

ಯಾದಗಿರಿ: ನಗರದ ಹತ್ತಿಕುಣಿ ಕ್ರಾಸ್ ಬಳಿಯಿರುವ ಟಿಪ್ಪು ಸರ್ಕಲ್ ವಿವಾದ (Yadagiri Tipu Circle Controversy) ತೀವ್ರತೆ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಯಾದಗಿರಿ ಸಹಾಯಕ ಆಯುಕ್ತರು, ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ (Imposition of prohibitory) ಆದೇಶಿಸಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 11ರವರೆಗೆ ಗಾಂಧಿ ಚೌಕ್ನಿಂದ ನಗರಸಭೆ ಕಚೇರಿ, ಹತ್ತಿಕುಣಿ ಕ್ರಾಸ್ನಿಂದ ಗಂಗಾನಗರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಯಾದಗಿರಿ ಸಹಾಯಕ ಆಯುಕ್ತ ಶಾ ಆಲಂ ಹುಸೇನ್ ಅವರು ಆದೇಶ ಹೊರಡಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದ್ದು, ಸ್ಥಳದಲ್ಲಿ ಡಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ.

ಟಿಪ್ಪು ಸರ್ಕಲ್ ಅನಧಿಕೃತವಾಗಿದ್ದು, ಕೂಡಲೇ ತೆರವು ಮಾಡಬೇಕು, ಈ ಬಗ್ಗೆ ನಾಳೆ (ಫೆಬ್ರವರಿ 27) ಪ್ರತಿಭಟನೆ ನಡೆಸಲಾಗುವುದು ಎಂದು ಶಿವಾಜಿ ಸೇನೆ ಎಚ್ಚರಿಕೆ ನೀಡಿತ್ತು. ನಾಳೆ ಟಿಪ್ಪು ಸರ್ಕಲ್ ತೆರವು ಮಾಡುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಇದರ ಬೆನ್ನಲ್ಲೆ ಪ್ರತಿಸವಾಲು ಹಾಕಿದ್ದ ಟಿಪ್ಪು ಸಂಘಟನೆ, ಯಾವುದೇ ಕಾರಣಕ್ಕೂ ಸರ್ಕಲ್ ತೆರವು ಮಾಡಲು ಬಿಡುವುದಿಲ್ಲ. ಯಾರು ಬರುತ್ತಾರೋ ಬರಲಿ ಎಂದು ಹೇಳಿತ್ತು. ಈ ಬೆಳವಣಿಗೆ ಹಿನ್ನಲೆ ನಿನ್ನೆ ಯಾದಗಿರಿ ಪೊಲೀಸರು ಶಿವಾಜಿ ಸೇನೆ ಹಾಗೂ ಟಿಪ್ಪು ಸಂಘಟನೆಯ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿದ್ದಾರೆ. ಟಿಪ್ಪು ಸರ್ಕಲ್ ವಿಚಾರ ಸರ್ಕಾರ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ, ಶಾಂತಿ ಕದಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಹತ್ತಿಕುಣಿ ಕ್ರಾಸ್ ಬಳಿ ಇರುವ ಟಿಪ್ಪು ಸುಲ್ತಾನ್ ಸರ್ಕಲ್ ಅನಧಿಕೃತವಾಗಿದೆ. ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಇದೆ 27 ರಂದು ಶಿವಾಜಿ ಸೇನೆಯಿಂದ ಟಿಪ್ಪು ಸರ್ಕಲ್ನಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಧಿಕಾರಿಗಳು ತೆರವು ಮಾಡದಿದ್ದರೆ ನಾವೇ ತೆರವು ಮಾಡುತ್ತೇವೆ ಎಂದು ಶಿವಾಜಿ ಸೇನೆ ಅಧ್ಯಕ್ಷ ಪರಶುರಾಮ್ ಹೇಳಿಕೆ ನೀಡಿದ್ದರು.
ಇದಕ್ಕೆ ಪ್ರತಿಸವಾಲು ಹಾಕಿದ್ದ ಟಿಪ್ಪು ಸುಲ್ತಾನ್ ಸಂಯುಕ್ತ ರಂಗದ ಉತ್ತರ ಕರ್ನಾಟಕ ಅಧ್ಯಕ್ಷ ಅಬ್ದುಲ್ ಕರೀಂ, ಶಿವಾಜಿ ಸೇನೆಯ ಪ್ರತಿಭಟನೆಗೆ ಅವಕಾಶ ಕೊಡಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಆಗ್ರಹಿಸಿದ್ದರು. ಅಲ್ಲದೆ, ಟಿಪ್ಪು ಸುಲ್ತಾನ್ ಸರ್ಕಲ್ ಅಧಿಕೃತವಾಗಿದೆ. 2010 ರಲ್ಲೇ ನಗರಸಭೆ ಅನುಮತಿ ನೀಡಿದೆ. ಆದರೆ ಈಗ ಸುಖಾಸುಮ್ಮನೆ ವಿವಾದ ಮಾಡುತ್ತಿದ್ದಾರೆ. ಇಂತವರ ವಿರುದ್ಧ ಪ್ರಕರಣ ದಾಖಲಿಸಿ ಒಳಗೆ ಹಾಕಬೇಕೆಂದು ಆಗ್ರಹಿಸಿದ್ದರು.
