

ರಾಯ್ಪುರ: ಬಿಜೆಪಿ (BJP) ನಾಯಕರ ಹೆಣ್ಣು ಮಕ್ಕಳು ಮುಸ್ಲಿಮರನ್ನು ಮದುವೆಯಾದಾಗ ಅದನ್ನು ಅವರು ಪ್ರೀತಿ ಎಂದು ಕರೆಯುತ್ತಾರೆ, ಆದರೆ ಬೇರೆ ಯಾರಾದರೂ ಹಾಗೆ ಮಾಡಿದರೇ ಅದನ್ನು ಜಿಹಾದ್ (Jihad) ಎಂದು ಕರೆಯುತ್ತಾರೆ ಎಂದು ಛತ್ತೀಸ್ಗಢದ (Chhattisgarh) ಮುಖ್ಯಮಂತ್ರಿ ಭೂಪೇಶ್ ಬಾಘೇಲ್ (Bhupesh Baghel) ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಲವ್ ಜಿಹಾದ್ ಬಗ್ಗೆ ಮಾತನಾಡುತ್ತಾರೆ. ಬಿಜೆಪಿಯ ಹಿರಿಯ ನಾಯಕರ ಬಗ್ಗೆ ಮಾತನಾಡುವುದಾದರೆ ಅವರ ಹೆಣ್ಣುಮಕ್ಕಳು ಮುಸ್ಲಿಮರನ್ನು ಮದುವೆಯಾಗಿದ್ದಾರೆ. ಇದು ಲವ್ ಜಿಹಾದ್ ವರ್ಗಕ್ಕೆ ಸೇರುವುದಿಲ್ಲವೇ? ಛತ್ತೀಸ್ಗಢದ ಬಿಜೆಪಿಯ ದೊಡ್ಡ ನಾಯಕನ ಮಗಳು ಎಲ್ಲಿ ಹೋದಳು ಎಂದು ಕೇಳುತ್ತೀರಿ. ಅದು ಲವ್ ಜಿಹಾದ್ ಅಲ್ಲವೇ? ಅವರ ಮಗಳು ಅದನ್ನು ಮಾಡಿದರೆ ಅದು ಪ್ರೀತಿ ಆದರೆ ಬೇರೆಯವರು ಅದನ್ನು ಮಾಡಿದಾಗ ಲವ್ ಜಿಹಾದ್ ಆಗುತ್ತದೆಯೇ ಎಂದು ಕಿಡಿಕಾರಿದರು.

ಬಿಜೆಪಿ ದ್ವಿಗುಣ ನೀತಿಯನ್ನು ಹೊಂದಿದೆ. ಬೆಮೆತಾರಾ ಜಿಲ್ಲೆಯ ಬಿರಾನ್ಪುರ ಗ್ರಾಮದಲ್ಲಿ ಕಳೆದ ವಾರ ನಡೆದ ಕೋಮು ಹಿಂಸಾಚಾರದ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು
ಕೆಲವು ಅಂತರ್ಧರ್ಮೀಯ ವಿವಾಹಗಳ ನಂತರ ಬಿರಾನ್ಪುರದಲ್ಲಿ ಉದ್ವಿಗ್ನತೆ ಉಂಟಾಗಿದೆ ಎಂಬ ಬಿಜೆಪಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯು ಈ ಘರ್ಷಣೆಯನ್ನು ಪರೀಶಿಲಿಸಿಲ್ಲ. ಜೊತೆಗೆ ಬಂದ್ಗೆ ಕರೆ ನೀಡುವ ಮೊದಲು ಯಾವುದೇ ವರದಿಯನ್ನು ನೀಡಲಿಲ್ಲ. ಇಬ್ಬರು ಮಕ್ಕಳ ನಡುವಿನ ಜಗಳ ಘರ್ಷಣೆಗೆ ಕಾರಣವಾಯಿತು. ಇದು ದುಃಖಕರವಾದ ಸಂಗತಿಯಾಗಿದೆ. ಆದರೆ ಬಿಜೆಪಿ ತನ್ನ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಕಿಡಿಕಾರಿದರು.
