

ಈಶ್ವರಪ್ಪ ಪ್ರಬುದ್ಧ ರಾಜಕಾರಣಿ ಜವಾಬ್ದಾರಿಯಿಂದ ಮಾತಾಡಬೇಕು
ಹರಕು ಬಾಯಿಗೆ ಹೊಲಿಗೆ ಬಿದ್ದು ಶಿವಮೊಗ್ಗದಲ್ಲಿ ಶಾಂತಿ ನೆಲೆಸಲಿ
ಈಶ್ವರಪ್ಪನ ನಂತರ ಶಿವಮೊಗ್ಗ ಟಿಕೆಟ್ಗೆ ನಾನು ಕ್ಯೂನಲ್ಲಿದ್ದೇನೆ
ಶಿವಮೊಗ್ಗ (ಮಾ.21): ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಬದಲಿಗೆ ನಾನು ಆಯನೂರು ಮಂಜುನಾಥ್ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.

ಯುಗಾದಿ ಹಾಗೂ ರಂಜಾನ್ಗೆ ಶುಭಕೋರಿ ಶಿವಮೊಗ್ಗ ನಗರದಾದ್ಯಂತ ಆಯನೂರು ಮಂಜುನಾಥ್ ಹೆಸರಲ್ಲಿ ಫ್ಲೆಕ್ಸ್ಗಳನ್ನು ಹಾಕಲಾಗಿದೆ. ಅದರಲ್ಲಿ ‘ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ. ಮುರಿದ ಮನಸ್ಸುಗಳ ಬೆಸುಗೆಯಾಗಲಿ. ಶಿವಮೊಗ್ಗದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಲಿ’ ಎಂದು ಉಲ್ಲೇಖಿಸಲಾಗಿದೆ. ಆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಮತ್ತು ಬಿಜೆಪಿಯ ನಡುವೆ ನಾನು ಉರಿಗೌಡನೂ ಅಲ್ಲ. ನಂಜೇಗೌಡನೂ ಅಲ್ಲ. ಬದಲಿಗೆ ನಾನು ಆಯನೂರು ಮಂಜುನಾಥ್. ಯಾರ ಬಾಯಲ್ಲಿ ನಂಜು ಬರುತ್ತದೆಯೋ ಅವರನ್ನು ನಂಜೇಗೌಡ ಅನ್ನಿ. ಯಾರು ನನ್ನ ಮಾತು ಕೇಳಿ ಉರಿಬೀಳುತ್ತಾರೊ ಅವರಿಗೆ ಉರಿಗೌಡ ಅನ್ನಿಎಂದು ಹೇಳಿದರು.

ಈಶ್ವರಪ್ಪ ಜವಾಬ್ದಾರಿಯಿಂದ ಮಾತನಾಡಬೇಕು: ಯಾವುದೋ ಧರ್ಮದ ದೇವರು ಕಿವುಡನೇ, ಕುರುಡನೇ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಮಾತಾಡುವುದು ಬೇಡ. ಅವರೊಬ್ಬ ಪ್ರಬುದ್ಧ ರಾಜಕಾರಣಿ. ಜವಾಬ್ದಾರಿಯಿಂದ ಮಾತಾಡಬೇಕು ಎಂಬ ನಿರೀಕ್ಷೆ ನನಗೂ ಇದೆ. ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ ಎಂದು ಬಹುವಚನ ಬಳಸಲಾಗಿದೆ. ಹೀಗಾಗಿ ಆ ಮಾತನ್ನು ಈಶ್ವರಪ್ಪ ಒಬ್ಬರಿಗೇ ಅನ್ವಯಿಸುವುದು ಸರಿಯಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾರ್ಥನೆ ಮಾಡಲು ಮುಂದಾಗುವವರಿಗೂ ಅದು ಅನ್ವಯಿಸುತ್ತದೆ ಎಂದರು.
ಮಾತಿನಲ್ಲಿ ತಿದ್ದಿಕೊಳ್ಳುವುದು ಒಳ್ಳೆಯದು: ಬಿಜೆಪಿಗೆ ಧಕ್ಕೆ ಬರುವ ಯಾವುದೇ ಮಾತುಗಳನ್ನು ಯಾವುದೇ ನಾಯಕರು ಹೇಳಿದರೂ ಅದನ್ನು ಸ್ವೀಕಾರ ಮಾಡಬೇಕೆಂಬ ಬಲವಂತ ನಮಗೆ ಯಾರಿಗೂ ಇಲ್ಲ. ಸಂಘಟನೆಯ ಹಿತದೃಷ್ಟಿಯಿಂದ ಈಶ್ವರಪ್ಪ ಹೀಗೆ ಮಾತಾಡುವುದು ಸರಿಯಲ್ಲ. ಜವಾಬ್ದಾರಿಯಿಂದ ಮಾತಾಡಿ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ? ಈಶ್ವರಪ್ಪ ಹಾಗೆ ಮಾತಾಡಿದ್ದರೆ ತಿದ್ದಿಕೊಳ್ಳುವುದು ಒಳ್ಳೆಯದು. ಸಣ್ಣ ಘಟನೆ ನಡೆದರೂ ಶಿವಮೊಗ್ಗದಲ್ಲಿ ಏನಾಗುತ್ತದೆ ಎಂಬುದು ಊಹಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದರು.

ಈಶ್ವರಪ್ಪನ ಮಗ ಇನ್ನೂ ಚಿಕ್ಕವನಿದ್ದಾನೆ: ನನಗೆ ಮದುವೆ ಆಗೋಕೆ ನಿಮ್ಮ ಮನೆಯಲ್ಲೇ ಹೆಣ್ಣು ಕೊಡುತ್ತಾರೆ, ಅಂದರೆ ಪಕ್ಕದ ಮನೆಯಲ್ಲಿ ನಾನು ಯಾಕೆ ನೋಡಲಿ. ಅಥವಾ ರಸ್ತೆಯಲ್ಲಿ ಹೋಗುವವರನ್ನು ನಾನು ಯಾಕೆ ನೋಡಲಿ. ಶಿವಮೊಗ್ಗ ನಗರ ಕ್ಷೇತ್ರದಿಂದ ನನಗೆ ಬಿಜೆಪಿ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿದೆ. ಮತ್ತೊಂದೆಡೆ, ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ಈಶ್ವರಪ್ಪ ಕೇಳಿದ್ದಾರೆ. ನಿಮ್ಮ ಮಗ ಇನ್ನೂ ಚಿಕ್ಕವನಿದ್ದಾನೆ. ನಂತರ ಕೊಡಿ. ಕ್ಯೂನಲ್ಲಿ ನಾವು ಇದ್ದೇವೆ ಎಂದು ಹೇಳಿದ್ದೇನೆ. ಶಿವಮೊಗ್ಗದಲ್ಲಿ ಈಶ್ವರಪ್ಪ ಆಕಾಂಕ್ಷಿಯಲ್ಲ. ಅವರ ಪುತ್ರ ಆಕಾಂಕ್ಷಿ ಎಂಬ ವಾತಾವರಣ ಇರೋದರಿಂದ. ಅವರ ಮಧ್ಯೆ ನನಗೊಂದು ಸಣ್ಣ ಅವಕಾಶ ಸಿಗಲಿ ಎಂದು ಕೇಳಿದ್ದೇನೆ’ ಎಂದರು.

ಪಕ್ಷ ಸರಿಮಾಡಲು ನೈಜ ಬಡಿದಾಟ: ಇನ್ನು ಬಿಜೆಪಿ ತ್ಯಜಿಸಲಿದ್ದೀರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಷ್ಠುರವಾಗಿ ಮಾತನಾಡಿದ ಕೂಡಲೇ ಆಯನೂರು ಅಲ್ಲಿಗೆ ಹೋಗುತ್ತಾರೆ, ಇಲ್ಲಿಗೆ ಹೋಗುತ್ತಾರೆ ಅನ್ನುತ್ತಾರೆ. ಪಕ್ಷವನ್ನು ಸರಿ ಮಾಡಬೇಕು ಎಂದು ನೈಜ ಬಡಿದಾಟ ಮಾಡುತ್ತೇನೆ. ಅದಕ್ಕೆ ಏನೇನೊ ಅರ್ಥ ಕೊಟ್ಟರೆ ಅದಕ್ಕೆ ನಾನು ಹೊಣೆಗಾರನಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಆಯನೂರು ಮಂಜುನಾಥ್ ತಿರುಗೇಟು ನೀಡಿದರು.