

ಕಳ್ಳತನ ಮಾಡಿದ ಎಂದು ವ್ಯಕ್ತಿಯನ್ನು ಕೋಣೆಯಲ್ಲಿ ಕೂಡಿಟ್ಟು ಹಲ್ಲೆ ನಡೆಸಿ, ಒಂದು ವಾರದ ಹಿಂಸೆ ತಾಳಲಾರದೆ ವ್ಯಕ್ತಿ ಮೃತಪಟ್ಟ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರು (ಏ.10): ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಕಳ್ಳತನ ಮಾಡಿದ ಎಂದು ವ್ಯಕ್ತಿಯನ್ನು ಕೋಣೆಯಲ್ಲಿ ಕೂಡಿಟ್ಟು ಹಲ್ಲೆ ನಡೆಸಲಾಗಿದೆ. ಒಂದು ವಾರ ರೂಂನಲ್ಲಿ ವ್ಯಕ್ತಿಯನ್ನು ಬಂಧಿಸಿಟ್ಟು ಮನಬಂದಂತೆ ಹಲ್ಲೆ ನಡೆಸಿದೆ. ಈ ಕಿರುಕುಳಕ್ಕೆ ತಾಳಲಾರದೆ ವ್ಯಕ್ತಿ ರೂಂನಲ್ಲೇ ಸಾವನ್ನಪ್ಪಿದ್ದಾನೆ. ಕೆ.ಜೆ.ಹಳ್ಳಿ ಬಳಿಯ ವೆಂಕಟೇಶಪುರದಲ್ಲಿ ಈ ಘಟನೆ ನಡೆದಿದ್ದು, ಸೈಫುಲ್ಲಾ (35) ಎಂಬಾತ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ.

ಹಲ್ಲೆಯ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿದು ದುಷ್ಕರ್ಮಿಗಳು ಈ ವಿಕೃತಿ ಮೆರೆದಿದ್ದಾರೆ. ಸೈಫುಲ್ಲಾ ವೆಂಕಟೇಶಪುರ ಗೋಡಾನ್ ನಲ್ಲಿ ಕಳ್ಳತನ ಮಾಡಿದ ಆರೋಪಕ್ಕೆ ಕೆಜಿ ಹಳ್ಳಿಯ ವೆಂಕಟೇಶಪುರಂ ರೂಂನಲ್ಲಿ ಕೂಡಿಟ್ಟು ಹಲ್ಲೆ ಮಾಡಲಾಗಿದೆ. ಒಂದು ವಾರ ಕೂಡಿಟ್ಟು ಹಲ್ಲೆ ಮಾಡಿದ್ದರಿಂದ ಸೈಫುಲ್ಲಾ ಕೊನೆಯುಸಿರೆಳೆದಿದ್ದಾನೆ. ಆತ ಮೃತಪಟ್ಟ ಬಳಿಕ ಶವವನ್ನ ಸಾದಹಳ್ಳಿ ಬ್ರಿಡ್ಜ್ ಮೋರಿಯಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಬಳಿಕ ಶವ ಎಸೆದು ತಾವೇ ದೂರು ನೀಡಲು ಆರೋಪಿಗಳು ಮುಂದಾಗಿದ್ದಾರೆ. ಆರೋಪಿ ಜಬೀ ಇಂದ ಮಿಸ್ಸಿಂಗ್ ಕೇಸ್ ದಾಖಲಿಸಲು ಯತ್ನ ನಡೆದಿದೆ. ಈ ವೇಳೆ ಮೃತನ ತಾಯಿಯಿಂದಲೂ ದೂರು ದಾಖಲಾಗಿದೆ. ಈ ವೇಳೆ ಎರಡು ಒಂದೇ ಕೇಸ್ ಎಂಬುದು ಪೊಲೀಸರ ಗಮನಕ್ಕೆ ಬಂದಿದೆ. ಈ ವೇಳೆ ಜಬೀಯನ್ನ ರಾಮಮೂರ್ತಿನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ
.ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಆರೋಪಿಗಳ ಮೊಬೈಲ್ ಪರಿಶೀಲನೆ ವೇಳೆ ಹಲ್ಲೆ ವಿಡಿಯೋಗಳು ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿ ಕೂಡಿಟ್ಟ ವಿಡಿಯೋಗಳು ಸಿಕ್ಕಿವೆ. ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ಪ್ರಶಾಂತ್, ಜಬೀ, ಬಬನ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು ತನಿಖೆ ಮುಂದುವರೆದಿದೆ
