

ಪೂಂಚ್ ಬಳಿಕ ಭಾರತೀಯ ಸೇನಾ ವಾಹನ ಹೊತ್ತಿ ಉರಿದ ಘಟನೆ ಹಿಂದೆ ಉಗ್ರರ ದಾಳಿ ಖಚಿತಗೊಂಡಿದೆ. ಭಾರತೀಯ ಸೇನಾ ವಾಹನದ ಮೇಲೆ ಉಗ್ರರ ಗ್ರೆನೇಡ್ ದಾಳಿ ನಡೆಸಿ ವಾಹನ ಸ್ಫೋಟಿಸಿದ್ದಾರೆ. ಈ ಘಟನೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.
ಪೂಂಚ್(ಏ.20): ಯೋಧರು ತೆರಳುತ್ತಿದ್ಧ ಸೇನಾ ವಾಹನ ಹೊತ್ತಿ ಉರಿದ ಘಟನೆ ಹಿಂದೆ ಉಗ್ರರ ಕೈವಾಡವಿರುವುದು ಸ್ಪಷ್ಟವಾಗಿದೆ. ಜಮ್ಮ ಮತ್ತುಕಾಶ್ಮೀರದ ಪೂಂಚ್ ಬಳಿ ಭಾರತೀಯ ಸೇನಾ ವಾಹನ ಹೊತ್ತಿ ಉರಿದಿತ್ತು. ಆರಂಭದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಅನ್ನೋ ಮಾಹತಿ ಹೊರಬಿದ್ದಿತ್ತು. ಆದರೆ ಇದು ಉಗ್ರರು ನಡೆಸಿದ ಗ್ರೆನೇಡ್ ದಾಳಿ ಅನ್ನೋದು ಬಹಿರಂಗವಾಗಿದೆ. ಯೋಧರು ಸಾಗುತ್ತಿದ್ದ ಸೇನಾ ವಾಹನದ ಮೇಲೆ ಗ್ರೆನೇಡ್ ದಾಳಿ ಮಾಡಿದ್ದಾರೆ. ಇದರಿಂದ ಸೇನಾ ವಾಹನ ಸ್ಫೋಟಗೊಂಡು ಹೊತ್ತಿ ಉರಿದಿದೆ. ಈ ಘಟನೆಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದಾರೆ.

ಬಿಜೆ ಸೆಕ್ಟರ್ ಬಳಿಯ ಭಟ್ಟಾ ದುರೈ ಕಾಡಿನ ಬಳಿ ಸೇನಾ ವಾಹನದ ಮೇಲೆ ಅಡಗಿ ಕುಳಿತ ಉಗ್ರರು ಗ್ರೆನೇಡ್ ದಾಳಿ ಮಾಡಿದ್ದಾರೆ. ತೀವ್ರ ಮಳೆಯಾಗುತ್ತಿರುವ ಕಾರಣ ಸೇನಾ ವಾಹನ ನಿಧಾನವಾಗಿ ಸಾಗುತ್ತಿತ್ತು. ಇಷ್ಟೇ ಅಲ್ಲ, ಮಳೆಯಿಂದಾಗಿ ದಾರಿ ಕೂಡ ಅಸ್ಪಷ್ಟವಾಗಿತ್ತು. ಇದೆ ಸಂದರ್ಭ ಬಳಿಸಿಕೊಂಡ ಉಗ್ರರು, ವಾಹನದ ಮೇಲೆ ಗ್ರೆನೇಡ್ ದಾಳಿ ಮಾಡಿದ್ದಾರೆ. ಉಗ್ರ ವಿರೋಧ ದಳದ ಐವರು ಯೋಧರು ಹುತಾತ್ಮರಾಗಿರುವುದಾಗಿ ಭಾರತೀಯ ಸೇನೆ ಖಚಿತಪಡಿಸಿದೆ

ಸ್ಥಳಕ್ಕೆ ಧಾವಿಸಿರುವ ಸೇನಾಧಿಕಾರಿಗಳು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ಇತ್ತ ಭಾರತೀಯ ಸೇನೆ ಸಂಪೂರ್ಣ ಪ್ರದೇಶ ಸುತ್ತುವರಿದೆ ಕಾರ್ಯಾಚರಣೆ ಆರಂಭಿಸಿದೆ. ತೀವ್ರ ಮಳೆಯಾಗುತ್ತಿರುವ ಕಾರಣ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಕಾರ್ಯಾಚರಣೆಗೆ ಡ್ರೋನ್ ಬಳಸಿಕೊಳ್ಳಲಾಗಿದೆ. ಸುತ್ತಲೂ ಕಾಡಿನ ಪ್ರದೇಶವಾಗಿರುವ ಕಾರಣ ಉಗ್ರರು ಸುಲಭವಾಗಿ ಸೇನಾ ವಾಹನ ಟಾರ್ಗೆಟ್ ಮಾಡಿದ್ದಾರೆ. ಬಳಿಕ ಅಷ್ಟೇ ಸುಲಭವಾಗಿ ಪರಾರಿಯಾಗಿರುವ ಸಾಧ್ಯತೆ ಇದೆ.
ಈ ಘಟನೆ ಕುರಿತು ಆರ್ಮಿ ಸ್ಟಾಫ್ ಜನರಲ್ ಮನೋಜ್ ಪಾಂಡೆ, ಕೇಂದ್ರ ರಕ್ಷಣಾ ಸಚಿವ ಮನೋಜ್ ಪಾಂಡೆಗೆ ಮಾಹಿತಿ ನೀಡಿದ್ದಾರೆ.ಘಟನೆಗೆ ಜಮ್ಮ ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಕೆ ಸಿನ್ಹ ಆಘಾತ ವ್ಯಕ್ತಪಡಿಸಿದ್ದಾರೆ. ದೇಶಕ್ಕಾಗಿ ಹುತಾತ್ಮರಾಗಿರುವ ಯೋಧರು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ದೇಶ ನಿಮ್ಮ ಸೇವೆಯನ್ನು ಸದಾ ಸ್ಮರಿಸಲಿದೆ ಎಂದಿದ್ದಾರೆ.
