ಮಣಿಪುರ ಭೇಟಿಗೆ ಜೈವಿಕವಲ್ಲದ ಪ್ರಧಾನಿಗೆ ಸಮಯ ಸಿಕ್ಕಿಲ್ಲ ಎಂದು ಟೀಕೆ
ನವದೆಹಲಿ: ಲೋಕಸಭೆ (Lok Sabha) ವಿರೋಧ ಪಕ್ಷದ ನಾಯಕರಾದ ಬಳಿಕ ಮೊದಲ ಬಾರಿಗೆ ರಾಹುಲ್ ಗಾಂಧಿ (Rahul Gandhi) ಈಶಾನ್ಯ ರಾಜ್ಯಗಳ ಪ್ರವಾಸ ಆರಂಭಿಸಿದ್ದಾರೆ. ಅಸ್ಸಾಂ (Assam) ಮತ್ತು ಮಣಿಪುರಕ್ಕೆ (Manipur) ಭೇಟಿ ನೀಡಿದ ಅವರು ಪ್ರವಾಹದಲ್ಲಿ ಸಿಲುಕಿರುವ ಜನರು ಮತ್ತು ಕೋಮು ಗಲಭೆಯಲ್ಲಿ ಸಂತ್ರಸ್ತರಾದ ಜನರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ರಾಹುಲ್ ಗಾಂಧಿ ಮೊದಲು ಅಸ್ಸಾಂನ ಸಿಲ್ಚಾರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲಿ ಅವರನ್ನು ಅಸ್ಸಾಂ ಮತ್ತು ಮಣಿಪುರದ ಕಾಂಗ್ರೆಸ್ ನಾಯಕರು ಅಭಿನಂದಿಸಿದರು. ಅಲ್ಲಿಂದ ಫುಲೆರ್ಟಲ್ಗೆ ತೆರಳಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ಪ್ರವಾಹ ಪೀಡಿತ ಜನರೊಂದಿಗೆ ಸಂವಾದ ನಡೆಸಿದರು

ಬಳಿಕ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದಿಂದ ಹಾನಿಗೊಳಗಾಗಿದ್ದ ಚುರಚಂದಪುರಕ್ಕೆ ತೆರಳಿ ಅಲ್ಲಿನ ಜನರೊಂದಿಗೆ ಸಂವಾದ ನಡೆಸಿದರು. ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಮಾತನಾಡಿ, ಅಹವಾಲು ಸ್ವೀಕರಿಸಿದರು. ಇದೇ ವೇಳೆ ಅಸ್ಸಾಂನಲ್ಲಿ ಉಂಟಾದ ಪ್ರವಾಹದ ಬಗ್ಗೆ ಸಂಸತ್ನಲ್ಲಿ ಚರ್ಚೆ ನಡೆಸುವಂತೆ ಕಾಂಗ್ರೆಸ್ ನಾಯಕರು ಮನವಿ ಮಾಡಿದರು
ಈ ನಡುವೆ ರಾಹುಲ್ ಗಾಂಧಿ ಪ್ರವಾಸದ ಬಗ್ಗೆ ಬಿಜೆಪಿ ಕಾಂಗ್ರೆಸ್ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿವೆ. ಈ ಬಗ್ಗೆ ಟ್ವಿಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ರಾಹುಲ್ ಗಾಂಧಿ ಮಣಿಪುರಕ್ಕೆ ಭೇಟಿ ನೀಡುವ ಸಮಯದಲ್ಲಿ ಜೈವಿಕ ಪ್ರಧಾನಿ ಮಾಸ್ಕೊಗೆ ತೆರಳುತ್ತಿದ್ದಾರೆ. ಮಣಿಪುರಕ್ಕೆ ರಾಹುಲ್ ಗಾಂಧಿಯವರ ಮೂರನೇ ಭೇಟಿ ಇದಾಗಿದೆ

ಮಣಿಪುರಕ್ಕೆ ಭೇಟಿ ನೀಡಲು ಜೈವಿಕವಲ್ಲದ ಪ್ರಧಾನಮಂತ್ರಿಗೆ ಸಮಯ ಸಿಕ್ಕಿಲ್ಲ ಅಥವಾ ಒಲವು ತೋರಲಿಲ್ಲ. 2023ರಲ್ಲಿ ಅವರ ಪಕ್ಷದವರಾದ ರಾಜ್ಯದ ಮುಖ್ಯಮಂತ್ರಿಯನ್ನು ಭೇಟಿ ಮಾಡಿಲ್ಲ. ಇದರ ಜೊತೆಗೆ ರಾಜ್ಯದ ಇತರ ರಾಜಕೀಯ ನಾಯಕರನ್ನು, ಶಾಸಕರು ಮತ್ತು ಸಂಸದರನ್ನು ಭೇಟಿ ಮಾಡಿಲ್ಲ ಎಂದು ಕಿಡಿಕಾರಿದರು.
