

ಕಾರವಾರ: ಪಕ್ಷ ಕಟ್ಟಿದವರಿಗೆ ಬಿಜೆಪಿ (BJP) ಅನ್ಯಾಯ ಮಾಡಬಾರದಿತ್ತು. ಮಾಜಿ ಸಿಎಂ ಜಗದೀಶ್ ಶೆಟ್ಟರ್ಗೆ (Jagadish Shettar) ಟಿಕೆಟ್ ಕೊಡದೇ ಇರುವುದು ಸರಿಯಲ್ಲ. ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಾರೆ ಎಂದರೆ ನಾವು ಅವರನ್ನು ಸ್ವಾಗತಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಶೆಟ್ಟರ್ ಅವರಿಗೆ ಅಧಿಕೃತವಾಗಿ ಕಾಂಗ್ರೆಸ್ಗೆ ಆಹ್ವಾನ ನೀಡಿದ್ದಾರೆ.

ಹಳಿಯಾಳದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನಗೆ ಕ್ಷೇತ್ರವೇ ಇಲ್ಲ ಎಂದು ಈಶ್ವರಪ್ಪ (KS Eshwarappa) ಈ ಹಿಂದೆ ಟೀಕಿಸಿದ್ದರು. ಆದರೆ ಅದೇ ಈಶ್ವರಪ್ಪ ಅವರಿಗೆ ಈಗ ಟಿಕೆಟ್ ಇಲ್ಲದಂತಾಗಿದೆ. ನನಗೆ ರಾಜ್ಯದ ಎಲ್ಲಾ ಕ್ಷೇತ್ರದಿಂದಲೂ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದಾರೆ ಎಂದು ಕಾಲೆಳೆದರು.

ಓರ್ವ ಹಿರಿಯ ನಾಯಕ, ಮಾಜಿ ಡಿಸಿಎಂ ಈಶ್ವರಪ್ಪ ಅವರಿಗೆ ಪಕ್ಷ ಹೀಗೆ ಮಾಡಬಾರದಿತ್ತು. ಈಶ್ವರಪ್ಪ ಮಾತ್ರವಲ್ಲ, ಲಕ್ಷ್ಮಣ ಸವದಿ ಹಾಗೂ ಶೆಟ್ಟರ್ ಜೊತೆಗೆ ನಡೆದುಕೊಂಡ ರೀತಿಯೂ ಸರಿಯಲ್ಲ. ಶೆಟ್ಟರ್ ಕಾಂಗ್ರೆಸ್ (Congress) ಸೇರುವ ಬಗ್ಗೆ ಇನ್ನೂ ಮಾತನಾಡಿಲ್ಲ. ಅವರು ಪಕ್ಷಕ್ಕೆ ಬರುತ್ತಾರಾದರೆ ನಾವು ಸ್ವಾಗತ ಮಾಡುತ್ತೇವೆ. ಇನ್ನೂ ಹಲವು ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಬರುತ್ತಾರೆ ಎಂದು ಹೇಳಿಕೆ ನೀಡಿದರು.

ಶಿಗ್ಗಾಂವಿಯಲ್ಲಿ ವಿನಯ್ ಕುಲಕರ್ಣಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ನಿಲ್ಲುವುದಿಲ್ಲ. ಅಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿ ನಿಲ್ಲುತ್ತಾರೆ. ಭಾನುವಾರ ಅಥವಾ ಸೋಮವಾರ ಕಾಂಗ್ರೆಸ್ನ 3ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.