಸೆಳೆದಿತ್ತು. ಈ ಬಾರಿ 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಕಣಕ್ಕಿಳಿಯುವ ಮೂಲಕ ಜಯ ಗಳಿಸಿದ್ದರು. ಕಾಂಗ್ರೆಸ್ನಿಂದ ಮತ್ತೆ ಅದ್ಬುಲ್ ಹಮೀದ್ ಖಾಜಸಾಹೇಬ್ ಮುಶ್ರಿಫ್ ಸ್ಪರ್ಧೆ ಮಾಡಿ, ಸೋಲು ಕಂಡಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಹಿಡಿತದಲ್ಲಿದ್ದ, ವಿಜಯಪುರ ನಗರ ಸದ್ಯ ಬಿಜೆಪಿ ತೆಕ್ಕೆಯಲ್ಲಿದೆ. ಮುಸ್ಲಿಂ ಸಮುದಾಯದ ಮತಗಳೇ ಹೆಚ್ಚಿರುವ ಕಾರಣ ಇಲ್ಲಿ ಧರ್ಮ ಆಧರಿತ ರಾಜಕಾರಣ ನಡೆಯುತ್ತಿದೆ. ಅದಕ್ಕಾಗಿಯೇ ಕಳೆದ ಮೂರು ಚುನಾವಣೆಗಳಲ್ಲೂ ಕಾಂಗ್ರೆಸ್ ಇಲ್ಲಿ ಮುಸ್ಲಿಂ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು, ಈ ಬಾರಿಯೂ ಸಹ ಅದೇ ಸಂಪ್ರದಾಯ ಮುಂದುವರೆದಿತ್ತು.

ಶಾಸಕ ಯತ್ನಾಳ್, ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗದಿಂದ ನೋಟಿಸ್ ಜಾರಿ
ಆಕ್ಷೇಪಾರ್ಹ ಹೇಳಿಕೆ ನೀಡಿದ ವಿಚಾರವಾಗಿ ಇತ್ತೀಚೆಗೆ ವಿಜಯಪುರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ಶೋಕಾಸ್ ನೋಟಿಸ್ ನೀಡಿತ್ತು. ಇಬ್ಬರೂ ನಾಯಕರು ಆಯೋಗಕ್ಕೆ ಕಾರಣ ನೀಡಬೇಕಿತ್ತು. ಯತ್ನಾಳ್ ಅವರು ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಸಿ ಟೀಕಿಸಿದ್ದರೆ, ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಪದ ಬಳಸಿ ಟೀಕಿಸಿದ್ದರು.