

ರಾಮನಗರ: ಗೋವು ಸಾಗಾಣಿಕೆ ವೇಳೆ ಮುಸ್ಲಿಂ ವ್ಯಕ್ತಿ ಯನ್ನು ಹತ್ಯೆಗೈದ ಪ್ರಕರಣ ಸಂಬಂಧ ಸಾತನೂರು ಪೊಲೀಸರು (Sathanoor Police) ಕಾರ್ಯಾಚರಣೆ ನಡೆಸಿ ಪ್ರಕರಣದ ಐವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಐದು ದಿನಗಳಿಂದ ತಲೆಮರೆಸಿಕೊಂಡಿದ್ದ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ (Puneeth Kerehalli) ಸೇರಿ ಐವರು ಆರೋಪಿಗಳನ್ನ ರಾಜಸ್ಥಾನದಲ್ಲಿ ಬಂಧಿಸಿ ರಾಮನಗರಕ್ಕೆ ಕರೆತರಲು ಸಿದ್ಧತೆ ನಡೆಸಿದ್ದಾರೆ.

ಏ.1 ರಂದು ಪುನಿತ್ ಕೆರೆಹಳ್ಳಿ ಮೇಲೆ ದೂರು ದಾಖಲಾದ ಬಳಿಕ ಆತ ನಾಪತ್ತೆಯಾಗಿದ್ದ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಅಪ್ಲೋಡ್ ಮಾಡಿ ನಾನು ದೇವಾಲಯಕ್ಕೆ ಬಂದಿದ್ದೇನೆ. ಓಡಿಹೋಗಿಲ್ಲ ಎಂದು ಹೇಳಿಕೆಯನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಿದ್ದ. ಆತನನ್ನು ಬಂಧಿಲು ಒಟ್ಟು 4 ತಂಡಗಳನ್ನು ರಚನೆ ಮಾಡಿದ್ದ ಜಿಲ್ಲಾ ಪೊಲೀಸರು ಮೊದಲು ಹುಬ್ಬಳ್ಳಿ, ಮಹಾರಾಷ್ಟ್ರ, ಗುಜರಾತ್, ಸೂರತ್ಗಳಲ್ಲಿ ಸುತ್ತಾಡಿ, ರಾಜಸ್ಥಾನದಲ್ಲಿ ಓಡಾಡುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಬಳಿಕ ರಾಜಸ್ಥಾನ ಪೊಲೀಸರ ಸಹಾಯದಿಂದ ರಾಜಸ್ಥಾನದ ಗಡಿ ಜಿಲ್ಲೆ ಬನಸ್ವಾರ ಎಂಬಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಪುನೀತ್ ಕೆರೆಹಳ್ಳಿ ಸೇರಿ ರಾಮನಗರದ ಗೋಪಿ, ತೀರ್ಥಹಳ್ಳಿಯ ಪವನ್ ಕುಮಾರ್, ಬಸವನಗುಡಿಯ ಪಿಲ್ಲಿಂಗ್ ಅಂಬಿಗಾರ್, ರಾಯಚೂರಿನ ಸುರೇಶ್ ರನ್ನ ಬಂಧಿಸಲಾಗಿದೆ. ಅಲ್ಲಿನ ನ್ಯಾಯಾಲಯದ ಅನುಮತಿ ಬಳಿಕ ಆರೋಪಿಗಳನ್ನು ರಾಜ್ಯಕ್ಕೆ ಕರೆತರಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ.


ಮಂಡ್ಯದಿಂದ ತಮಿಳುನಾಡಿನ ಕಡೆಗೆ ಗೋವುಗಳನ್ನು ಸಾಗಿಸಲಾಗುತ್ತಿತ್ತು. . ಈ ಬಗ್ಗೆ ಕೂಡಾ ತನಿಖೆ ಮುಂದುವರಿದಿದೆ. ಅಲ್ಲದೇ ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಕೊಲೆ ಹಾಗೂ ನೈತಿಕ ಪೊಲೀಸ್ ಗಿರಿ ಪ್ರದರ್ಶನಕ್ಕೆ ಪುನಿತ್ ಕೆರೆಹಳ್ಳಿ ಮೇಲೆ ಪ್ರಕರಣವನ್ನೂ ಸಹ ದಾಖಲಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. ಇನ್ನೂ ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದ ಪೊಲೀಸರಿಗೆ 1 ಲಕ್ಷ ಬಹುಮಾನ ನೀಡುವುದಾಗಿ ಎಸ್ಪಿ ಕಾರ್ತಿಕ್ ರೆಡ್ಡಿ ಘೋಷಿಸಿದ್ದಾರೆ.

ಆರೋಪಿ ಬಂಧನ ಕುರಿತು ಮಾತನಾಡಿದ ಮುಸ್ಲಿಂ ಮುಖಂಡ ಮುಸಾರ್ವಿ ಖಾನ್, ಗೋವುಗಳನ್ನು ಸಾಗಿಸುವುದಕ್ಕೆ ಎಲ್ಲ ದಾಖಲೆಗಳಿದ್ದವು. ಪುನೀತ್ ಕೆರೆಹಳ್ಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಬಳಿಕ ಈತ ಕರೆಂಟ್ ನೀಡಿ ಇದ್ರೀಶ್ ಪಾಷನನ್ನು ಹತ್ಯೆ ಮಾಡಿದ್ದಾನೆ. ಈತನ ಹಿಂದೆ ಕಾಣದ ಶಕ್ತಿಗಳು ಕೆಲಸ ಮಾಡುತ್ತಿವೆ. ಹಿಂದೂ -ಮುಸ್ಲಿಮರುಗಳು ಅಣ್ಣತಮ್ಮರಂತೆ ಬಾಳುತ್ತಿದ್ದೇವೆ. ಕೆಲವರು ಸಮಾಜದ ಸಾಮರಸ್ಯ ಹಾಳು ಮಾಡುತ್ತಿದ್ದಾರೆ. ಇಂತಹವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದಿದ್ದಾರೆ.