

ಮಂಗಳೂರು: ಸುರತ್ಕಲ್ ಟೋಲ್ಗೇಟ್ (Surathkal Toll Gate) ರದ್ದಾಗಿದೆ ಆದ್ರೂ ಟೋಲ್ ಸಂಗ್ರಹ ಮಾತ್ರ ಇನ್ನೂ ನಿಂತಿಲ್ಲ. ನಮಗೆ ಸರ್ಕಾರದ ನೋಟಿಫಿಕೇಷನ್ ಕೈಸೇರಿಲ್ಲ ಎನ್ನುತ್ತಿದ್ದಾರೆ ಟೋಲ್ಗೇಟ್ ಗುತ್ತಿಗೆದಾರರು.

ಈ ಟೋಲ್ಗೇಟ್ ಹೆಜಮಾಡಿ ಟೋಲ್ಗೇಟ್ ಜೊತೆಗೆ ವಿಲೀನಗೊಳ್ಳುತ್ತಿರುವುದರಿಂದ ಜನತೆಗೆ ದುಪ್ಪಟ್ಟು ಬರೆ ಬೀಳುವ ಆತಂಕ ಎದುರಾಗಿದೆ. ಟೋಲ್ಗೇಟ್ ವಿಚಾರದಲ್ಲಿ ಈವರೆಗೆ ಒಂದು ಹಂತದ ರಾಜಕೀಯ ಮೇಲಾಟ ನಡೆದಿದ್ರೆ ಇದೀಗ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ವೇದಿಕೆಯಾಗಿದೆ. ಟೋಲ್ಗೇಟ್ ರದ್ದಾಯ್ತು ಎನ್ನುವ ಸಂಸದರ ಟ್ವೀಟ್ ನಂಬಿ ಟೋಲ್ಗೇಟ್ ರದ್ದಾಯ್ತು ಅಂತಾ ಅಂದ್ಕೊಂಡ್ರೆ ಅಲ್ಲಿ ಟೋಲ್ ಕಲೆಕ್ಷನ್ ಮಾತ್ರ ನಡೆಯುತ್ತಲೇ ಇದೆ. ಯಾಕೆ ಅಂತಾ ಕೇಳಿದ್ರೆ ಸರ್ಕಾರದ ನೋಟಿಫಿಕೇಷನ್ ಟೋಲ್ ಕಂಪನಿಯ ಕೈಸೇರಿಲ್ಲ ಎನ್ನುವ ಉತ್ತರ ಬರ್ತಾ ಇದೆ. ಅಷ್ಟೇ ಅಲ್ಲ, ಈ ಟೋಲ್ಗೇಟ್ ಹೆಜಮಾಡಿ ಟೋಲ್ ಜೊತೆ ವಿಲೀನ ಆಗಿರೋದ್ರಿಂದ ಇಲ್ಲಿನ ಹಣವನ್ನೂ ಸೇರಿಸಿ ಪಡೆಯುವ ಸಾಧ್ಯತೆಯಿದ್ದು, ಜನತೆಯ ಸ್ಥಿತಿ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಈ ವಿಚಾರ ಮತ್ತೆ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆಯಾಗಿದೆ.
ಹೌದು ಈ ಆತಂಕಕ್ಕೆ ಕಾರಣವಾಗಿರೋದು ಸ್ಥಳೀಯ ಶಾಸಕ ಭರತ್ ಶೆಟ್ಟಿ (Bharath Shetty) ನೀಡಿರುವ ಹೇಳಿಕೆ. ಸರ್ಕಾರದ ನಿಯಮದ ಪ್ರಕಾರ ಹೆಜಮಾಡಿಯಲ್ಲಿ ಸುಂಕ ಜಾಸ್ತಿ ಪಡೆಯಬಹುದು. ಎಷ್ಟು ದರ ಅನ್ನೋದು ನೋಟಿಫಿಕೇಶನ್ ಬಂದ ಬಳಿಕವಷ್ಟೇ ಗೊತ್ತಾಗಲಿದೆ. ಒಂದು ವಾರದಲ್ಲಿ ನೋಟಿಫಿಕೇಶನ್ ಬರುವ ಸಾಧ್ಯತೆಗಳಿವೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಹೇಳಿಕೆ ನೀಡಿದ್ದು, ಇದು ಹೆಜಮಾಡಿ ಟೋಲ್ಗೇಟ್ನಲ್ಲಿ ದರ ಏರಿಕೆಯಾಗುವ ಮುನ್ಸೂಚನೆ ಎನ್ನಲಾಗಿದೆ. ಈ ಮೂಲಕ ಸುರತ್ಕಲ್ ಟೋಲ್ ರದ್ದಾದರೂ ಜನರಿಗೆ ಉಪಯೋಗವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಈ ನಿರ್ಧಾರವನ್ನು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ (UTKhader) ವಿರೋಧಿಸಿದ್ದಾರೆ. ಟೋಲ್ಗೇಟ್ನ್ನು ಶಿಫ್ಟ್ ಮಾಡಿದ್ದಾರಷ್ಟೇ. ಎಲ್ಲೂ ಕೂಡ ರದ್ದಾಗಿಲ್ಲ. ಇದನ್ನು ಹೆಜಮಾಡಿ ಟೋಲ್ಗೇಟ್ ಜೊತೆಗೆ ಮರ್ಜ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.