
ಕರಾವಳಿಯಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಮಳೆಯ ಮುನ್ಸೂಚನೆಯ ಬೆನ್ನಲ್ಲೇ ಕಡಲು ಆರ್ಭಟಿಸುತ್ತಿದೆ. ಅಲೆಗಳ ಆರ್ಭಟದ ಸುಳಿಗೆ ಮೂವರು ಪ್ರವಾಸಿಗರು ಸಿಲುಕಿದ ಘಟನೆ ಮಲ್ಪೆಯಲ್ಲಿ ನಡೆದಿದೆ. ಈ ಪೈಕಿ ಓರ್ವ ಮೃತನಾಗಿದ್ದರೆ, ಮತ್ತಿಬ್ಬರು ಚೇತರಿಸಿಕೊಂಡಿದ್ದಾರೆ.

ಉಡುಪಿ, ಏ.18: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ. ಹೌದು, ಉಡುಪಿ ಜಿಲ್ಲೆಯ ಮಲ್ಪೆ ಬೀಚಿನಲ್ಲಿ(Malpe Beach) ಈ ದುರ್ಘಟನೆ ಸಂಭವಿಸಿದೆ. ದೂರದ ಹಾಸನದ ಬೇಲೂರಿನಿಂದ ಪ್ರವಾಸಕ್ಕೆ ಬಂದ ಕುಟುಂಬವೊಂದರ ಮೂವರು ನೀರಿಗೆ ಇಳಿದಿದ್ದರು ಅಲೆಗಳ ಜೊತೆ ಆಟವಾಡುತ್ತಾ ತೀರದಿಂದ ಸಾಕಷ್ಟು ಮುಂದೆ ಹೋಗಿದ್ದರು. ಇದಕ್ಕಿದ್ದಂತೆ ಅಲೆಗಳ ಆರ್ಭಟ ಹೆಚ್ಚಿ, ಈ ಬಗ್ಗೆ ಅರಿವಿಲ್ಲದ ಮೂವರು ಪ್ರವಾಸಿಗರು ನೀರು ಪಾಲಾಗಿದ್ದರು. ಈ ವೇಳೆ ಬೀಚ್ ನಿರ್ವಹಣೆ ಮಾಡುವ, ಓಸಿಯನ್ ಅಡ್ವೆಂಚರ್ಸ್ನವರು, ತಕ್ಷಣ ಜಾಗೃತರಾಗಿ ಕಾರ್ಯಚರಣೆ ನಡೆಸಿ, ಬೋಟುಗಳನ್ನು ಬಳಸಿಕೊಂಡು ಕಡಲಿಗಿಳಿದು ಇಬ್ಬರನ್ನು ರಕ್ಷಿಸಿದರು. ಆದರೆ, ಮೂರನೇ ವ್ಯಕ್ತಿ ನೀರಿನ ಅಲೆಗೆ ಸಿಲುಕಿರುವುದು ಅರಿವಿಗೆ ಬರುವುದು ತಡವಾಗಿದ್ದ ಹಿನ್ನಲೆ ಆತನನ್ನು ಮೇಲಕ್ಕೆತ್ತಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದಾಗಲೇ ಸಾಕಷ್ಟು ನೀರು ಕುಡಿದಿದ್ದ ಗಿರೀಶ್(26) ಎಂಬ ಪ್ರವಾಸಿಗ ಕೊನೆಯುಸಿರೆಳೆದಿದ್ದಾನೆ. ಇನ್ನುಳಿದ ಅನಂತ ಗೌಡ(42), ಸಂತೋಷ್ (27) ಪಾರಾಗಿದ್ದಾರೆ.

ಹಾಸನದ ಬೇಲೂರಿನಿಂದ ಎಂಟು ಮಂದಿಯ ಕುಟುಂಬ ಶೃಂಗೇರಿ ಮೂಲಕ ಮಲ್ಪೆ ಬೀಚ್ಗೆ ಬಂದಿತ್ತು. ಈ ಪೈಕಿ 42 ವರ್ಷ ಪ್ರಾಯದ ಅನಂತ ಗೌಡ, 27 ವರ್ಷ ಪ್ರಾಯದ ಸಂತೋಷ್ ಹಾಗೂ 26 ವರ್ಷ ದ ಗಿರೀಶ್ ಎಂಬುವರು ನೀರಿನ ಸುಳಿಗೆ ಸಿಕ್ಕಿದರು. ಗಿರೀಶ್ ಮೃತರಾದರೆ ಮತ್ತೆ ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಹವಾಮಾನ ವೈಪರಿತ್ಯ ಸಂಭವಿಸಿದಾಗ, ಕಡಲಿನ ಅಲೆಗಳು ಅಬ್ಬರಿಸುವುದು ಸಾಮಾನ್ಯ. ಸ್ಥಳೀಯವಾಗಿ ಇದನ್ನು ಮಾರಿಅಲೆ ಎಂದು ಕರೆಯುತ್ತಾರೆ. ಅಪಾಯದ ಅರಿವಿಲ್ಲದೆ ಪ್ರವಾಸಿಗರು, ನೀರಿಗಿಳಿದಾಗ ಇಂತಹ ದುರ್ಘಟನೆಗಳು ಪದೇಪದೇ ಸಂಭವಿಸುತ್ತಿದೆ.
