

ನವದೆಹಲಿ: ಕಾಂಗ್ರೆಸ್ (Congress) ನಾಯಕರ ಮೇಲೆ ಐಟಿ, ಇಡಿ ದಾಳಿ ನಡೆಯಲಿದೆ. ಈಗಾಗಲೇ ಅಧಿಕಾರಿಗಳು ಹೊರಟಿದ್ದಾರೆ. ನಾಳೆ ಐಟಿ, ಇಡಿ, ಸಿಬಿಐ ದುರ್ಬಳಕೆ ಆರಂಭವಾಗಲಿದೆ ಎಂದು ಕಾಂಗ್ರೆಸ್ ನಾಯಕರು ಸುದ್ದಿಗೋಷ್ಠಿ ನಡೆಸಿ ಬಿಜೆಪಿ (BJP) ಸರ್ಕಾರದ ವಿರುದ್ಧ ಆರೋಪ ಹೊರಿಸಿ ಕಿಡಿಕಾರಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah), ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar), ರಣದೀಪ್ ಸುರ್ಜೆವಾಲ (Randeep Surjewala) ಜಂಟಿಯಾಗಿ ತುರ್ತು ಸುದ್ದಿಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಾಯಕರು ಹೇಳಿದ್ದೇನು?
ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಬೆಂಬಲಿಗರ ಮನೆ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆದಿದೆ. ದೆಹಲಿಯಿಂದ ಸಾವಿರಾರು ಅಧಿಕಾರಿಗಳು ಈಗಾಗಲೇ ಹೊರಟಿದ್ದಾರೆ. ನಿಮ್ಮಲ್ಲಿ ಎಷ್ಟು ದಮ್ ಇದೆ ಅಷ್ಟು ಪ್ರಯತ್ನ ಮಾಡಿ. ಕಾಂಗ್ರೆಸ್ ನಾಯಕರು ಹೆದರುವುದಿಲ್ಲ.
ನಮ್ಮ ಬೆಂಬಲಕ್ಕೆ ಇರುವ ಹಿತೈಷಿಗಳಲ್ಲಿ ನಮಗೆ ಸಹಾಯ ಮಾಡದಂತೆ ಹೆದರಿಸಿದ್ದಾರೆ. ಯಾವ ವಿಚಾರ ಮಾತನಾಡುವುದಕ್ಕೂ ಹೆದರುತ್ತಿದ್ದಾರೆ. ನಮಗೂ ಕಾಲ ಬರುತ್ತದೆ. ಸೋಲುವ ಭಯದಲ್ಲಿ ನಮಗೂ ಭಯ ಸೃಷ್ಟಿಸಲು ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಬಿಜೆಪಿಗೆ ಸೋಲುವ ಭೀತಿ ಆರಂಭವಾಗಿದೆ. ಎಲ್ಲಾ ಸರ್ವೆಗಳು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಬಹಳಷ್ಟು ನಾಯಕರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಬಿಜೆಪಿ ನಾಯಕರಿಗೆ ಸೋಲಿನ ಬಗ್ಗೆ ಗೊತ್ತಿದೆ. ಅವರು ಅಧಿಕಾರಕ್ಕೆ ಬರುವುದಿಲ್ಲ. ಹಿಂದುತ್ವ ಮತ್ತು ದ್ವೇಷ ರಾಜಕಾರಣವನ್ನು ಜನರು ತಿರಸ್ಕರಿಸಿದ್ದಾರೆ. ಹಣದ ಶಕ್ತಿಯಿಂದ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ನಾಯಕರು ವಾಗ್ದಾಳಿ ನಡೆಸಿದರು.