ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜು.23 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ನಿಂದ ತಮ್ಮ ರಾಜ್ಯಗಳಿಗೆ ಸುಮಾರು 50 ಸಾವಿರ ಕೋಟಿ ರು.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ನವದೆಹಲಿ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜು.23 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್ನಿಂದ ತಮ್ಮ ರಾಜ್ಯಗಳಿಗೆ ಸುಮಾರು 50 ಸಾವಿರ ಕೋಟಿ ರು.ಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿಲ್ಲ. ಮೋದಿ ಸರ್ಕಾರ ಈ ಇಬ್ಬರ ಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯು ಬೆಂಬಲ ಆಧರಿಸಿಯೇ ಜೀವಿತವಾಗಿದೆ. ಹೀಗಾಗಿ ಇವರ ಬೇಡಿಕೆಯು ಮೋದಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.

ಎರಡು ರಾಜ್ಯಗಳು 2025ನೇ ಸಾಲಿಗೆ ಹೆಚ್ಚುವರಿ ನಿಧಿಯಾಗಿ ಸುಮಾರು 48,000 ಕೋಟಿ ರು.ಗೆ ಬೇಡಿಕೆ ಇಟ್ಟಿವೆ. ಇದರ ಜತೆಗೆ ಕೇಂದ್ರವು ಬಂಡವಾಳ ವೆಚ್ಚಕ್ಕಾಗಿ ನೀಡುವ 1 ಲಕ್ಷ ಕೋಟಿ ರು. ಬಡ್ಡಿ ರಹಿತ ದೀರ್ಘಾವಧಿಯ ಸಾಲವನ್ನು ದ್ವಿಗುಣಗೊಳಿಸಲು ರಾಜ್ಯಗಳು ಕೇಳಿಕೊಂಡಿವೆ ಎಂದು ವರದಿ ಹೇಳಿದೆ. ಈ ಹಿಂದಿನ ಸಾಲಿನಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳಿಗೆ ವಿಶೇಷ ಸಹಾಯಕ್ಕಾಗಿ 1.3 ಲಕ್ಷ ಕೋಟಿ ರು. ಮೀಸಲಿಟ್ಟಿತ್ತು.
