
ಸುಡುವ ರಣ ಬಿಸಿಲು, ಬಿಸಿ ಗಾಳಿಯಿಂದ ತತ್ತರಿಸಿದ ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಈ ಹಿನ್ನೆಲೆಯಲ್ಲಿ ಬಿಸಿ ಬಿಸಿಯಾಗಿದ್ದ ವಾತಾವರಣವೂ ಸಹ ಕೊಂಚ ಕೂಲ್ ಕೂಲ್ ಆಗಿದೆ. ಹೌದು ಇಂದು(ಮೇ 03) ಸುರಿದ ಮಳೆಯಿಂದಾಗಿ ಹಲವೆಡೆ ಕೆಲ ಅನಾಹುತಗಳು ಸಂಭವಿಸಿವೆ. ಹಾಗಾದ್ರೆ, ಯಾವ್ಯಾವ ಜಿಲ್ಲೆಯಲ್ಲಿ ಮಳೆಯಾಗಿದೆ? ಏನೇನು ಅದ್ವಾನವಾಗಿದೆ ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, ಮೇ 03: ರಾಜ್ಯದಲ್ಲಿ (Karnataka) ಬಿಸಿ ಗಾಳಿಯೊಂದಿಗೆ ತಾಪಮಾನ ಹೆಚ್ಚಾಗಿತ್ತು. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನಕ್ಕೆ ಜನರು ಅಕ್ಷರಶಃ ನಲುಗಿದ್ದರು. ಇನ್ನು ನಗರದಲ್ಲಿ ಕೂಡ ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ದಾಖಲಾಗಿತ್ತು. ಆದರೆ ನಿನ್ನೆಯಿಂದ ವರುಣ ದೇವನ ಕೃಪೆಯಾಗಿದ್ದು, ಬೆಂಗಳೂರಿನಲ್ಲಿ ಜೋರು ಮಳೆಯ ಆರ್ಭಟ ಶುರುವಾಗಿದೆ. ಇಂದು ಕೂಡ ಸಿಲಿಕಾನ್ ಸಿಟಿಯಲ್ಲಿ ಮಳೆ ಸುರಿದಿದ್ದು, ವಾತಾವರಣವೂ ಸಹ ಕೊಂಚ ಕೂಲ್ ಕೂಲ್ ಆಗಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಮಳೆ ಆಗಿದ್ದು, ಕೆಲ ಅವಾಂತರಗಳು ಕೂಡ ಸಂಭವಿಸಿದೆ. ಆ ಮೂಲಕ ಜನ ಜೀವನ ಅಸ್ತವ್ಯಸ್ತವಾಗಿದೆ.

ಸಿಡಿಲು ಬಡಿದು ಹೊತ್ತಿಉರಿದ ಪ್ರವಾಸಿತಾಣದ ಗಿರಿಜನ ಮನೆ
ರಾಮನಗರದಲ್ಲಿ ಭಯಾನಕ ಗುಡುಗು ಸಿಡಿಲಿನೊಂದಿಗೆ ಮಳೆ ಸುರಿದ ಪರಿಣಾಮ ನಗರದ ಪ್ರಖ್ಯಾತ ಪ್ರವಾಸೀ ತಾಣದ ಗಿರಿಜನ ಮನೆ ಹೊತ್ತಿ ಉರಿದಿದೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿರುವ ಜಾನಪದ ಲೋಕದಲ್ಲಿ ನಿರ್ಮಾಣ ಮಾಡಿದ ಹಾಡಿ ಜನಗಳ ಮನೆ ಹೊತ್ತಿ ಉರಿದಿದೆ. ಹೀಗಾಗಿ ಸಿಡಿಲಿನ ಆರ್ಭಟಕ್ಕೆ ಪ್ರವಾಸಿಗರು ಆತಂಕಗೊಂಡಿದ್ದರು.
ಹುಲ್ಲಿನಿಂದ ಮಾಡಿದ ಮನೆಗೆ ಸಿಡಿಲು ಬಡಿದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸಲಾಗಿದೆ. ಸದ್ಯ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಬಿರುಗಾಳಿ ಸಹಿತ ಬಾರಿ ಮಳೆ: ಧರೆಗುರುಳಿದ ಮರದ ರೆಂಬೆ ಕೊಂಬೆಗಳು
ಮೈಸೂರಿನಲ್ಲಿ ಹಲವೆಡೆ ಬಿರುಗಾಳಿ ಸಹಿತ ಬಾರಿ ಮಳೆ ಹಿನ್ನೆಲೆ ಮರದ ರೆಂಬೆ ಕೊಂಬೆಗಳು ಧರೆಗುರುಳಿವೆ. ನಗರದ ಕಾಳಿದಾಸ ರಸ್ತೆಯಲ್ಲಿ ಕಾರುಗಳ ಮೇಲೆ ಮರದ ರಂಬೆಗಳು ಬಿದ್ದ ಪರಿಣಾಮ ಕಾರುಗಳು ಜಖಂ ಆಗಿವೆ. ಬಿರುಗಾಳಿಯ ರಭಸಕ್ಕೆ ರಂಬೆ ಕೊಂಬೆಗಳು ತುಂಡಿರಿಸಿವೆ.
ವರ್ಷದ ಮೊದಲ ಮಳೆ ಕಂಡು ಮಂಡ್ಯ ಜನರ ಮೊಗದಲ್ಲಿ ಹರ್ಷ
ಮಂಡ್ಯದಲ್ಲಿ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಆ ಮೂಲಕ ಬಿಸಿಲ ಬೇಗೆಯಿಂದ ಬಸವಳಿದಿದ್ದ ಮಂದಿಗೆ ಮಳೆರಾಯ ತಂಪೆರೆದಿದ್ದಾನೆ. ಮಂಡ್ಯ ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಮಳೆ ಆಗಿದೆ. ವರ್ಷದ ಮೊದಲ ಮಳೆ ಕಂಡು ರೈತರು, ಮಂಡ್ಯ ಜನರ ಮೊಗದಲ್ಲಿ ಹರ್ಷ ಉಂಟಾಗಿದೆ.

ಸಿಡಿಲು ಬಡಿದು ಮಹಿಳೆ ಹಾಗೂ 20ಕ್ಕೂ ಹೆಚ್ಚು ಮೇಕೆಗಳು ಸಾವು
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆ ಹಿನ್ನಲೆ ಸಿಡಿಲು ಬಡಿದು ಮಹಿಳೆ ಹಾಗೂ 20ಕ್ಕೂ ಹೆಚ್ಚು ಮೇಕೆಗಳು ಸಾವನ್ನಪ್ಪಿರುವಂತಹ ಘಟನೆ ಹೊಸಕೋಟೆ ತಾಲೂಕಿನ ಗಣಗಲು ಗ್ರಾಮದ ಬಳಿ ಸಂಭವಿಸಿದೆ. ಮಳೆ ಬರುತ್ತಿದ್ದಾಗ ಮರದ ಕೆಳಗೆ ನಿಂತಿದ್ದ ರತ್ನಮ್ಮ ಮೃತ ದುರ್ದೈವಿ. ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.