

ಬೆಂಗಳೂರು: ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ, BWSSB ಮುಖ್ಯ ಲೆಕ್ಕಾಧಿಕಾರಿ ಮಾಡಾಳ್ ಪ್ರಶಾಂತ್ ಕಚೇರಿಯಲ್ಲಿ ಮೇಲೆ ನಡೆದಿದ್ದ ಲೋಕಾಯುಕ್ತ ದಾಳಿ ಅಂತ್ಯವಾಗಿದೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿಯಲ್ಲಿ ನಿನ್ನೆ(ಮಾ.02) ಸಂಜೆ 6.30ಕ್ಕೆ ಪ್ರಶಾಂತ್ 40 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ದಾಳಿ ಮಾಡಿತ್ತು. ಬಳಿಕ ಕಚೇರಿಯಲ್ಲಿ ಶೋಧ ಕಾರ್ಯ ಆರಂಭಿಸಿತ್ತು. ಅದು ಇಂದು (ಮಾ.03) ಬೆಳಗ್ಗೆ 4 ಗಂಟೆಗೆ ಅಂತ್ಯವಾಗಿದೆ. ಒಟ್ಟು 9 ಗಂಟೆ 30 ನಿಮಿಷಗಳ ಕಾಲ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದು, ಈ ವೇಳೆ ಕಚೇರಿಯಲ್ಲಿದ್ದ ಹಲವು ದಾಖಲೆ ಹಾಗೂ ಒಂದೂ ಮುಕ್ಕಾಲು ಕೋಟಿ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಪ್ರಶಾಂತ್ ಮಾಡಾಳ್ ಸೇರಿ ಐವರನ್ನು ಬಂಧಿಸಲಾಗಿದೆ.

ಶಾಸಕರ ಮನೆಯಲ್ಲಿ ಮುಂದುವರಿದ ಪರಿಶೀಲನೆ
ಇನ್ನು ಪ್ರಶಾಂತ್ ಅವರ ತಂದೆ, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ ಮುಂದುವರೆದಿದೆ. ಬೆಂಗಳೂರಿನ ಸಂಜಯನಗರ ಬಳಿ ಇರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಒಡೆತನದ ಕೆ.ಎಂ.ವಿ ಮಾನ್ಷಿಯನ್ ನಿವಾಸದಲ್ಲಿ ಡಿವೈ ಎಸ್ಪಿ ನೇತೃತ್ವದಲ್ಲಿ ಪರಿಶೀಲನೆ ನಡೆಯುತ್ತಿದೆ.
ಟೆಂಡರ್ ಕೊಡಿಸುವ ವಿಚಾರದಲ್ಲಿ ಗುತ್ತಿಗೆದಾರನಿಂದ 80 ಲಕ್ಷಕ್ಕೂ ಹೆಚ್ಚು ಹಣಕ್ಕೆ ಡಿಮ್ಯಾಂಡ್ ಮಾಡಿದ್ದು, ಮುಂಗಡವಾಗಿ 40 ಲಕ್ಷಕ್ಕೂ ಹೆಚ್ಚು ಹಣ ಪಡೆದುಕೊಳ್ಳುವ ಸಂದರ್ಭದಲ್ಲಿ ಲೋಕಾಯುಕ್ತ ದಾಳಿ ನಡೆಸಿತ್ತು. ಶಾಸಕರ ಪುತ್ರ ಪ್ರಶಾಂತ್ BWSSB ಮುಖ್ಯ ಲೆಕ್ಕಾಧಿಕಾರಿಯಾಗಿದ್ದಾರೆ. KSDL ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನೀಡಲು ಲಂಚಕ್ಕೆ ಬೇಡಿಯಿಟ್ಟಿದ್ದರು ಎನ್ನಲಾಗುತ್ತಿದೆ. ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ವಿರೂಪಾಕ್ಷಪ್ಪ ಕಚೇರಿಯಲ್ಲಿ 3 ಬ್ಯಾಗ್ಗಳಲ್ಲಿ 2 ಸಾವಿರ ರೂ. ಮತ್ತು 500 ರೂಪಾಯಿ ಕಂತೆ ಕಂತೆ ನೋಟುಗಳು ಪತ್ತೆ ಆಗಿವೆ. ಮಾಡಾಳ್ ಪ್ರಶಾಂತ್ ಕಚೇರಿ ಕಲೆಕ್ಷನ್ ಸೆಂಟರ್ ಆಗಿರುವ ಶಂಕೆ ವ್ಯಕ್ತವಾಗಿದೆ.

2008ರಲ್ಲಿ ತಂದೆ ಆದಾಯ ಕೇವಲ 1.2 ಲಕ್ಷ ರೂಪಾಯಿ ತೋರಿಸಿ 3ಬಿ ಮೀಸಲಾತಿ ಗಿಟ್ಟಿಸಿ ಕೆಎಎಸ್ನಲ್ಲಿ ತೇರ್ಗಡೆ ಆಗಿದ್ದ ಮಾಡಾಳ್ ಪ್ರಶಾಂತ್ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ. ಮಾಡಾಳ್ ವಿರೂಪಾಕ್ಷಪ್ಪಗೆ ಮೂವರು ಗಂಡು ಮಕ್ಕಳಿದ್ದು, ಮೂವರು ಗಂಡು ಮಕ್ಕಳ ಪೈಕಿ ಪ್ರಶಾಂತ್ ಎರಡನೇ ಪುತ್ರ. ಈ ಹಿಂದೆ ನಡೆದಿರುವ KSDLನ ಟೆಂಡರನಲ್ಲೂ ಅವ್ಯವಹಾರ ಶಂಕೆ ವ್ಯಕ್ತವಾಗಿದೆ. ಕಚೇರಿಯಲ್ಲಿರುವ ಎಲ್ಲ ಹಣವನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.