
ಉಡುಪಿ: ಭಾರೀ ಗಾಳಿ-ಮಳೆಯಿಂದಾಗಿ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ದೋಣಿಯೊಂದು ಮುಳುಗಿ ಮೂವರು ಮೀನುಗಾರರು ನಾಪತ್ತೆ ಆಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಗಂಗೊಳ್ಳಿಯ ಮಡಿ ಲೈಟ್ ಹೌಸ್ ಬಳಿ ನಡೆದಿದೆ.
ಲೋಹಿತ್ ಖಾರ್ವಿ (38), ಸುರೇಶ್ ಖಾರ್ವಿ (45), ಜಗನ್ನಾಥ್ ಖಾರ್ವಿ (43), ಸಂತೋಷ್ ಖಾರ್ವಿ (35) ದೋಣಿ ಮುಳುಗಿದ ಪರಿಣಾಮ ನೀರಿಗೆ ಬಿದ್ದಿದ್ದಾರೆ. ಅವರಲ್ಲಿ ಸಂತೋಷ್ ಖಾರ್ವಿ ಅನ್ನೋರು ರಕ್ಷಣೆ ಆಗಿದೆ. ಇನ್ನುಳಿದ ಮೂವರಿಗಾಗಿ ಶೋಧಕಾರ್ಯ ನಡೆಯುತ್ತಿದೆ.
ಕರಾವಳಿಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕಡಲು ಕೂಡ ಪ್ರಕ್ಷುಬ್ಧಗೊಂಡಿದೆ. ಗಾಳಿ, ಮಳೆಯ ನಡುವೆಯೂ ಮೀನುಗಾರಿಕೆಗೆ ತೆರಳಿದ್ದರು. ಮೀನು ಹಿಡಿದು ಸಮುದ್ರದಿಂದ ವಾಪಸ್ ಬರುತ್ತಿದ್ದ ವೇಳೆ ದೋಣಿ ಮಗುಚಿ ಅನಾಹುತ ಸಂಭವಿಸಿದೆ.
ನಾಪತ್ತೆಯಾಗಿರುವ ಮೂವರು ಮೀನುಗಾರರಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು ಕರಾವಳಿ ಕಾವಲು ಪಡೆ, ಗಂಗೊಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳ, ಸ್ಥಳೀಯ ಮೀನುಗಾರರು ಹುಡುಕಾಟ ನಡೆಸುತ್ತಿದ್ದಾರೆ.