
ಮಂಗಳೂರು: ಪಠ್ಯಪುಸ್ತಕ ಪರಿಶೀಲನಾ ಸಮಿತಿ 10ನೇ ತರಗತಿ ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ (Hedgewar) ಭಾಷಣ ಸೇರಿಸಿದ್ದಕ್ಕೆ ವಿವಾದ ಸೃಷ್ಟಿಯಾಗಿತ್ತು. ಈಗ ಪಠ್ಯಪುಸ್ತಕ ಪರಿಶೀಲನಾ ಸಮಿತಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಅದು SSLC ಪಠ್ಯದಿಂದ ನಾರಾಯಣ ಗುರುಗಳ (Narayana Guru) ವಿಷಯವನ್ನು ಕೈಬಿಟ್ಟಿದೆ. 10ನೇ ತರಗತಿ ಸಮಾಜ ವಿಜ್ಞಾನ ಪಠ್ಯದಿಂದ ಸಾಮಾಜಿಕ ಕ್ರಾಂತಿ ಮಾಡಿದ್ದ ನಾರಾಯಣ ಗುರುಗಳ ಶ್ರೀನಾರಾಯಣ ಗುರು ಧರ್ಮಪರಿಪಾಲನಾ ಯೋಗಂ ಹೆಸರಿನ ನಾರಾಯಣ ಗುರುಗಳ ಜೀವನ ಚರಿತ್ರೆಗೆ ಕತ್ತರಿ ಹಾಕಿದೆ.
ಇವರ ಜೀವನ ಚರಿತ್ರೆಯು ಬ್ರಹ್ಮ ಸಮಾಜ, ವಿವೇಕಾನಂದರ ಪಠ್ಯದ ಜೊತೆಗಿತ್ತು. ಆದರೆ ಇದಕ್ಕೆ ಕತ್ತರಿ ಹಾಕಲಾಗಿದೆ. ಅಲ್ಲದೇ ನಾರಾಯಣ ಗುರುಗಳ ಜತೆ ಪೆರಿಯಾರ್ ಪಠ್ಯಕ್ಕೂ ಕತ್ತರಿ ಪ್ರಯೋಗ ಮಾಡಲಾಗಿದೆ. ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಪಠ್ಯದಿಂದ ತೆಗೆದಿದ್ದಕ್ಕೆ ನಾರಾಯಣ ಗುರುಗಳ ಅನುಯಾಯಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
10ನೇ ತರಗತಿ ಪಠ್ಯಪುಸ್ತಕದ ಅಧ್ಯಾಯ 5ರ ಸಾಮಾಜಿಕ ಮತ್ತು ಧಾರ್ಮಿಕ ಚಳುವಳಿ ವಿಭಾಗದಿಂದ ನಾರಾಯಣ ಗುರುಗಳು ಪಠ್ಯವನ್ನು ತೆಗೆಯಲಾಗಿದೆ. ಇನ್ನೂ ನಾರಾಯಣಗುರುಗಳು ದಕ್ಷಿಣ ಭಾರತದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ್ದರು. ನಾರಾಯಣ ಗುರುಗಳು ಕೇರಳದ ತೀಯಾ ಸಮಾಜದಲ್ಲಿ ಜನಿಸಿದವರು. ಇವರ ತಂದೆ ಮದನ್ ಆಸನ್ ಹಾಗೂ ತಾಯಿ ಕುಟ್ಟಿ ಅಮ್ಮಾಳ್. ಅವರ ಕಾಲಾವಧಿಯಲ್ಲಿ ಕೇರಳದಲ್ಲಿ ಜಾತಿಯತೆ, ಅಸ್ಪೃಷ್ಯತೆ ಹೆಚ್ಚಿತ್ತು. ಆಗ ಅದರ ವಿರುದ್ಧವಾಗಿ ದ್ವನಿ ಎತ್ತಿದವರು. ಇವರು ” ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು,” ಎಂಬ ಸತ್ಯವಾಕ್ಯವನ್ನು ನೀಡಿದವರು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ ಉಪಾಯಗಳನ್ನು ಕಂಡುಕೊಂಡರು.
