

ಜಾತಿ, ಧರ್ಮ ಬೇರೆಯಾದಂತೆ ಅಂತ್ಯಕ್ರಿಯೆಗಳ ಪದ್ಧತಿ, ಸಂಪ್ರದಾಯವೂ ವಿಭಿನ್ನವಾಗಿರುತ್ತದೆ. ಹಿಂದೂಗಳಲ್ಲೇ (Hindu) ವಿವಿಧ ಸಂಪ್ರದಾಯಗಳಡಿ ಅಂತ್ಯಸಂಸ್ಕಾರ (Final Rites) ಮಾಡಲಾಗುತ್ತದೆ. ಆದರೆ, ನಾವು ಹೇಳಲು ಹೊರಟಿರುವ ಈ ಸ್ಟೋರಿಯಲ್ಲಿ ಮುಸ್ಲಿಂ (Muslim) ವ್ಯಕ್ತಿಯ ಅಂತ್ಯಕ್ರಿಯೆಯನ್ನು ಹಿಂದೂಗಳ ಪದ್ಧತಿಗಳಂತೆ ಮಾಡಲಾಗಿದೆ. ಕೇರಳದಲ್ಲಿ (Kerala) ಈ ಎಡವಟ್ಟು ಸಂಭವಿಸಿದೆ. ಉತ್ತರ ಪ್ರದೇಶ (Uttar Pradesh) ಮೂಲದ ವ್ಯಕ್ತಿಯ ಮೃತದೇಹ ಕೇರಳಕ್ಕೆ ಹೋಗಿದ್ದು, ಇದರಿಂದ ಎಡವಟ್ಟು ಸಂಭವಿಸಿದೆ. ಸೌದಿ ಅರೇಬಿಯಾದಲ್ಲಿ (Saudi Arabia) ಮೃತಪಟ್ಟಿದ ಇಬ್ಬರು ಎನ್ಆರ್ಐಗಳ ಮೃತದೇಹಗಳ ಅದಲು ಬದಲಾಗಿ ಈ ಎಡವಟ್ಟು ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಉತ್ತರ ಪ್ರದೇಶಕ್ಕೆ ಬರಬೇಕಿದ್ದ ಮೃತದೇಹ ಅಲ್ಲಿಗೆ ತಲುಪದೆ ಆ ವ್ಯಕ್ತಿಯ ಸಂಬಂಧಿಕರು ಕೊನೆಯ ಬಾರಿಗೆ ಆತನ ಶವವನ್ನು ಸಹ ನೋಡದೆ ತೀವ್ರ ನೊಂದಿದ್ದಾರೆ ಎಂದು ತಿಳಿದುಬಂದಿದೆ. ಆ ವ್ಯಕ್ತಿಯ ಮೃತದೇಹ ಕೇರಳಕ್ಕೆ ಹೋಗಿದ್ದು, ಅಲ್ಲಿ ಅವರು ಹಿಂದೂ ಪದ್ಧತಿಯಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಇನ್ನೊಂದೆಡೆ, ಆ ಕುಟುಂಬದವರು 3 ದಿನಗಳೊಳಗೆ ಇಬ್ಬರು ವ್ಯಕ್ತಿಗಳ ಅಂತ್ಯಸಂಸ್ಕಾರ ಮಾಡಿರುವುದು ಇನ್ನೊಂದು ವಿಚಿತ್ರ.
ಸೌದಿ ಅರೇಬಿಯಾದಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳನ್ನು 46 ವರ್ಷದ ಶಾಜಿ ರಾಜನ್ ಹಾಗೂ 45 ವರ್ಷದ ಜಾವೇದ್ ಅಹ್ಮದ್ ಇದ್ರಿಷಿ ಎಂದು ತಿಳಿದುಬಂದಿದೆ. ಕೇರಳ ಮೂಲದ ಶಾಜಿ ರಾಜನ್ ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಇನ್ನೊಂದೆಡೆ ಜಾವೇದ್ ಅಹ್ಮದ್ ಇದ್ರಿಷಿ ಉತ್ತರ ಪ್ರದೇಶದ ವಾರಾಣಸಿ ಮೂಲದವರು. ರಾಜನ್ ಎರಡೂವರೆ ತಿಂಗಳ ಹಿಂದೆಯೇ ಮೃತಪಟ್ಟಿದ್ದರೆ, ಜಾವೇದ್ ಸೆಪ್ಟೆಂಬರ್ 25 ರಂದು, ಒಟ್ಟಾರೆ ಇಬ್ಬರೂ ಸೌದ ಅರೇಬಿಯಾದಲ್ಲಿ ಸಾವಿಗೀಡಾಗಿದ್ದಾರೆ.
ಇನ್ನು, ರಾಜನ್ ಮೃತದೇಹ ತಿರುವನಂತಪುರಂಗೆ ಹಾಗೂ ಜಾವೇದ್ ಅವರ ಮೃತದೇಹವನ್ನು ವಾರಾಣಸಿಗೆ ಇಂಡಿಗೋ ವಿಮಾನದಲ್ಲಿ ಕಳಿಸಬೇಕಿತ್ತು. ಆದರೆ, ಈ ಮೃತದೇಹಗಳು ಅದಲು ಬದಲಾಗಿ ಜಾವೇದ್ ಮೃತದೇಹ ಕೇರಳಕ್ಕೆ ಹೋಗಿದೆ. ಈ ಹಿನ್ನೆಲೆ ರಾಜನ್ ಕುಟುಂಬದವರು ದೇಹದಿಂದ ಬರುತ್ತಿದ್ದ ಕೆಟ್ಟ ವಾಸನೆ ಹಿನ್ನೆಲೆ ಬೇಗ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಅಲ್ಲದೆ, ರಾಜನ್ ಅವರ ಮಗಳು ಒಮ್ಮೆ ಮುಖ ನೋಡಿ ಇದು ತನ್ನ ಅಪ್ಪನ ಮೃತದೆಹವಲ್ಲ ಎಂದು ಹೇಳಿದರೂ,ಅವರ ಕುಟುಂಬದವರೆಲ್ಲ ಸೇರಿ ಜಾವೇದ್ ಮೃತದೇಹವನ್ನು ಹಿಂದೂ ಪದ್ಧತಿಯಂತೆ ಅಂತ್ಯಕ್ರಿಯೆ ಮಾಡಿದ್ದಾರೆ.
ವಾರಾಣಸಿಯಲ್ಲಿ ಬಯಲಾಯ್ತು ಮೃತದೇಹಗಳ ಅದಲು – ಬದಲು..!ಇನ್ನು, ವಾರಾಣಸಿಗಯಲ್ಲಿ ಇದ್ರಿಷಿ ಅವರ ಮಾವ ಮೃತದೇಹವನ್ನು ಇಟ್ಟಿದ್ದ ಬಾಕ್ಸ್ನಲ್ಲಿ ಹೆಸರು ಬರೆದಿದ್ದನ್ನು ನೋಡಿ ಶಾಕ್ಗೊಳಗಾಗಿದ್ದಾರೆ. ನಂತರ, ಅವರು ಸೌದಿ ಅರೇಬಿಯಾದಲ್ಲಿರುವ ಸಂಬಂಧಿಕರಿಗೆ ಈ ಬಗ್ಗೆ ಎಚ್ಚರಿಸಿದ್ದು, ಅವರು ಸೌದಿ ಅರೇಬಿಯಾದ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರನ್ನು ಸಂಪರ್ಕಿಸಿದಾಗ ಮೃತದೇಹಗಳು ಅದಲು ಬದಲಾಗಿರುವ ಸತ್ಯ ತಿಳಿದುಬಂದಿದೆ. ನಂತರ ಭಾರತದ ರಾಯಭಾರಿ ಸಹಾಯದಿಂದ, ಉತ್ತರ ಪ್ರದೇಶ ಪೊಲೀಸರಿಗೆ ಕರೆ ಮಾಡಿ ಆ ಮೃತದೇಹವನ್ನು ಕೇರಳಕ್ಕೆ ಕಳಿಸಿ ಅಲ್ಲಿ ಅಂತಿಮವಾಗಿ ಅಂತ್ಯಕ್ರಿಯೆ ಮಾಡಿದ್ದಾರೆ. ಅಂದರೆ, ರಾಜನ್ ಕುಟುಂಬಸ್ಥರು ಇಲ್ಲಿ 3 ದಿನಗಳೊಳಗೆ ಇಬ್ಬರ ಮೃತದೇಹಗಳ ಅಂತ್ಯಸಂಸ್ಕಾರ ಮಾಡಿದ್ದಾರೆ.
ಇಲ್ಲಿ ಒಬ್ಬರು ಮುಸ್ಲಿಂ ವ್ಯಕ್ತಿ ಮೃತಪಟ್ಟಿದ್ದು , ಇನ್ನೊಬ್ಬರು ಹಿಂದೂ ಬಲಿಯಾಗಿದ್ದಾರೆ. ಆದರೆ, ಎಡವಟ್ಟು ಬಯಲಾಗುವ ಮೊದಲೇ ಹಿಂದೂ ಪದ್ಧತಿಯಂತೆ ಮುಸ್ಲಿಂ ವ್ಯಕ್ತಿಯ ಮೃತದೇಹದ ಅಂತ್ಯಕ್ರಿಯೆ ನಡೆದಿದೆ. ಹಾಗೂ, ಮುಸ್ಲಿಂ ವ್ಯಕ್ತಿಯ ಕುಟುಂಬಸ್ಥರಿಗೆ ಆ ವ್ಯಕ್ತಿಯ ಮೃತದೇಹವನ್ನು ಕೊನೆಯ ಬಾರಿಗೆ ಸಹ ನೋಡಲು ಸಾಧ್ಯವಾಗದೆ ಹೋಗಿದ್ದು, ದುರಂತವಾಗಿದೆ.