

ದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಯುಪಿ ಸರ್ಕಾರದಿಂದ ಕೇಸ್ ದಾಖಲಿಸಿದ ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಮಲಯಾಳಂ ಸುದ್ದಿ ಪೋರ್ಟಲ್ನ ವರದಿಗಾರ ಮತ್ತು ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (KUWJ) ದೆಹಲಿ ಘಟಕದ ಕಾರ್ಯದರ್ಶಿಯಾಗಿದ್ದ ಕಪ್ಪನ್ 2020 ರ ಅಕ್ಟೋಬರ್ನಲ್ಲಿ ಉತ್ತರ ಪ್ರದೇಶದ ಹತ್ರಾಸ್ನಲ್ಲಿ(Hathras) ನಡೆದ ಸಾಮೂಹಿಕ ಅತ್ಯಾಚಾರದ ಕುರಿತು ವರದಿ ಮಾಡಲು ತೆರಳುತ್ತಿದ್ದಾಗ ಬಂಧಿಸಲಾಯಿತು.
ಜಾಮೀನು ನಿರಾಕರಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ಪ್ರತಿಯೊಬ್ಬ ವ್ಯಕ್ತಿಗೆ ಮುಕ್ತ ಅಭಿವ್ಯಕ್ತಿಗೆ ಹಕ್ಕಿದೆ. ಕಪ್ಪನ್ ಸಂತ್ರಸ್ತರಿಗೆ ನ್ಯಾಯ ಸಿಗಬೇಕು.ಅದನ್ನು ಸಮಾಜಕ್ಕೆ ತೋರಿಸಬೇಕು ಮತ್ತು ಸಾಮಾನ್ಯರ ಪರ ಧ್ವನಿ ಎತ್ತಲು ಪ್ರಯತ್ನಿಸುತ್ತಿದ್ದಾರೆ. ಇದು ಕಾನೂನಿನ ದೃಷ್ಟಿಯಲ್ಲಿ ಅಪರಾಧವಾಗುತ್ತದೆಯೇ ಎಂದು ಪ್ರಶ್ನಿಸಿತು.
ಇದಕ್ಕೆ ಉತ್ತರಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಹತ್ರಾಸ್ ಘಟನೆಯ ಸುತ್ತ ಅಪಪ್ರಚಾರ ನಡೆಯುತ್ತಿದೆ ಮತ್ತು ಕಪ್ಪನ್ ಗಲಭೆಗಳನ್ನು ಪ್ರಚೋದಿಸುವ ಪಿಎಫ್ಐನ ಪಿತೂರಿಯ ಭಾಗವಾಗಿದೆ ಎಂದು ಹೇಳಿದರು. ಸೆಪ್ಟೆಂಬರ್ 2020 ರಲ್ಲಿ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸಭೆಯಲ್ಲಿ ಸಿದ್ದಿಕ್ ಕಪ್ಪನ್ ಭಾಗಿಯಾಗಿದ್ದರು.
ಈ ಸಭೆಯಲ್ಲಿ ಸೂಕ್ಷ್ಮ ಪ್ರದೇಶಗಳಿಗೆ ಹೋಗಿ ಗಲಭೆಗಳನ್ನು ಪ್ರಚೋದಿಸಲು ನಿರ್ಧರಿಸಲಾಯಿತು. ಪಿಎಫ್ಐನ ಉನ್ನತ ಸದಸ್ಯರು ಅವರು ಕಪ್ಪನ್ ಅವರ ಪಿತೂರಿಯನ್ನು ಬಹಿರಂಗಪಡಿಸಿದ್ದಾರೆ. ಇಡೀ ಪ್ರಚಾರವು ಹತ್ರಾಸ್ ಸಂತ್ರಸ್ತರಿಗೆ ನ್ಯಾಯವಾಗಿದ್ದರೂ, ಅದರ ಅಜೆಂಡಾವು ಪ್ರಧಾನಿ ರಾಜೀನಾಮೆ ನೀಡುವುದು ಆಗಿತ್ತು ಎಂದು ವಾದಿಸಿದರು.

ಈ ವಾದವನ್ನು ತಿರಸ್ಕರಿಸಿದ ಪೀಠವು, 2011 ರಲ್ಲಿ ಇಂಡಿಯಾ ಗೇಟ್ನಲ್ಲಿ ನಿರ್ಭಯಾಗಾಗಿ ಪ್ರತಿಭಟನೆಗಳು ನಡೆದಿವೆ. ಬದಲಾವಣೆಯನ್ನು ತರಲು ಕೆಲವೊಮ್ಮೆ ಪ್ರತಿಭಟನೆಗಳು ಬೇಕಾಗುತ್ತವೆ. ಅದರ ನಂತರ ಕಾನೂನುಗಳಲ್ಲಿ ಬದಲಾವಣೆಯಾಗಿದೆ ಎಂದು ನಿಮಗೆ ತಿಳಿದಿಲ್ವೇ ಎಂದು ಪ್ರಶ್ನಿಸಿ ಜಾಮೀನು ಮಂಜೂರು ಮಾಡಿತು.
ಜಾಮೀನು ನೀಡಲು ಹಲವು ಷರತ್ತುಗಳನ್ನು ಕೋರ್ಟ್ ವಿಧಿಸಿದೆ. ಆರು ವಾರಗಳ ಕಾಲ ದೆಹಲಿಯಲ್ಲಿ ಇರಬೇಕು. ಜಂಗ್ಪುರದ ಪೊಲೀಸ್ ಠಾಣೆಗೆ ವರದಿ ಮಾಡಿಕೊಳ್ಳಬೇಕು. ಆರು ವಾರಗಳ ನಂತರ ಕೇರಳಕ್ಕೆ ಹಿಂತಿರುಗಬಹುದು ಅಲ್ಲಿ ಪ್ರತಿ ಸೋಮವಾರ ಸ್ಥಳೀಯ ಪೊಲೀಸ್ ಠಾಣೆಗೆ ಹಾಜರಾಗಬೇಕು. ಪಾಸ್ಪೋರ್ಟ್ ಒಪ್ಪಿಸುವಂತೆ ನ್ಯಾಯಾಲಯ ಸೂಚನೆ ನೀಡಿತು.