

ಬೆಂಗಳೂರು: ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡಬಾರದು. ರ್ಯಾಲಿಯಿಂದ (Rally) ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರಬಹುದು. ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಇದ್ದರೆ ಮೋದಿ (Narendra Modi) ರ್ಯಾಲಿ ರದ್ದು ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (H.D.Kumaraswamy) ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಭಾನುವಾರ ನೀಟ್ ಪರೀಕ್ಷೆ ಇದ್ದರೂ ಮೋದಿ ರ್ಯಾಲಿ ಮಾಡುತ್ತಿರುವ ವಿಚಾರವಾಗಿ ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಪಕ್ಷಕ್ಕೆ ನಾಡಿನ ಜನರ ಸಮಸ್ಯೆಗಳಿಗಿಂತ ಅಧಿಕಾರ ಮುಖ್ಯ. ಅವರು ಅಧಿಕಾರಕ್ಕೆ ಬರಲು ಏನು ಬೇಕಾದರೂ ಮಾಡುತ್ತಾರೆ. ಜನರ ಬದುಕಿನ ಬಗ್ಗೆ ಅವರಿಗೆ ಆಸಕ್ತಿ ಇಲ್ಲ. ಏನಾದರು ಮಾಡಿ ಅಧಿಕಾರಕ್ಕೆ ಬರಬೇಕು ಎನ್ನುವುದು ಅವರ ಅಜೆಂಡಾ. ಅವರಿಂದ ಸರಿ-ತಪ್ಪುಗಳನ್ನು ನಿರೀಕ್ಷೆ ಮಾಡಬೇಡಿ. ಈ ರ್ಯಾಲಿ ನಿಲ್ಲಿಸಬೇಕೆಂದು ನಾನು ಪ್ರಧಾನ ಮಂತ್ರಿಗಳಿಗೆ ಆಗ್ರಹ ಮಾಡುತ್ತೇನೆ ಎಂದು ಕಿಡಿಕಾರಿದರು

ಮಂಡ್ಯದಲ್ಲಿ (Mandya) ಸುಮಲತಾ (Sumalatha Ambareesh) ಗೆಲ್ಲಿಸಿ ತಪ್ಪು ಮಾಡಿದೆವು ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮಾತಿನಿಂದ ಸತ್ಯ ಹೊರಬಂದಿದೆ. ಮಂಡ್ಯ ಮತ್ತು ತುಮಕೂರಿನಲ್ಲಿ ಏನು ಮಾಡಿದ್ದಾರೆ ಎಂದು ಈಗ ಗೊತ್ತಾಯಿತು ತಾನೇ? ಈಗ ಅದು ಮುಗಿದು ಹೋದ ಅಧ್ಯಾಯ. ಸಮ್ಮಿಶ್ರ ಸರ್ಕಾರವನ್ನು ತೆಗೆದವರೇ ಸಿದ್ದರಾಮಯ್ಯ ಎಂದು ಹರಿಹಾಯ್ದರು.
ನಾನು ತಾಜ್ನಲ್ಲಿ ಕೂತಿದ್ದೆ, ಶಾಸಕರನ್ನು ನೋಡಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ. ನಾನು ನೋಡದೇ ಹೋಗಿದ್ದರೆ ಕಾಂಗ್ರೆಸ್ ಶಾಸಕರಿಗೆ 19 ಸಾವಿರ ಕೋಟಿ ರೂ. ಅನುದಾನ ಕೊಡಲು ಆಗುತ್ತಿತ್ತಾ? ನಾನು ಸಿಎಂ ಆಗಿ ನಿದ್ದೆ ಮಾಡಿಲ್ಲ. ಅವ್ಯವಹಾರ ಮಾಡಲು ಹೋಗಿರಲಿಲ್ಲ. ಅಧಿಕಾರ ಹೋದಮೇಲೂ ಸಿದ್ದರಾಮಯ್ಯ ಯಾಕೆ ಸರ್ಕಾರಿ ಬಂಗಲೆಯಲ್ಲಿ ಕುಳಿತಿದ್ದರು? ಬಿಟ್ಟು ಕೊಡಬೇಕಿತ್ತು ಅಲ್ಲವಾ? ತಪ್ಪು ಮಾಡಿರೋರು ಸಿದ್ದರಾಮಯ್ಯ. ಈಗ ನನ್ನ ಮೇಲೆ ಆರೋಪ ಮಾಡಿದ್ದಾರೆ. ಅದರಿಂದ ಏನು ಉಪಯೋಗ? ನಾನು ಸಿಎಂ ಆಗಿದ್ದಾಗ ಸಿಎಂ ಫಂಡ್ನಿಂದ ಜನರಿಗೆ 109 ಕೋಟಿ ರೂ. ಪರಿಹಾರ ನೀಡಿದ್ದೇನೆ. ಜನರನ್ನು ನೋಡದೇ ಹೋಗಿದ್ದರೆ ಇದೆಲ್ಲಾ ಮಾಡಲು ಸಾಧ್ಯವಿತ್ತಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಬಜರಂಗದಳ (Bajarang Dal) ವಿಷಯ ಪ್ರಚಾರದ ಬಗ್ಗೆ ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳಿಗೆ ನಾಡಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಅಂಶವೇ ಇಲ್ಲ. ಇಂತಹ ವಿಷಯಗಳನ್ನು ಕೆದಕೋದೇ ಎರಡೂ ಪಕ್ಷಗಳ ಕೆಲಸ. ಸ್ವಲ್ಪ ದಿನ ವಿಷಸರ್ಪ, ಈಗ ಬಜರಂಗದಳ ಎಂದು ಹೋಗುತ್ತಿದ್ದಾರೆ. ಚುನಾವಣೆ (Election) ಮುಗಿದ ಮೇಲೆ ಈ ವಿಷಯಗಳು ಮುಗಿಯುತ್ತವೆ ಎಂದರು.
ಕಾಂಗ್ರೆಸ್ (Congress) ಮತ್ತು ಬಿಜೆಪಿ ಎರಡೂ ಪಕ್ಷಗಳೂ 100 ಸ್ಥಾನ ದಾಟುವುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗೆ ಭಯ ಶುರುವಾಗಿದೆ. ಈಗ ಬರುತ್ತಿರುವ ಸಮೀಕ್ಷೆಗಳು ಕೃತಕವಾದ ಸಮೀಕ್ಷೆಗಳು. ಈ ಸಮೀಕ್ಷೆಗಳಲ್ಲಿ ಸತ್ಯಾಂಶವಿಲ್ಲ. ಯಾವುದೇ ಕಾರಣಕ್ಕೂ ಎರಡು ಪಕ್ಷಗಳು 100 ಸ್ಥಾನ ದಾಟಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಈ ಬಾರಿ ಜನ ಜೆಡಿಎಸ್ (JDS) ಕೈಹಿಡಿಯುತ್ತಾರೆ. ಜನರ ಮುಂದೆ ನಾವು ವಿಷಯಾಧಾರಿತವಾಗಿ ಹೋಗಿದ್ದೇವೆ. ಆರ್ಥಿಕ ಶಕ್ತಿ ಇದ್ದಿದ್ದರೆ ನಾನೇ 130-140 ಸ್ಥಾನ ದಾಟುತ್ತಿದ್ದೆ. ನಮ್ಮಲ್ಲಿ ಆರ್ಥಿಕ ಶಕ್ತಿ ಕೊರತೆಯಿದೆ. ಆದ್ದರಿಂದ ನನ್ನ ನಿರೀಕ್ಷೆಗೆ ಹಿನ್ನಡೆ ಆಗಬಹುದು. ಜನ ನಮ್ಮ ಪರ ಇದ್ದಾರೆ. ಅವರು ದುಡ್ಡಿಗೆ ಮರಳಾಗದೆ ಬಹುಮತದ ಸರ್ಕಾರ ತರಲು ತೀರ್ಮಾನ ಮಾಡಿದ್ದಾರೆ. ಸಿಎಂ ಕ್ಷೇತ್ರದಲ್ಲಿ ನಮಗೆ ಒಳ್ಳೆಯ ಅಭಿಪ್ರಾಯವಿದೆ. ಜನ ದುಡ್ಡನ್ನು ತಿರಸ್ಕಾರ ಮಾಡಿ ಅವರ ಭವಿಷ್ಯಕ್ಕಾಗಿ ಜೆಡಿಎಸ್ ಬೆಂಬಲಿಸುವ ನಿರ್ಧಾರ ಮಾಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
