
RCB ವಿಜಯೋತ್ಸವಕ್ಕೂ ಮುನ್ನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಘೋರ ದುರಂತ ಸಂಭವಿಸಿದೆ. ಸ್ಟೇಡಿಯಂ ಒಳಗೆ ಪ್ರವೇಶಿಸಲು ಲಕ್ಷಾಂತರ ಅಭಿಮಾನಿಗಳು ಒಂದೇ ಬಾರಿಗೆ ಆಗಮಿಸಿದ್ದಾರೆ. ಲಕ್ಷ, ಲಕ್ಷ ಆಭಿಮಾನಿಗಳ ಮಧ್ಯೆ ನೂಕುನುಗ್ಗಲು ನಡೆದಿದ್ದು, ಕಾಲ್ತುಳಿತಕ್ಕೆ ಮೃತಪಟ್ಟವರ ಸಂಖ್ಯೆ ಏರಿಕೆಯಾಗುತ್ತಿದೆ.
ಕಾಲ್ತುಳಿತದಲ್ಲಿ ಅಸ್ವಸ್ಥರಾದವರನ್ನ ಬೌರಿಂಗ್ ಆಸ್ಪತ್ರೆಗೆ ಸಾಗಿಸಲಾಯಿತು. ಬೌರಿಂಗ್ ಆಸ್ಪತ್ರೆಯಲ್ಲಿ ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ನಗರದ ಖಾಸಗಿ ಆಸ್ಪತ್ರೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ ಚಿನ್ನಸ್ವಾಮಿ ಸ್ಟೇಡಿಯಂ ದುರಂತದಲ್ಲಿ ಒಟ್ಟು 7 ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.

ನೂಕುನುಗ್ಗಲಿನ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲಾ ಗೇಟ್ಗಳನ್ನು ಬಂದ್ ಮಾಡಲಾಗಿದೆ. ಇದೀಗ ಸ್ಟೇಡಿಯಂ ಒಳಗೆ ಯಾರನ್ನು ಬಿಡುತ್ತಿಲ್ಲ. ಸ್ಟೇಡಿಯಂ ಒಳಗೆಯೂ ಜನ ಕಿಕ್ಕಿರಿದು ಸೇರಿದ್ದು, ಎಲ್ಲಾ ಗ್ಯಾಲರಿಯಲ್ಲೂ ಜನ ತುಂಬಿದ್ದಾರೆ.

ಗೇಟ್ ಬಳಿ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದ್ದು, ಸ್ಟೇಡಿಯಂ ಹೊರಗೆ ಸಹ ಯಾರನ್ನೂ ಬಿಡುತ್ತಿಲ್ಲ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ವಾತಾವರಣ ಹತೋಟಿಗೆ ತರಲು ಹರಸಾಹಸ ಪಡಲಾಗುತ್ತಿದೆ.