

ಪಾಟ್ನಾ: ಬಿಹಾರದ ಬಿಜೆಪಿ ಶಾಸಕ ಲಾಲನ್ ಪಾಸ್ವಾನ್ (Lalan Paswan) ಅವರು ಹಿಂದೂ ದೇವತೆಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಭಾಗಲ್ಪುರ ಜಿಲ್ಲೆಯ ಪಿರ್ಪೈಂಟಿ ವಿಧಾನಸಭಾ ಕ್ಷೇತ್ರದ ಶಾಸಕ ಲಾಲನ್ ಪಾಸ್ವಾನ್ ಹಿಂದೂ ನಂಬಿಕೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ದೀಪಾವಳಿಯ (Deepavali) ಸಂದರ್ಭದಲ್ಲಿ ಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಆಕೆ ಐಶ್ವರ್ಯ, ಸಂಪತ್ತನ್ನು ತರುತ್ತಾಳೆಂದು ಆಕೆಯನ್ನು ಆರಾಧಿಸಲಾಗುತ್ತದೆ. ಆದರೆ, ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸದಿದ್ದರೂ ಅವರಲ್ಲಿ ಶ್ರೀಮಂತರು ಇಲ್ಲವೇ? ಎಂದು ಲಾಲನ್ ಪಾಸ್ವಾನ್ ಪ್ರಶ್ನೆ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಭಾಗಲ್ಪುರದ ಶೆರ್ಮರಿ ಬಜಾರ್ನಲ್ಲಿ ಪ್ರತಿಭಟನೆ ನಡೆಸಲಾಯಿತು. ನಂತರ ಅವರ ಪ್ರತಿಕೃತಿಯನ್ನು ಸುಡಲಾಯಿತು. ಲಾಲನ್ ಪಾಸ್ವಾನ್ ದೀಪಾವಳಿಯಂದು ಲಕ್ಷ್ಮಿ ದೇವಿಯ ಆರಾಧನೆ ಮಾಡುವುದನ್ನು ಪ್ರಶ್ನಿಸಿದ್ದಾರೆ.
ಲಕ್ಷ್ಮಿ ದೇವಿಯನ್ನು ಪೂಜಿಸುವುದರಿಂದಲೇ ಸಂಪತ್ತು ಸಿಗುವುದಾದರೆ ಮುಸ್ಲಿಮರಲ್ಲಿ ಕೋಟ್ಯಾಧಿಪತಿಗಳು ಇರುತ್ತಿರಲಿಲ್ಲ. ಮುಸ್ಲಿಮರು ಲಕ್ಷ್ಮಿಯನ್ನು ಪೂಜಿಸುವುದಿಲ್ಲವಾದರೂ ಅವರಲ್ಲಿ ಶ್ರೀಮಂತರಿಲ್ಲವೇ? ಮುಸ್ಲಿಮರು ಸರಸ್ವತಿ ದೇವಿಯನ್ನು ಪೂಜಿಸುವುದಿಲ್ಲ, ಆದರೂ ಮುಸ್ಲಿಮರಲ್ಲಿ ವಿದ್ವಾಂಸರು ಇಲ್ಲವೇ? ಅವರು ಐಎಎಸ್ ಅಥವಾ ಐಪಿಎಸ್ ಅಧಿಕಾರಿ ಆಗುವುದಿಲ್ಲವೇ? ಎಂದು ಶಾಸಕ ಪಾಸ್ವಾನ್ ಪ್ರಶ್ನಿಸಿದ್ದಾರೆ.
ಆತ್ಮ ಮತ್ತು ಪರಮಾತ್ಮನ ಪರಿಕಲ್ಪನೆಯು ಕೇವಲ ಜನರ ನಂಬಿಕೆಯಾಗಿದೆ ಎಂದು ಬಿಜೆಪಿ ನಾಯಕ ಲಾಲನ್ ಪಾಸ್ವಾನ್ ಹೇಳಿದ್ದಾರೆ. ನೀವು ನಂಬಿದರೆ ಅದು ದೇವತೆ, ಇಲ್ಲದಿದ್ದರೆ ಅದು ಕೇವಲ ಕಲ್ಲಿನ ವಿಗ್ರಹ. ನಾವು ದೇವರು ಮತ್ತು ದೇವತೆಗಳನ್ನು ನಂಬುತ್ತೇವೆಯೇ ಅಥವಾ ನಂಬುವುದಿಲ್ಲವೇ ಎಂಬುದು ನಮಗೆ ಬಿಟ್ಟದ್ದು. ನಾವು ಈ ಬಗ್ಗೆ ವೈಜ್ಞಾನಿಕ ತಳಹದಿಯ ಮೇಲೆ ಯೋಚಿಸಬೇಕು ಎಂದು ಅವರು ಹೇಳಿದ್ದಾರೆ.
ಹನುಮಂತ ಅತ್ಯಂತ ಶಕ್ತಿಯುಳ್ಳ ದೇವರು ಎಂದು ನಂಬಲಾಗಿದೆ. ಮುಸ್ಲಿಮರು ಅಥವಾ ಕ್ರಿಶ್ಚಿಯನ್ನರು ಆಂಜನೇಯನ ಪೂಜೆ ಮಾಡುವುದಿಲ್ಲ. ಆದರೂ ಅವರು ಶಕ್ತಿವಂತರಲ್ಲವೇ? ಎಂದು ಶಾಸಕ ಲಾಲನ್ ಪಾಸ್ವಾನ್ ಕೇಳಿದ್ದಾರೆ. ಈ ವಿಡಿಯೋ ಟ್ವಿಟ್ಟರ್ನಲ್ಲಿ ವೈರಲ್ ಆಗಿದೆ.