

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ಸೆ. 14 ರಂದು ಮುಸ್ಲಿಂ ಹುಡುಗ ಜಾಫರ್- ಹಿಂದು ಹುಡುಗಿ ಚೈತ್ರಾ, ಪ್ರೇಮಿಗಳು ಮದುವೆಯಾಗಲು ಮುಂದಾಗಿದ್ದರು. ಈ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ (Suspected Love jihad) ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು ಮದುವೆಗೆ ತಡೆಯೊಡ್ಡಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿಂತೆ ಯುವತಿ ಚೈತ್ರಾ ಮಾಧ್ಯಮಗಳ ಮುಂದೆ ಮಾತನಾಡಿ, ನಾವು ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದೇವೆ. ಇಬ್ಬರು ಇಷ್ಟಪಟ್ಟೆ ಮದುವೆಗೆ ಮುಂದಾಗಿದ್ದೇವೆ. ನಾವು ಮದುವೆಯಾಗುತ್ತೇವೆ, ಚೆನ್ನಾಗಿರ್ತೀವಿ, ಕೇಳೋಕೆ ಅವರ್ಯಾರು.? ಎಂದು ಬಜರಂಗದಳ ಕಾರ್ಯಕರ್ತರ ವಿರುದ್ಧ ಚೈತ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಎಳೆದಾಡಿ, ಕೆಟ್ಟ ಕೆಟ್ಟದಾಗಿ ಬೈದು, ನನ್ನ ಗಂಡನಿಗೆ ಹಲ್ಲೆ ಮಾಡಿದ್ದಾರೆ. ಹಿಂದೂ ಹುಡುಗಿ ಬೇಕಾ..? ಎಸ್ಸಿ ಹುಡುಗಿ ಬೇಕಾ ಅಂತ ಪತಿಯನ್ನು ಥಳಿಸಿದ್ದಾರೆ. ಚಿಕ್ಕಮಗಳೂರು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಮ್ಮ ಮೇಲೆ ಹಲ್ಲೆ ನಡೆದಿದೆ. ಆ ದಿನ ಬಜರಂಗದಳದವರು ಏನಾದರೂ ಮಾಡುತ್ತಾರೆ ಅಂತಾ ನನ್ನನ್ನು ಮನೆಗೆ ಕಳುಹಿಸಲಿಲ್ಲ. ಮನೆಗೆ ಕಳುಹಿಸದೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಿದ್ದಾರೆ. ಆರೋಪಿಗಳಿಗೆ ಸ್ಟೇಷನ್ ಬೇಲ್ ಕೊಟ್ಟು ಕಳುಹಿಸಿದ್ದಾರೆ. ನಮ್ಮ ಮೇಲೆ ಹಲ್ಲೆ ಮಾಡಿ, ಕೆಟ್ಟದಾಗಿ ಬೈದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಪೋಲಿಸ್ ಇಲಾಖೆ ವಿರುದ್ಧ ಜಾಫರ್ ಮತ್ತು ಚೈತ್ರಾ ಅಸಮಾಧಾನ ಹೊರಹಾಕಿದ್ದಾರೆ.
ಜಾಫರ್ -ಚೈತ್ರಾ ಪ್ರೇಮಿಗಳಾಗಿದ್ದು, ಸೆ. 14 ರಂದು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ವಿವಾಹ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಹೊರಸಿದ ಹಿಂದೂ ಸಂಘಟನೆ ಕಾರ್ಯಕರ್ತರು, ಜೋಡಿಯನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಠಾಣೆಗೆ ಎಸ್ಡಿಪಿಐ, ದಲಿತ ಸಂಘಟನೆ ಮುಖಂಡರು ಆಗಮಿಸಿದ್ದರು. ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಪೊಲೀಸರಿಂದ ವಿಚಾರಣೆ ನಡೆದಿದೆ. ಸ್ಥಳದಲ್ಲಿ ಮೊಕ್ಕಾಂ ಹೂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ರಿಂದ ಯುವಕ-ಯುವತಿ ವಿಚಾರಣೆ ಮುಂದುವರಿದಿದೆ.
ಚಿಕ್ಕಮಗಳೂರು ನಗರ ಮಹಿಳಾ ಠಾಣೆ ಮುಂದೆ ಮಗಳಿಗಾಗಿ ತಾಯಿ ಕಣ್ಣೀರು ಹಾಕಿದ್ದಾರೆ. ಪ್ರೀತಿಸಿದವನನ್ನೇ ಮದುವೆ ಆಗುತ್ತೇನೆಂದು ಯುವತಿ ನಿರ್ಧರಿಸಿದ್ದಾಳೆ. ಮಗಳು ಪೊಲೀಸ್ ಜೀಪ್ ಹತ್ತುವಾಗ ಕಣ್ಣೀರಿಟ್ಟ ತಾಯಿ, ಮಗಳ ಜತೆ ಮಾತನಾಡಲು ಬಿಡಿ ಎಂದು ಗೋಗರೆದ ಕರುಣಾಜನಕ ದೃಶ್ಯವೂ ಕಂಡುಬಂದಿತು. ನನ್ನ ಮಗಳು ನನಗೆ ಬೇಕು ಅಂತಾ ತಾಯಿ ಕಣ್ಣೀರಿಟ್ಟರು.
ಮಗಳು ಮತ್ತು ಅಳಿಯನಿಗೆ ತೊಂದರೆ ಆಗಬಾರದು, ಅವರ ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ -ತಾಯಿ ಶೋಭಾ
ಕಾಫಿನಾಡಲ್ಲಿ ಲವ್ ಜಿಹಾದ್ ಆರೋಪ ಪ್ರಕರಣದ ಬಗ್ಗೆ ಯುವತಿಯ ತಾಯಿ ಮಾತನಾಡಿದ್ದಾರೆ. ಅವರು ಹೂವಿನ ಹಾರ ಹಾಕಿಕೊಂಡು ಸೀದಾ ಲಕ್ಷ್ಮೀಪುರಕ್ಕೆ ಬರಬೇಕು. ನನ್ನ ಮಗಳ ಜೀವವೇ ನನಗೆ ಮುಖ್ಯ. ಮದುವೆಗೆ ನನ್ನ ಸಂಪೂರ್ಣ ಒಪ್ಪಿಗೆ ಇದೆ. ಅವಳಿಗೆ ಮತ್ತು ನನ್ನ ಅಳಿಯನಿಗೆ ತೊಂದರೆ ಆಗಬಾರದು. ಅವರು ಮದುವೆಯಾಗಲಿ, ಅದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ ಎಂದು ಪೊಲೀಸ್ ಠಾಣೆಯ ಬಳಿ ಯುವತಿಯ ತಾಯಿ ಶೋಭಾ ಅವರು ಹೇಳಿದ್ದಾರೆ.