

ಬೆಂಗಳೂರು: ರಾಜಧಾನಿಯಲ್ಲಿ ಬಂಡಾಯ ನಾಯಕರ ರಾಜಕೀಯ ಚಟುವಟಿಕೆ ಗರಿಗೆದರಿದೆ. ಬಿಜೆಪಿಯಿಂದ ಟಿಕೆಟ್ ವಂಚಿತರಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಪಕ್ಷಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ (Congress) ಸೇರ್ಪಡೆ ಖಚಿತವಾಗಿದ್ದು, ಪಕ್ಷದ ನಾಯಕರಲ್ಲಿ ಮೂರು ಪ್ರಮುಖ ಬೇಡಿಕೆಗಳನ್ನಿಟ್ಟಿದ್ದಾರೆ.

ಬೆಳಗಾವಿಯಲ್ಲಿ (Belagavi) ರಮೇಶ್ ಜಾರಕಿಹೊಳಿಗೆ (Ramesh Jarkiholi) ಠಕ್ಕರ್ ಕೊಡಲು ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ. ಅದಕ್ಕಾಗಿ ಲಕ್ಷ್ಮಣ ಸವದಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತಂತ್ರ ಹೆಣೆದಿದ್ದಾರೆ. ಇಂದು ಬೆಂಗಳೂರಿಗೆ ಆಗಮಿಸಿದ ಸವದಿ ಕಾಂಗ್ರೆಸ್ ಹಿರಿಯ ನಾಯಕರಾದ ಸಿದ್ದರಾಮಯ್ಯ (Siddaramaiah), ಡಿಕೆಶಿ (DK Shivakumar), ಸುರ್ಜೇವಾಲ (Randeep Surjewala) ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಈ ವೇಳೆ ಹಲವು ಷರತ್ತುಗಳನ್ನು ‘ಕೈ’ ನಾಯಕರ ಮುಂದಿಟ್ಟರು.

ಸವದಿ ಡಿಮ್ಯಾಂಡ್ ಏನು?
ಕಾಗವಾಡ ಹಾಗೂ ಅಥಣಿ ಜವಾಬ್ದಾರಿ ನನಗೆ ಕೊಡಿ, ಕಾಂಗ್ರೆಸ್ ಗೆಲ್ಲಿಸಿಕೊಂಡು ಬರುತ್ತೇನೆ. ನಾನು ಹಾಗೂ ನನ್ನ ಮಗ ಇಬ್ಬರಿಗೂ ಟಿಕೆಟ್ ಕೊಡಿ. ಅಥಣಿ ಹಾಗೂ ಕಾಗವಾಡ ಎರಡರಲ್ಲಿ ಯಾರು ಎಲ್ಲಿ ನಿಲ್ಲಬೇಕು ಎಂಬುದನ್ನ ನಾವೇ ಚರ್ಚೆ ಮಾಡಿ ಹೇಳುತ್ತೇವೆ ಎಂದು ಕಾಂಗ್ರೆಸ್ ನಾಯಕರಲ್ಲಿ ಸವದಿ ಮೂರು ಬೇಡಿಕೆ ಇಟ್ಟಿದ್ದಾರೆ. ಸವದಿ ಡಿಮ್ಯಾಂಡ್ ಆಲಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ, ಹೈಕಮಾಂಡ್ ಜೊತೆ ಮಾತನಾಡಿ ಹೇಳುವ ಭರವಸೆ ನೀಡಿದ್ದಾರೆ.

ಹೈಕಮಾಂಡ್ ಬಳಿ ನಿಮ್ಮ ಬೇಡಿಕೆ ಮುಂದಿಟ್ಟು ಎರಡು ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತೇವೆ. ಅಕಸ್ಮಾತ್ ಕಾಗವಾಡ ಟಿಕೆಟ್ ವಿಚಾರದಲ್ಲಿ ಹೈಕಮಾಂಡ್ ಒಪ್ಪದಿದ್ದರೆ ನೀವು ಅಥಣಿಯಿಂದ ಸ್ಪರ್ಧೆ ಮಾಡಿ. ಹೈಕಮಾಂಡ್ ಒಂದೇ ಟಿಕೆಟ್ ಎಂದರೆ ಕಾಗವಾಡದಲ್ಲಿ ನೀವು ಸಹಕಾರ ಕೊಡಲೇಬೇಕು ಎಂಬ ಷರತ್ತನ್ನು ಕೈ ನಾಯಕರು ಹಾಕಿದ್ದಾರೆ.
ಸಿದ್ದರಾಮಯ್ಯ ಭೇಟಿಗೆ ಮುನ್ನ ಹೋಟೆಲ್ಅಲ್ಲಿ ಸುರ್ಜೇವಾಲ ಮತ್ತು ಡಿಕೆಶಿ ಸಭೆ ನಡೆಸಿದರು. ಬಳಿಕ ಸಿದ್ದರಾಮಯ್ಯ ಮನೆಗೆ ಆಗಮಿಸಿ ಸವದಿ ಕಾಂಗ್ರೆಸ್ ಸೇರ್ಪಡೆ ವಿಚಾರದ ಕುರಿತು ಚರ್ಚೆ ನಡೆಸಿದರು. ಇಂದು ಕಾಂಗ್ರೆಸ್ ಕಚೇರಿಯಲ್ಲಿ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರುವುದಾಗಿ ಸವದಿ ತಿಳಿಸಿದ್ದಾರೆ.