ಉಡುಪಿ : ಕಾರ್ಕಳದಲ್ಲಿ ನಡೆದ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾರ್ಕಳ ನಿವಾಸಿ ಅಭಯ್ (23) ಎಂದು ಗುರುತಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಸೋಮವಾರ ಮೊದಲ ಆರೋಪಿ ಅಲ್ತಾಫ್ಗೆ ಮಾದಕ ವಸ್ತುವನ್ನು ಕೊಟ್ಟಿರುವ ಆರೋಪದ ಮೇಲೆ ಅಭಯ್ನನ್ನು ಬಂಧಿಸಿದ್ದೇವೆ. ಇದರೊಂದಿಗೆ ಕೃತ್ಯ ಎಸಗಿದ ಮೇಲೆ, ಪ್ರಥಮ ಆರೋಪಿ ತಪ್ಪಿಸಿಕೊಳ್ಳಲು ಸಹಕಾರ ಮಾಡುವುದಕ್ಕೆ ಪ್ರಯತ್ನಿಸಿರುವುದು ನಮಗೆ ತನಿಖೆಯಲ್ಲಿ ಕಂಡುಬಂದಿರುತ್ತದೆ ಎಂದು ತಿಳಿಸಿದರು.

ಈಗ ಆತನನ್ನು ಬಂಧಿಸಿ ನಾಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. ಬಳಿಕ ಕಸ್ಟಡಿಗೆ ಪಡೆದುಕೊಂಡು, ಆತನನ್ನು ಸಂಪೂರ್ಣ ತನಿಖೆ ನಡೆಸುತ್ತೇನೆ. ಮುಂದೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ರೀತಿಯಲ್ಲಿ NDPS ಪ್ರಕರಣದಲ್ಲಿ ಅಭಯ್ನನ್ನು ಬಂಧಿಸಲಾಗಿದೆ. ಅಲ್ಲದೆ ಇನ್ನು ಎರಡು ಶಂಕಾಸ್ಪದ ವ್ಯಕ್ತಿಗಳನ್ನು ವಶಪಡಿಸಿಕೊಂಡಿರುತ್ತೇವೆ. ಅವರ ಪಾತ್ರದ ಬಗ್ಗೆ ತನಿಖೆ ನಡೆಸಿ, ಆದಷ್ಟು ಬೇಗನೆ ಪ್ರಕರಣವನ್ನು ಮುಕ್ತಾಯಗೊಳಿಸಲು ಪ್ರಯತ್ನಿಸುತ್ತೇವೆ ಎಂದು ಎಸ್ಪಿ ಹೇಳಿದರು.
ಆರೋಪಿ ಕಾರ್ಕಳ ತೆಲ್ಲರು ನಿವಾಸಿ ಅಭಯ್ ನನ್ನು ಬಂಧಿಸಲಾಗಿದೆ. ಈತ ಬಿಜೆಪಿ ಮತ್ತು ಭಜರಂಗದಳದ ಕಾರ್ಯಕರ್ತ ಎಂದು ವರದಿಯಾಗಿದೆ.
ಅಭಯ್ ಕಾಪುವಿನ ವ್ಯಕ್ತಿಯೊಂದಿಗೆ ಸೇರಿಕೊಂಡು ಟಿಪ್ಪರ್ ಖರೀದಿಸಿದ್ದ ಆದರೆ ಲೋನ್ ಕಂತು ಬಾಕಿ ಇರಿಸಿದ್ದ ಕಾರಣ ಆತನ ವಾಹನವನ್ನು ಫೈನಾನ್ಸ್ ಕಂಪನಿ ಮುಟ್ಟುಗೋಲು ಹಾಕಿಕೊಂಡ ನಂತರ ಬೆಂಗಳೂರಿನಲ್ಲಿ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ. ಅಲ್ತಾಫ್ ಹಾಗೂ ಅಭಯ್ ಇಬ್ಬರೂ ಕಾರ್ಕಳ ಜೋಡುರಸ್ತೆ ಬಳಿ ಟಿಪ್ಪರ್ ನಿಲ್ಲಿಸುತ್ತಿದ್ದರು. ಇವರಿಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು ಎಂದು ತಿಳಿದು ಬಂದಿದೆ.
