

ಲಕ್ನೋ: ಬಿಎಸ್ಪಿ (BSP) ನಾಯಕ ರಾಜು ಪಾಲ್ ಕೊಲೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಯೊಬ್ಬ ಎನ್ಕೌಂಟರ್ನಲ್ಲಿ ಹತ್ಯೆಯಾಗಿದ್ದಾನೆ. ಉತ್ತರ ಪ್ರದೇಶದ ವಿಶೇಷ ಪೊಲೀಸ್ ಪಡೆ ಹಾಗೂ ಜಿಲ್ಲಾ ಪೊಲೀಸರು ಪ್ರಯಾಗ್ರಾಜ್ನ ನೆಹರು ಪಾರ್ಕ್ನಲ್ಲಿ (Nehru Park) ನಡೆಸಿದ ಗುಂಡಿನ ದಾಳಿಯಲ್ಲಿ ಆರೋಪಿ ಅರ್ಬಾಜ್ ಸಾವಿಗೀಡಾಗಿದ್ದಾನೆ.

ಇದುವರೆಗೂ ಪೊಲೀಸರು ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಮಾಜಿ ಸಂಸದ ಅತಿಕ್ನ ಸಂಬಂಧಿಕರು ಸೇರಿ 40 ಜನರನ್ನ ವಶಕ್ಕೆ ಪಡೆದು ಅಹಮದಾಬಾದ್ನ ಸಬರಮತಿ ಜೈಲಿನಲ್ಲಿ ವಿಚಾರಣೆ ನಡೆಸಿದ್ದಾರೆ.
ಉಮೇಶ್ ಪಾಲ್ ಕೊಲೆಯ ನಂತರ ಪತ್ನಿ ಜಯಾ ಪಾಲ್ ಪ್ರಯಾಗ್ರಾಜ್ ಪೊಲೀಸ್ ಠಾಣೆಯಲ್ಲಿ ಅತಿಕ್ ಅಹಮ್ಮದ್ ಅವರ ಸಹೋದರ, ಪತ್ನಿ ಸಹಿಸ್ತಾ ಫರ್ವಿನ್ ಹಾಗೂ ಮಗ ಅಹಜಾನ್ ಮತ್ತು ಅಬ್ಬಾನ್ ವಿರುದ್ಧ ದೂರು ದಾಖಲಿಸಿದ್ದರು.

ಫೆ. 24 ರಂದು ಪ್ರಯಾಗ್ರಾಜ್ನಲ್ಲಿ ಹುಂಡೈ ಕ್ರೇಟಾ ಎಸ್ಯುವಿ (Hyundai Creta SUV) ಕಾರಿನ ಹಿಂಬದಿ ಸೀಟಿನಿಂದ ಇಳಿಯುತ್ತಿದ್ದ ಉಮೇಶ್ ಪಾಲ್ ಅವರಿಗೆ ವ್ಯಕ್ತಿಯೊಬ್ಬ ಗುಂಡು ಹಾರಿಸಿದ್ದ. ಅವರನ್ನು ಸ್ವರೂಪ ರಾಣಿ ನೆಹರು ಆಸ್ಪತ್ರೆಗೆ ಕರೆದೊಯಯ್ಯಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಬಿಜೆಪಿ ನಾಯಕ ರಹಿಲ್ ಹಸನ್ ಅವರ ಸಹೋದರ ಗುಲಾಮ್ ಅವರ ಹೆಸರು ಕೇಳಿ ಬಂದ ನಂತರ ಪಕ್ಷದಿಂದ ಅವರನ್ನು ಹೊರ ಹಾಕಲಾಗಿದೆ.

ಇದರ ನಡುವೆ ಅತಿಕ್ ಅಹಮ್ಮದ್ ಅವರ ಪತ್ನಿ ಸಹಿಸ್ತಾ ಪರ್ವಿನ್ ಅವರು ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ಗೆ (Yogi Adityanath) ಪತ್ರ ಬರೆದು ಉಮೇಶ್ ಪಾಲ್ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿದ್ದಾರೆ. ಪ್ರಯಾಗ್ರಾಜ್ನ (Prayagraj) ಪೊಲೀಸ್ ಕಮಿಷನರ್ ರಮೇಶ್ ಶರ್ಮಾ ಮತ್ತು ಎಡಿಜಿ ಎಸ್ಟಿಎಫ್ ಎದುರಾಳಿಗಳೊಂದಿಗೆ ಸೇರಿಕೊಂಡು ಪತಿ ಹಾಗೂ ಅವರ ಸಹೋದರನನ್ನು ಅಶ್ರಫ್ನನ್ನು ಕೊಲ್ಲಲು ತಿರ್ಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ?
ರಾಜು ಪಾಲ್ ಅವರು 2005ರ ಅಲಹಾಬಾದ್ (Allahabad) ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಂಸದ ಅತೀಕ್ ಅಹಮ್ಮದ್ ಸಹೋದರ ಖಾಲಿದ್ ಅಜೀಮ್ ಅವರ ವಿರುದ್ಧ ಬಿಎಸ್ಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಅದಾದ ಒಂದು ತಿಂಗಳ ನಂತರ ಅವರ ಕೊಲೆಯಾಗಿತ್ತು. ಉಮೇಶ್ ಪಾಲ್ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು.