
ಆಟೋ ಪಾರ್ಕ್ ಮಾಡುವ ವಿಚಾರಕ್ಕೆ 2 ಕುಟುಂಬಗಳ ನಡುವೆ ಜಗಳವಾಗಿದ್ದು ಮಾರಾಮಾರಿ ನಡೆದಿದೆ. ಮೊದಲಿಗೆ ಈ ಘಟನೆಯನ್ನು ಕೋಮು ಗಲಭೆ ಎನ್ನಲಾಗಿದ್ದು ಸದ್ಯ ಬರೀ ಗಲಾಟೆ. ಇದಕ್ಕೆ ಕೋಮುವಾದದ ಆಯಾಮವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸಂಸದ ಪ್ರತಾಪ್ ಸಿಂಹನವರು ಟ್ವೀಟ್ ಮೂಲಕ ಕೋಮು ಗಲಭೆ ಎಂದು ಆರೋಪಿಸಿದ್ದರು.

ಬೆಂಗಳೂರು, ಮಾರ್ಚ್.25: ಆಟೋ ಪಾರ್ಕಿಂಗ್ (Auto Parking) ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆಯಾಗಿದ್ದು ಘಟನೆಯಲ್ಲಿ ಶಿವಕುಮಾರ್ ಕುಟುಂಬ ಸೇರಿ 8 ಜನರ ಮೇಲೆ ಹಲ್ಲೆ ನಡೆದಿರುವ ಘಟನೆ ಬೆಂಗಳೂರಿನ ಪ್ರಗತಿಪರ ಬಡವಾಣೆಯಲ್ಲಿ ನಿನ್ನೆ ರಾತ್ರಿ ನಡೆದಿದೆ. ಭಾನುವಾರ ರಾತ್ರಿ ಆಟೋ ಪಾರ್ಕಿಂಗ್ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ಸಂಭವಿಸಿದೆ. ಎರಡೂ ಕುಟುಂಬಗಳೂ ಬೇರೆ ಬೇರೆ ಧರ್ಮದವರಾದ ಕಾರಣ ಕೋಮು ಉದ್ವಿಗ್ನತೆಯ ವದಂತಿ ಹರಿದಾಡಿತ್ತು. ಸದ್ಯ ಈಗ ಅದೊಂದು ಜಗಳವಾಗಿದ್ದು ಘಟನೆಯಲ್ಲಿ ಮಹಿಳೆಯರು ಸೇರಿದಂತೆ ಅನೇಕರ ಮೇಲೆ ಹಲ್ಲೆಯಾಗಿದೆ ಎಂದು ತಿಳಿದುಬಂದಿದೆ.

ಸಣ್ಣ ರಸ್ತೆಯ ಏರಿಯಾದ ಅಕ್ಕಪಕ್ಕದ ನಿವಾಸಿಗಳಾದ ಶಿವಕುಮಾರ್ ಹಾಗೂ ಸೈಯದ್ ತಾಹ ಎಂಬ ಇಬ್ಬರು ಆಟೋ ಪಾರ್ಕಿಂಗ್ ವಿಚಾರಕ್ಕೆ ಜಗಳವಾಡಿಕೊಂಡಿದ್ದಾರೆ. ಶಿವಕುಮಾರ್ ತಮ್ಮ ಮನೆಯ ಮುಂದೆ ಆಟೋ ನಿಲ್ಲಿಸಿಕೊಂಡಿದ್ದರು. ಸೈಯದ್ ತಾಹ ಮನೆಯ ಮುಂದೆ ಆತನ ಸಂಬಂಧಿ ಆಟೋ ನಿಲ್ಲಿಸಿದ್ದ. ವೇಗವಾಗಿ ಬಂದು ಆಟೋ ನಿಲ್ಲಿಸಿದ್ದಕ್ಕೆ ತಾಹ ಸಂಬಂಧಿಯನ್ನು ಪಕ್ಕದ ಮನೆ ನಿವಾಸಿ ಶಿವಕುಮಾರ್ ಹಾಗೂ ಕುಟುಂಬಸ್ಥರು ಪ್ರಶ್ನಿಸಿದ್ದರು. ಇದೇ ವಿಚಾರಕ್ಕೆ ಪರಸ್ಪರ ಗಲಾಟೆ ನಡೆಯುತ್ತಿದ್ದಾಗ ಘಟನಾ ಸ್ಥಳಕ್ಕೆ ಜನ ಸೇರಿದ್ದರು

ನಾಲ್ವರು ಮಹಿಳೆಯರು ಹಾಗೂ ನಾಲ್ವರು ಪುರಷರ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆಸಿ ನಾಪತ್ತೆಯಾದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರೋರಾತ್ರಿ ಟ್ವೀಟ್ ಡಿಲೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ
ಇನ್ನು ಗಲಾಟೆ ನಡೆದ ಕೆಲವೇ ಗಂಟೆಗಳಲ್ಲಿ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು. “wakeup Hindus” ಎಂದು ಟ್ವಿಟ್ ಮಾಡಿದ್ದರು. ಗಲಾಟೆ ವೇಳೆ ಸೆರೆ ಹಿಡಿಯಲಾದ ದೃಶ್ಯ ಸಮೇತ ಟ್ವೀಟ್ ಮಾಡಿ ಈ ಘಟನೆ ನಡೆದಿರುವುದು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ. ಈ ಘಟನೆಯ ವಿಚಾರ ನಗರ ಪೊಲೀಸ್ ಆಯುಕ್ತ ದಯಾನಂದರ ಗಮನಕ್ಕೂ ತಂದಿದ್ದೇನೆ ಎಂದು ಟ್ವೀಟ್ ಮಾಡಿದ್ದರು. ಸಂಸದ ಟ್ವೀಟ್ ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡುತ್ತಿದ್ದಂತೆ ಟ್ವೀಟ್ ಡಿಲೀಟ್ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ ರಾತ್ರೋರಾತ್ರಿ ಟ್ವೀಟ್ ಡಿಲೀಟ್ ಮಾಡಿದ್ದಾರೆ.

ತನಿಖೆಯಲ್ಲಿ ಯಾವುದೇ ಕೋಮು ಆಯಾಮ ಕಂಡು ಬಂದಿಲ್ಲ
ಮತ್ತೊಂದೆಡೆ ಘಟನೆ ಸಂಬಂಧ ದಕ್ಷಿಣ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾಹಿತಿ ನೀಡಿದ್ದಾರೆ. ಹಲ್ಲೆಗೊಳಗಾದವರು ಹಾಗೂ ಹಲ್ಲೆ ಮಾಡಿದ್ದಾರೆ ಎನ್ನಲಾದ ಸೈಯಿದ್ ತಾಹ ಅಕ್ಕಪಕ್ಕದ ಮನೆಯವರು. ಎರಡು ಕುಟುಂಬಗಳು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಈವರೆಗಿನ ತನಿಖೆಯಲ್ಲಿ ಯಾವುದೇ ಕೋಮು ಆಯಾಮ ಕಂಡು ಬಂದಿಲ್ಲ.

ಗಲಾಟೆ ವೇಳೆ ಹಲ್ಲೆಗೊಳಗಾದವರು ಪ್ರತಿಕ್ರಿಯಿಸಿದ್ದು, ಅಪರಿಚಿತ ವ್ಯಕ್ತಿ ಮನೆಯ ಗೇಟ್ ಬಳಿ ಆಟೋ ತಂದು ನಿಲ್ಲಿಸಿದ್ದ. ಇದನ್ನು ಶಿವಕುಮಾರ್ ಪ್ರಶ್ನೆ ಮಾಡಿದ್ದರು. ಅವಾಚ್ಯ ಶಬ್ಧ ಬಳಸಿ ಬೈದ ಆ ವ್ಯಕ್ತಿ ಗಾಡಿ ಪಾರ್ಕ್ ಮಾಡಿ ಹೋಗುತಿದ್ದ. ಈ ವೇಳೆ ಶಿವಕುಮಾರ್ ಆತನನ್ನು ಕರೆದರು. ಆದರೇ ಹಾಗೇ ನಡೆದುಕೊಂಡು ಹೋದ ಆತ ಕೆಲವರಿಗೆ ಫೋನ್ ಮಾಡಿ ಕರೆದಿದ್ದ.