ಬಿಜೆಪಿ ಶಾಸಕ ಹಾಗೂ ಮುಖ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತು ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕುಮಟಾ ಪುರಸಭಾ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಹಾಗೂ ಬಿಜೆಪಿ ಶಾಸಕ ದಿನಕರ್ ಶೆಟ್ಟಿ ಹೆಸರು ಬರೆದಿಟ್ಟು ರಾತ್ರಿ ಕಣ್ಮರೆಯಾಗಿದ್ದಾರೆ. ಇದರಿಂದ ಕುಟುಂಬದಲ್ಲಿ ಆತಂಕ ಮನೆ ಮಾಡಿದ್ದು, ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.

Venkatesh R
ಕಾರವಾರ, (ಅಕ್ಟೋಬರ್ 08): ಬಿಜೆಪಿ ಶಾಸಕ ಹಾಗೂ ಮುಖ್ಯಾಧಿಕಾರಿ ಕಿರುಕುಳಕ್ಕೆ ಬೇಸತ್ತು ಕುಮಟಾ ಪುರಸಭೆ ಕಂದಾಯ ನಿರೀಕ್ಷಕ ನಾಪತ್ತೆಯಾಗಿದ್ದಾರೆ. ಕುಮಟಾ ಪುರಸಭಾ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ ಹಾಗೂ ಶಾಸಕ ದಿನಕರ್ ಶೆಟ್ಟಿ (BJP MLA Dinakar Shetty) ಹೆಸರು ಬರೆದಿಟ್ಟು ನಿನ್ನೆ(ಅಕ್ಟೋಬರ್ 07) ರಾತ್ರಿ ಕಣ್ಮರೆಯಾಗಿದ್ದಾರೆ. ಕುಮಟಾ ಪುರಸಭೆಯಲ್ಲಿ ಆರ್.ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ ಆರ್ ಎನ್ನುವರು ನಾಪತ್ತೆಯಾಗಿದ್ದು ಕುಟುಂಬದಲ್ಲಿ ಆತಂಕ ಮನೆ ಮಾಡಿದೆ. ಈ ಸಂಬಂಧ ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೂಲತಃ ಭಟ್ಕಳದ ನಿವಾಸಿಯಾಗಿದ್ದ ವೆಂಕಟೇಶ ಆರ್ ಮನೆಯಲ್ಲೇ ಲೆಟರ್ ಬರೆದಿಟ್ಟಿದ್ದಾರೆ. ಅಲ್ಲದೇ ತಡರಾತ್ರಿ 2 ಗಂಟೆಗೆ ಪುರಸಭಾ ಸಿಬ್ಬಂದಿ ವಾಟ್ಸಪ್ ಗ್ರೂಪ್ನಲ್ಲಿ ಪತ್ರವನ್ನು ಹರಿಬಿಟ್ಟಿದ್ದಾರೆ. ‘ಬಿ’ ಖಾತಾ ಇರುವುದನ್ನು ‘ಎ’ ಖಾತಾಗೆ ಬದಲಿಸುವಂತೆ ಒತ್ತಡ ಹಾಗೂ 4 ಲಕ್ಷ ರೂ. ಹಣಕ್ಕಾಗಿ ವೆಂಕಟೇಶನನ್ನು ಮುಖ್ಯಾಧಿಕಾರಿ ಪೀಡಿಸುತ್ತಿದ್ದರು. ಅಶ್ಲೀಲ ಪದ ಬಳಸಿ, ಮಾನಸಿಕ ಹಿಂಸೆ, ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಕಾನೂನು ಮೀರಿ ಖಾತಾ ಬದಲಿಸಲು ವೆಂಕಟೇಶ್ ನಿರಾಕರಿಸಿದ್ದಾರೆ. ಆಗ ಶಾಸಕ ದಿನಕರ ಶೆಟ್ಟಿ ಒತ್ತಡ ಇದೆ ಎಂದು ಕುಡಿದ ಮತ್ತಿನಲ್ಲೇ ಮುಖ್ಯಾಧಿಕಾರಿ ಬೈದಿದ್ದಾರೆ. 4 ಲಕ್ಷಕ್ಕಾಗಿ ಶಾಸಕ ದಿನಕರ ಶೆಟ್ಟಿಯಿಂದ ಮುಖ್ಯಾಧಿಕಾರಿಗೆ ಒತ್ತಡ ಹಾಕಿದ್ದಾರೆ ಎಂದು ವೆಂಕಟೇಶ ಬರೆದಿಟ್ಟ ಪತ್ರದಲ್ಲಿದೆ ಭ್ರಷ್ಟಾಚಾರದ ಬಗ್ಗೆ ಉಲ್ಲೇಖಿಸಿದ್ದಾರೆ.
ಸದ್ಯ ಭಟ್ಕಳ ಪೊಲೀಸರು ವೆಂಕಟೇಶ ಹುಡುಕಾಟ ನಡೆಸಿದ್ದಾರೆ. ಮತ್ತೊಂದೆಡೆ ಮುಖ್ಯಾಧಿಕಾರಿಯನ್ನ ಅಮಾನತ್ತು ಮಾಡುವಂತೆ ಪುರಸಭೆ ಸಿಬ್ಬಂದಿ ಆಗ್ರಹಿಸಿದ್ದಾರೆ. ಇನ್ನು ಕುಮಟಾ ಪುರಸಭೆ ಮುಂಭಾಗ ದಲಿತ ಸಂಘಟನೆ ಮುಖಂಡರು ಜಮಾಯಿಸಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.