

ಹುಬ್ಬಳ್ಳಿ: ಸದ್ಯ ರಾಜ್ಯದಲ್ಲಿ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ಮನೆಯಲ್ಲಿ ಸಿಕ್ಕ ಕೋಟಿ ಹಣದ್ದೆ ಸುದ್ದಿಯಾಗಿದೆ. ಇದೀಗ ಲೋಕಾಯುಕ್ತಕ್ಕೆ ಮರು ಜೀವ ಬಂದ ಬೆನ್ನಲ್ಲೇ ಈ ದಾಳಿ ಮತ್ತೆ ಲೋಕಾಯುಕ್ತದ ಶಕ್ತಿಯನ್ನು ಸಾಬೀತು ಮಾಡಿದೆ. ಹೌದು ಒಂದು ಕಡೆ ಈ ಪ್ರಕರಣ ತೀವ್ರ ತನಿಖೆಯಲ್ಲಿರುವ ಹೊತ್ತಿನಲ್ಲಿಯೇ, ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲೂ ಸಹ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ಹುಬ್ಬಳಿಯ ಪ್ರತಿಷ್ಠಿತ ಉದ್ಯಮಿ ಮನೆಯಲ್ಲಿ ಆದಾಯ ಮೂಲವಿಲ್ಲದ 3 ಕೋಟಿ ಹಣ ಪತ್ತೆಯಾಗಿದೆ. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

ಮಾರ್ಚ್ 3 ರ ರಾತ್ರಿ ಖಚಿತ ಮಾಹಿತಿ ಮೇರೆಗೆ ಹುಬ್ಬಳಿ ಧಾರವಾಡ ಸಿಸಿಬಿ ಪೊಲೀಸರು ಪ್ರತಿಷ್ಠಿತ ಉದ್ಯಮಿ ರಮೇಶ್ ಬೊಣಗೇರಿಯವರ ಭವಾನಿ ನಗರದ ಮನೆಯ ಮೇಲೆ ದಾಳಿ ಮಾಡಿದ್ದು, ದಾಳಿಯ ಸಮಯದಲ್ಲಿ ಪೊಲೀಸರ ನಿರೀಕ್ಷೆಗೂ ಮೀರಿದ 3 ಕೋಟಿ ಹಣ ಪತ್ತೆಯಾಗಿದೆ. ಆದರೆ ಇಲ್ಲಿಯವರೆಗೆ ಹಣದ ಆದಾಯದ ಮೂಲ ಮಾತ್ರ ಬಯಲಿಗೆ ಬಂದಿಲ್ಲ. ಉದ್ಯಮಿ ರಮೇಶ್ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನ ಮಾರಾಟ ಮಾಡುವ ವ್ಯಾಪಾರಿಯಾಗಿದ್ದಾನೆ. ಜೊತೆಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆಗೂ ಸಹ ಬಿಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಸರಬರಾಜು ಮಾಡುತ್ತಿದ್ದಾರೆ. ಇವರ ಮನೆಯಲ್ಲಿ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿಟ್ಟುಕೊಂಡಿರುವ ಮಾಹಿತಿ ಬಂದ ಬೆನ್ನಲ್ಲೇ ಸಿಸಿಬಿ ಆರ್ಥಿಕ ಅಪರಾಧದ ವಿಭಾಗದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಹಣ ಮಾತ್ರ ವಶಪಡಿಸಿಕೊಂಡಿರುವ ಪೊಲೀಸರು, ಹಣ ಮೂಲದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಇನ್ನು ಇದು ಸದ್ಯ ಸಿವಿಲ್ ಪ್ರಕರಣವಾಗಿರುವ ಹಿನ್ನಲೆ, ಪೊಲೀಸರು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಆದಾಯ ತೆರಿಗೆ ಅಧಿಕಾರಿಗಳು ಸಿಸಿಬಿ ಪೊಲೀಸರ ಜೊತೆಗೆ ಸೇರಿ ಹಣದ ಮೂಲ ಕುರಿತು ತನಿಖೆ ಆರಂಭಿಸಿದ್ದು, ಒಂದೇ ವೇಳೆ ಹಣದ ಮೂಲ ಅಪರಾಧದ ಮೂಲ ಹೊಂದಿರುವ ಬಗ್ಗೆ ಖಚಿತವಾದರೆ, ಉದ್ಯಮಿ ರಮೇಶ್ ಬಂಧನವಾಗುವ ಸಾಧ್ಯತೆಯಿದೆ. ಇನ್ನು ಲೋಕಾಯುಕ್ತ ದಾಳಿಯ ಬೆನ್ನಲ್ಲೇ ಹುಬ್ಬಳಿ ಧಾರವಾಡ ಸಿಸಿಬಿ ಪೊಲೀಸರು ಈ ಮಹತ್ವದ ಪ್ರಕರಣ ಬೆಳಕಿಗೆ ತಂದಿರುವುದಕ್ಕೆ ಅಧಿಕಾರಿಗಳಿಗೆ ಕಮಿಷನರ್ ರಮಣಗುಪ್ತಾ ಅಭಿನಂದನೆ ಸಲ್ಲಿಸಿ 25 ಸಾವಿರ ನಗದು ಹಣ ಬಹುಮಾನ ಘೋಷಣೆ ಮಾಡಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಹೊತ್ತಿನಲ್ಲಿ ಕೋಟಿ ಕೋಟಿ ಪತ್ತೆಯಾಗುತ್ತಿದ್ದು, ಹಲವು ಅನುಮಾನಗಳನ್ನು ಹುಟ್ಟುಹಾಕುತ್ತಿರುವುದಂತು ಸತ್ಯ.