ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆಯಲ್ಲಿ ಹೊಸ ತಿರುವು. ಅನಾಮಿಕ ವ್ಯಕ್ತಿಯೊಬ್ಬರು ಶವಗಳನ್ನು ಹೂತಿರುವ ಸ್ಥಳವನ್ನು ಗುರುತಿಸಿದ್ದಾರೆ. ಎಸ್ಐಟಿ ತಂಡ ಸ್ಥಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದೆ.
ಧರ್ಮಸ್ಥಳ (ಜು.28): ಧರ್ಮಸ್ಥಳದಲ್ಲಿ ಕಳೆದ 10 ವರ್ಷಗಳ ಹಿಂದೆ ನೂರಾರು ಶವಗಳನ್ನು ಯಾವುದೇ ಕಾನೂನು ಪ್ರಕ್ರಿಯೆ ಮಾದೇ ನೆಲದಲ್ಲಿ ಹೂಳಲಾಗಿದೆ ಎಂಬ ಸಂಚಲನಕಾರಿ ಆರೋಪದ ಮೇಲೆ ರಾಜ್ಯ ಸರ್ಕಾರ ನೇಮಕ ಮಾಡಿರುವ ಎಸ್ಐಟಿ (SIT) ನಡೆಸುತ್ತಿರುವ ತನಿಖೆಗೆ ಹೊಸ ತಿರುವು ಸಿಕ್ಕಿದೆ. ನೇತ್ರಾವತಿ ನದಿಯ ಸ್ನಾನಘಟ್ಟದ ಸಮೀಪದ ಅರಣ್ಯ ಪ್ರದೇಶದಲ್ಲಿ ಶವಗಳನ್ನು ಹೂತಿರುವ ಸ್ಥಳವನ್ನು ಅನಾಮಿಕ ವ್ಯಕ್ತಿ ಗುರುತಿಸಿ ತೋರಿಸಿದ್ದಾನೆ. ಅನಾಮಿಕ ವ್ಯಕ್ತಿ ಹೀಗೆ, ಜಾಗ ತೋರಿಸಿದ್ದರಿಂದ ಎಸ್ಐಟಿ ತನಿಖೆ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಧರ್ಮಸ್ಥಳದ ನೇತ್ರಾವತಿ ನದಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಈಗಾಗಲೇ ತಾನು ತಲೆಬುರುಡೆಯನ್ನು ತಂದ ಸ್ಥಳ ಮತ್ತು ಶವ ಹೂಳಲಾಗಿದ್ದ ಸ್ಥಳದಲ್ಲಿ ಇನ್ನಷ್ಟು ಮೂಳೆಗಳು ಇವೆ ಎಂಬುದನ್ನು ಕೂಡ ಎಸ್ಐಟಿ ತಂಡಕ್ಕೆ ತೋರಿಸಿದ್ದಾನೆ. ಈ ವೇಳೆ ಕೇವಲ ಶವ ಹೂತಿದ್ದ ಜಾಗವಷ್ಟೇ ಅಲ್ಲ, ಅಲ್ಲಿನ ಸಮಾಧಿಯ ರೂಪದಲ್ಲಿದ್ದ ಕೆಲವು ಸ್ಥಳಗಳನ್ನೂ ನಿರ್ದಿಷ್ಟವಾಗಿ ಗುರುತಿಸಿದ್ದಾನೆ. ಇನ್ನು ಅನಾಮಿಕ ವ್ಯಕ್ತಿ ಸ್ಥಳ ತೋರಿಸಿದ ಆಧಾರದ ಮೇಲೆ ಅರಣ್ಯದ ಒಳಭಾಗದಲ್ಲಿ ಸಮಾಧಿಗಳ ಮೇಲೆ ಮಾರ್ಕಿಂಗ್ ಪ್ರಕ್ರಿಯೆ ಮಾಡಲಾಗಿದೆ. ದೂರುದಾರನ ಮಾಹಿತಿ ಆಧಾರದಲ್ಲಿ ಸ್ಥಳ ಗುರುತಿಸುವ ಆರಂಭಿಕ ಪ್ರಕ್ರಿಯೆಯನ್ನು ಇಂದು ಮಾಡಲಾಗಿದೆ.
ಜಾಗ ಗುರುತಿಸುವ ವೈಜ್ಞಾನಿಕ ಪ್ರಕ್ರಿಯೆ ಆರಂಭ:
ಸ್ಥಳ ಗುರುತಿಸಲು GPS ಆಧಾರಿತ ಸ್ಮಾರ್ಟ್ಮ್ಯಾಪ್ ಉಪಯೋಗಿಸಿ ಜಿಯೋ ಟ್ಯಾಗ್ (Geo-tagging) ಪ್ರಕ್ರಿಯೆ ನಡೆದಿದೆ.
ಅರಣ್ಯ ಹಾಗೂ ಕಂದಾಯ ಇಲಾಖೆ, ಫಾರೆನ್ಸಿಕ್ ವಿಜ್ಞಾನ ತಂಡ (FSL), ಅಸ್ಥಿಪಂಜರ ತಜ್ಞ (Osteologist), ಮಾನವಶಾಸ್ತ್ರಜ್ಞ (Anthropologist) ಹಾಗೂ ಮೆಡಿಕೋ-ಲೀಗಲ್ ತಜ್ಞರು ಈ ಸಂದರ್ಭದಲ್ಲಿ ಹಾಜರಿದ್ದರು.
ಸ್ಥಳದ ಮಣ್ಣಿನ ರಚನೆ, ಪರಿಸರದ ಸ್ಥಿತಿ, ಮತ್ತು ಸ್ಥಳದ ಭೌಗೋಳಿಕ ಲಕ್ಷಣಗಳು ಪರಿಶೀಲನೆಗೆ ಒಳಪಡಿಸಲಾಯಿತು.
ಡಿಜಿಟಲ್ ದಾಖಲೆಗಾಗಿ ಫೋಟೋಗ್ರಫಿ ಹಾಗೂ ವಿಡಿಯೋ ದಾಖಲೆ ಪ್ರಕ್ರಿಯೆ ನಡೆಸಲಾಯಿತು.
45 ನಿಮಿಷಗಳ ಸ್ಥಳ ಗುರುತಿಸುವ ಕಾರ್ಯ:
ಅನಾಮಿಕ ವ್ಯಕ್ತಿಯೊಂದಿಗೆ ಎಸ್ಐಟಿ ತನಿಖಾ ಅಧಿಕಾರಿ ದಯಾಮಾ ನೇತೃತ್ವದಲ್ಲಿ ಸುಮಾರು 45 ನಿಮಿಷಗಳ ಕಾಲ ಕಾಡಿನೊಳಗೆ ಇರುವ ಶವ ಹೂತಿರುವ ಸಾಧ್ಯತೆಯಿರುವ ಸ್ಥಳಗಳನ್ನು ಮಾರ್ಕ್ ಮಾಡಲಾಯಿತು. ಅಲ್ಲಿ ಗುರುತಿಸಿದ ಸ್ಥಳಗಳಲ್ಲಿ ಮುಂದಿನ ಹಂತದಲ್ಲಿ ಶೋಧಕಾರ್ಯ ಆರಂಭವಾಗಲಿದೆ. ಅಲ್ಲಿ ವೈಜ್ಞಾನಿಕವಾಗಿ ಶವಗಳನ್ನು ಹೊರತೆಗೆಯುವಂತಹ ಮತ್ತು ಶವಗಳ ಕುರುಹುಗಳು ಏನಾದರೂ ಲಭ್ಯ ಇವೆಯೇ ಎಂಬುದನ್ನು ಪತ್ತೆ ಮಾಡುವುದಕ್ಕೆ ಮುಂದಾಗಲಿದ್ದಾರೆ

ಭವಿಷ್ಯದಲ್ಲಿ ಸ್ಥಳವನ್ನು ಸುರಕ್ಷಿತಗೊಳಿಸಲು ಟೇಪ್ ಅಳವಡಿಕೆ:
ತಾತ್ಕಾಲಿಕವಾಗಿ ಗುರುತಿಸಿದ ಪ್ರದೇಶವನ್ನು ಎಚ್ಚರಿಕೆಯೊಂದಿಗೆ ಟೇಪ್ ಅಳವಡಿಸಿ ಶೋಧನೆಗೆ ತಯಾರಿ ನಡೆಸಲಾಗುತ್ತಿದೆ. ಇದರ ನಂತರ ಮಣ್ಣಿನ ಆಳ ಪರೀಕ್ಷೆ, ಶವಗಳ ಶೋಧನಾ ಪೂರ್ವ ತಯಾರಿ ಮುಂದಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ಅನಾಮಿಕ ವ್ಯಕ್ತಿಯ ಈ ಸಹಕಾರವು ತನಿಖೆಗೆ ಹೊಸ ದಿಕ್ಕು ನೀಡಿದರೂ, ಈ ವ್ಯಕ್ತಿ ಯಾರು? ಏಕೆ ಇಷ್ಟು ದಿನಗಳ ನಂತರ ಮುಂದೆ ಬಂದರು? ಎಂಬ ಪ್ರಶ್ನೆಗಳು ಇನ್ನೂ ಉತ್ತರದ ನಿರೀಕ್ಷೆಯಲ್ಲಿವೆ. ಆದರೆ ಈ ಬೆಳವಣಿಗೆಯಿಂದ ಧರ್ಮಸ್ಥಳ ಶವ ಪ್ರಕರಣ ಮತ್ತಷ್ಟು ಗಂಭೀರ ರೂಪ ಪಡೆಯುವ ಸಾಧ್ಯತೆ ಇದೆ.
