

ಬೆಂಗಳೂರು (ಅ.13): ‘ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ಗುರು ಅಲ್ಲ. ಅವರೊಬ್ಬ ಪುಕ್ಕಲು ಗುರು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಚ್ಚಾ ಎಂದಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಹೇಳಿಕೆಗೆ ರಾಜ್ಯ ಕಾಂಗ್ರೆಸ್ ಸಹ ಕಿಡಿ ಕಾರಿದ್ದು, ‘ನಿಮ್ಮ ಮುಂದೆ ನರೇಂದ್ರ ಮೋದಿ ಅವರೂ ಬಚ್ಚಾ ಅಲ್ಲವೇ?’ ಎಂದು ಪ್ರಶ್ನಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಯಡಿಯೂರಪ್ಪ ಅವರೇ, ಈ ಭಾಷೆ ನಿಮ್ಮ ಘನತೆಗೆ ತಕ್ಕುದಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಿಜೆಪಿಗೆ ಪ್ರಶ್ನಾತೀಥರು, ಟೀಕಾತೀಥರು ಇರಬಹುದು. ಆದರೆ, ಭಾರತ ಪ್ರಜಾ ಪ್ರಭುತ್ವ ದೇಶ ಎಂಬುದನ್ನು ಮರೆಯಬೇಡಿ ಎಂದು ಕಿಡಿ ಕಾರಿದೆ. ಅಂದ ಹಾಗೆ, ನಿಮ್ಮ ಮುಂದೆ ಬಚ್ಚಾ ಆಗಿರುವ ಅಮಿತ್ ಶಾ ಎದುರು ನೀವು ಕೈ ಕಟ್ಟಿ ನಿಲ್ಲುವುದು ಸರಿಯೇ? ಪ್ರಧಾನಮಂತ್ರಿ ನರೇಂದ್ರ ಮೋದಿಯೂ ನಿಮ್ಮ ಮುಂದೆ ಬಚ್ಚಾ ಅಲ್ಲವೇ? ಎಂದು ಪ್ರಶ್ನೆ ಮಾಡಿದೆ.
ಬಿಎಸ್ವೈ ಹೇಳಿಕೆಗೆ ಕಾಂಗ್ರೆಸ್ ಕಿಡಿ: ರಾಹುಲ್ ಗಾಂಧಿ ಬಚ್ಚಾ ಎಂಬ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿಕೆಗೆ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಭಾರತ್ ಜೋಡೋ ಪಾದಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಸಿಎಂ ಸ್ಥಾನ ಕಳೆದುಕೊಂಡ ಬಿಎಸ್ವೈಗೆ ಬುದ್ಧಿ ಭ್ರಮಣೆ ಆಗಿದೆ ಎಂದು ಕಿಡಿ ಕಾರಿದರು. ಯಡಿಯೂರಪ್ಪ ಅವರು ಸವಕಲು ನಾಣ್ಯವಾಗಿ ಬಿಜೆಪಿಯಲ್ಲಿ ಇದ್ದಾರೆ. ರಾಹುಲ್ ಗಾಂಧಿ ಟೀಕಿಸಿ ಪ್ರಚಾರ ಪಡೆಯಲು ಯತ್ನಿಸುತ್ತಿದ್ದಾರೆ.
ಓರ್ವ ಮುತ್ಸದ್ದಿ, ರಾಜಕಾರಣ ಮಾಡುವಾಗ ಈ ರೀತಿ ಹೇಳಿಕೆಗಳು ಶೋಭೆ ತರುವುದಿಲ್ಲ. ಬಿಎಸ್ವೈ ಹಿಂದೆ ಇಡಿ, ಐಟಿ ಕೇಸ್ಗಳಿವೆ. 8ವರ್ಷದಿಂದ ಬೂಟಾಟಿಕೆ ದಾಸಯ್ಯರಂತೆ ಬಡಿದುಕೊಳ್ತಿದ್ದಾರೆ ಎಂದರು. ಮೋದಿ ಪಾದ ಧೂಳಿಗೂ ಸಿದ್ದರಾಮಯ್ಯಸಮ ಅಲ್ಲ ಎಂದ ಬಿಎಸ್ವೈಗೆ ಟಾಂಗ್ ನೀಡಿದ ಹರಿಪ್ರಸಾದ್, ಬಿಎಸ್ವೈ ಎಷ್ಟುಧೂಳು ಕುಡಿದಿದ್ದಾರೆ ಎಂಬುದು ಗೊತ್ತಿದೆ. ಇಷ್ಟೊಂದು ಭಟ್ಟಂಗಿತನದ ಮಟ್ಟಕ್ಕಿಳಿಯುತ್ತಾರೆಂದು ನಿರೀಕ್ಷಿಸಿರಲಿಲ್ಲ. ಕಾಂಗ್ರೆಸ್ ಆಡಳಿತದಲ್ಲಿ ಹಗರಣ ನಡೆದಿದ್ದರೆ ಬಯಲು ಮಾಡಲಿ. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.
ಶ್ರೀರಾಮುಲುಗೆ ಭಯ ಇದೆ: ಹಿಂದೆ ಸಿದ್ದರಾಮಯ್ಯ ಅವರು ಪಾದಯಾತ್ರೆ ಮಾಡಿ ಅಲ್ಲಿನ ಅದಿರು ಲೂಟಿ ನಿಲ್ಲಿಸಿದ್ದೆವು. ಈಗ ಮತ್ತೆ ಏನು ಮಾಡುತ್ತಾರೋ ಎಂಬ ಭಯ ಶ್ರೀರಾಮುಲುಗೆ ಕಾಡಿದೆ. ಹಾಗಾಗಿ ರಾಹುಲ್ ಗಾಂಧಿಗೆ ಬಳ್ಳಾರಿ ಏಕೆ ನೆನಪಾಯಿತು ಎಂದು ಪ್ರಶ್ನಿಸಿದ್ದಾರೆ ಎಂದರು. ತನಿಖೆನೂ ಮಾಡ್ತೀವಿ ಅದರಪ್ಪನ್ನೂ ಮಾಡ್ತೀವಿ ಎಂದ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಅದು ಅವರ ಬಾಯಿಂದ ಬಂದದ್ದು ಅಲ್ಲ. ನಾಗಪುರದಿಂದ ಹೇಳಿದ್ದನ್ನ ಸಿಎಂ ಬೊಮ್ಮಾಯಿ ಹೇಳ್ತಾರೆ. ಇಂತಹ ಭಾಷೆ ಬಳಸದಿದ್ದರೆ ಅವರು ಸಿಎಂ ಸ್ಥಾನ ಕಳೆದುಕೊಳ್ಳುತ್ತಾರೆ. ಬೊಮ್ಮಾಯಿ ಸಮಾಜವಾದದಿಂದ ಕೋಮುವಾದಕ್ಕೆ ಮತಾಂತರವಾಗಿದ್ದಾರೆದು ಹರಿಪ್ರಸಾದ್ ಹೇಳಿದರು.