ಮಂಗಳೂರು: ಜಿಲ್ಲೆಯಲ್ಲಿ ಕರಾವಳಿ ಉತ್ಸವ (Karavali Utsav) ಸಂಭ್ರಮ ಆರಂಭವಾಗಿದೆ. ಕರಾವಳಿ ಉತ್ಸವ ಹಿನ್ನೆಲೆ ಜಿಲ್ಲಾಡಳಿತ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬಾನಂಗಳದಲ್ಲಿ ಹಾರಾಟಕ್ಕೊಂದು ಸುವರ್ಣ ಅವಕಾಶ ಕಲ್ಲಿಸಿದೆ. ಹೆಲಿಕ್ಯಾಪ್ಟರ್ ಏರಿ ಕಡಲನಗರಿಯ ಸೌಂದರ್ಯ ಕಣ್ತುಂಬಿಕೊಳ್ಳಬಹುದಾಗಿದೆ.

ಕಡಲನಗರಿ ಮಂಗಳೂರು (Mangaluru) ಕರಾವಳಿ ಉತ್ಸವಕ್ಕೆ ಸಜ್ಜಾಗುತ್ತಿದೆ. ಇದರ ಅಂಗವಾಗಿ ಜಿಲ್ಲಾಡಳಿತ ಹೆಲಿಟೂರಿಸಂ ಆಯೋಜಿಸಿದ್ದು, ಈ ಮೂಲಕ ಮಂಗಳೂರಿನ ಸೌಂದರ್ಯ ಬಾನಂಗಳದಲ್ಲಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಮೇರಿಹಿಲ್ ಹೆಲಿಪ್ಯಾಡ್ನಲ್ಲಿ ಹೆಲಿಟೂರಿಸಂಗೆ ಚಾಲನೆ ದೊರಕಿದೆ. ಬೆಂಗಳೂರಿನ ತುಂಬಿ ಏರ್ ಟ್ಯಾಕ್ಸಿ ಕಂಪೆನಿಯ ಸಹಯೋಗದೊಂದಿಗೆ ದ.ಕ. ಜಿಲ್ಲಾಡಳಿತ ಹೆಲಿಟೂರಿಸಂ ಅನ್ನು ಆಯೋಜಿಸಿದೆ. ಹೆಲಿಕಾಪ್ಟರ್ನಲ್ಲಿ ರೌಂಡ್ ಹೊಡೆದ ಮಂಗಳೂರಿಗರು ನಗರದ ಸೌಂದರ್ಯವನ್ನು ಆಕಾಶದ ಮೇಲಿನಿಂದ ಕಣ್ತುಂಬಿಕೊಂಡರು.

ಬಾನಂಗಳದಲ್ಲಿ ಕುಡ್ಲದ ಸೌಂದರ್ಯ ವೀಕ್ಷಿಸಲು ಬಯಸುವವರಿಗೆ ಡಿ.31ರವರೆಗೆ ಹೆಲಿಕಾಪ್ಟರ್ ಪ್ರಯಾಣಕ್ಕೆ ಅವಕಾಶವಿದೆ. 6-7 ನಿಮಿಷಗಳ ಕಾಲ ಹೆಲಿಕಾಪ್ಟರ್ನಲ್ಲಿ ರೌಂಡ್ ಹೊಡೆದು ಮಂಗಳೂರು ನಗರ, ನೇತ್ರಾವತಿ ನದಿ ತೀರ, ಬೀಚ್ ಸೌಂದರ್ಯವನ್ನು ವೀಕ್ಷಿಸಬಹುದು. ಪ್ರತಿ ರೌಂಡ್ನಲ್ಲಿ ಆರು ಮಂದಿಗೆ ಹೆಲಿಕಾಪ್ಟರ್ ಸುತ್ತಾಟಕ್ಕೆ ಅವಕಾಶವಿದೆ. ಇದಕ್ಕೆ ಕೇವಲ 4,500 ರೂ. ಪಾವತಿಸಿದರೆ ಸಾಕು ಯಾರು ಬೇಕಾದರೂ ಹೆಲಿಕಾಪ್ಟರ್ ಪ್ರಯಾಣ ಮಾಡಬಹುದು. www.helitaxii.com ನಲ್ಲಿ ಆನ್ಲೈನ್ ಬುಕ್ಕಿಂಗ್ ಹಾಗೂ ಸ್ಥಳದಲ್ಲೇ ಬುಕ್ಕಿಂಗ್ ಕೂಡಾ ಮಾಡಬಹುದು.

ಈ ಹೆಲಿಟೂರಿಸಂ, ಆಯೋಜಿಸಿದ್ದು ಒಳ್ಳೆಯದೇ ಆದ್ರೆ, 6-7 ನಿಮಿಷದ ಸಂಚಾರಕ್ಕೆ 4,500 ರೂ. ದರ ನಿಗದಿಸಿದ್ದು, ಕೊಂಚ ದುಬಾರಿಯೆನಿಸಿದೆ. ದರ ಇಳಿಕೆ ಮಾಡಿದ್ದಲ್ಲಿ ಜನ ಸಾಮಾನ್ಯರೂ ಇದರ ಸದ್ಬಳಕೆ ಮಾಡಬಹುದು ಎನ್ನುವ ಅಭಿಪ್ರಾಯ ಕೇಳಿಬಂದಿದೆ.