
ರಾಜ್ಯಸಭಾ ಚುನಾವಣೆಯಲ್ಲಿ ನಾಸೀರ್ ಹುಸೇನ್ ಗೆದ್ದ ಬಳಿಕ ವಿಜಯೋತ್ಸವದ ವೇಳೆ ಅವರ ಬೆಂಬಲಿಗರು ಕೂಗಿದ್ದು ಸಾಸೀರ್ ಸಾಬ್ ಝಿಂದಾಬಾದ್ ಹೊರತು, ಪಾಕಿಸ್ತಾನ್ ಝಿಂದಾಬಾದ್ ಅಲ್ಲ, ಆದರೆ ಕನ್ನಡದ ಮಾಧ್ಯಮಗಳು ಇದನ್ನು ತಿರುಚಿವೆ ಎಂದು ಘೋಷಣೆಯ ವೇಳೆ ಸ್ಥಳದಲ್ಲಿದ್ದ ಎಎನ್ಐ ಪತ್ರಕರ್ತ ಎಂ.ಮಧು ತಿಳಿಸಿದ್ದಾರೆ.
ಎಎನ್ಐ ಕರ್ನಾಟಕ ಮುಖ್ಯಸ್ಥರೂ ಆಗಿರುವ ಮಧು ಅವರು ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದು,

‘ಇವರು ಕಾಂಗ್ರೆಸ್ ಪಕ್ಷದ ಸಂಸದ ನಾಸೀರ್ ಹುಸೇನ್. ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದ ಬಳಿಕ ಇವರ ಬೆಂಬಲಿಗರು ನಾಸೀರ್ ಸಾಬ್ ಝಿಂದಾಬಾದ್, ನಾಸೀರ್ ಸಾಬ್ ಝಿಂದಾಬಾದ್, ಸೈಯದ್ ಸಾಬ್ ಝಿಂದಾಬಾದ್ ಎಂದು ಕೂಗಿದರು. ಆದರೆ ಕನ್ನಡದ ಸುದ್ದಿವಾಹಿನಿಗಳು ಇದನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಪ್ಪಾಗಿ ಸುದ್ದಿ ಮಾಡಿದೆ. ಇದು ಉದ್ದೇಶಪೂರ್ವಕ ಕರುಣಾಜನಕ ಪ್ರಮಾದ ಎಂದು ವಿಷಾದವನ್ನು ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಮಧು ಅವರು ಮತ್ತೊಂದು ಪೋಸ್ಟ್ ಮಾಡಿದ್ದು, ಇದನ್ನು ಪೊಲೀಸ್, ಸರ್ಕಾರ ಮತ್ತು ಪ್ರತಿಪಕ್ಷಗಳು ಸಾಬೀತುಪಡಿಸಬೇಕು. ನಾನು ನೋಡಿದ್ದನ್ನು ಮತ್ತು ನಾನು ಕೇಳಿದ್ದನ್ನು ಟ್ವೀಟ್ ಮಾಡಿದ್ದೇನೆ. ಆ ಬೆಂಬಲಿಗರ ಗುಂಪಿನಲ್ಲಿ ಯಾರೂ ಕೂಡ ಯಾವುದೇ ದೇಶದ ಪರವಾಗಿ ಯಾವುದೇ ಘೋಷಣೆಯನ್ನು ಕೂಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪತ್ರಕರ್ತ ಮಧು ಅವರು ಆರಂಭದಿಂದ ಕೊನೆಯವರೆಗೂ ಸ್ಥಳದಲ್ಲಿದ್ದರು ಎಂದು ಹೇಳಲಾಗಿದೆ. ಇದಲ್ಲದೆ ಮಧು ಅವರಿಗೆ ತಮ್ಮ ಪೋಸ್ಟ್ ಅಳಿಸಿ ಹಾಕುವಂತೆ ಒತ್ತಡಗಳನ್ನು ಹೇರಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ಮಾಧ್ಯಮಗಳ ವರದಿ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ, ದೇಶದಲ್ಲಿ ಬಿಜೆಪಿ ಸವಾಲುಗಳನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲ “ಪಾಕಿಸ್ತಾನ್ ಜಿಂದಾಬಾದ್” ಎನ್ನುವ ಶಬ್ದ ಸದ್ದು ಮಾಡುತ್ತದೆ! ಮಾಧ್ಯಮ ಸ್ನೇಹಿತರಲ್ಲಿ ಕೇಳಬೇಕು ಎನಿಸುವ ಒಂದಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ, ವಿಜಯೋತ್ಸವ ಆಚರಣೆಯ ವೇಳೆ ಅಲ್ಲಿ ಉಪಸ್ಥಿತರಿದ್ದ ಒಂದಷ್ಟು ಮಾಧ್ಯಮ ಸ್ನೇಹಿತರು ಅಲ್ಲಿ “ನಾಸಿರ್ ಸಾಬ್ ಜಿಂದಾಬಾದ್” ಎಂದು ಕೂಗಿರುವುದಾಗಿ ಹೇಳಿದ್ದಾರೆ. ಅಕಸ್ಮಾತ್ ಅಲ್ಲಿ “ಪಾಕಿಸ್ತಾನ್” ಎಂದೇ ಕೂಗಿದ್ದರೆ ಎಲ್ಲರಿಗೂ ಒಂದೇ ರೀತಿ ಕೇಳಿಸಿರಬೇಕಲ್ಲವೇ? ಅಕಸ್ಮಾತ್ ಆತ ನಿಜಕ್ಕೂ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದರೆ ಸಹಜವಾಗಿ ಪತ್ರಕರ್ತರ ಪ್ರಜ್ಞೆ ಜಾಗೃತವಾಗಿ ಆತನತ್ತ ಗಮನ ಹರಿಸುತ್ತಿದ್ದರು, ಆತನತ್ತ ಕ್ಯಾಮರಾ ತಿರುಗಿಸುತ್ತಿದ್ದರು, ಆತನ ಮೇಲೆ ಮುಗಿಬೀಳುತ್ತಿದ್ದರು, ಆದರೆ ಇಲ್ಲಿ ಪತ್ರಕರ್ತರು ಆತನತ್ತ ಕಿಂಚಿತ್ತೂ ಗಮನಿಸುವುದಿಲ್ಲ, ಆತ ಹಾಗೆ ಕೂಗಿದ್ದೇ ಆಗಿದ್ದರೆ ಅಲ್ಲಿ ನೆರೆದಿದ್ದವರು ಖಂಡಿತಾ ಸುಮ್ಮನಿರುತ್ತಿರಲಿಲ್ಲ, ಕೂಡಲೇ ಆ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು, ಪತ್ರಕರ್ತರೂ ಸೇರಿದಂತೆ ಅಲ್ಲಿ ನೆರೆದಿದ್ದವರ ಮ್ಯಾನರಿಸಂನಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ, ಅಕಸ್ಮಾತ್ ಆ ವ್ಯಕ್ತಿ ಹಾಗೆ ಘೋಷಣೆ ಕೂಗಿದ್ದಿದ್ದರೆ ಅಲ್ಲಿನ ಪತ್ರಕರ್ತರ “ದೇಶಭಕ್ತಿ“ ಜಾಗೃತವಾಗದೆ ಸಹಜವಾಗಿದ್ದಿದ್ದೇಕೆ? ಏನೂ ನಡೆದೇ ಇಲ್ಲ ಎನ್ನುವಂತೆ ನಡೆದುಕೊಂಡಿದ್ದೇಕೆ? ಪತ್ರಕರ್ತ ಸ್ನೇಹಿತರೇ ಉತ್ತರಿಸಬೇಕು. ಮಾಧ್ಯಮ ಜಾಗೃತವಾಗಲಿ. ಜಾಗೃತ ಮಾಧ್ಯಮ ಜನಕಲ್ಯಾಣಕ್ಕೆ ಕಾರಣವಾಗಲಿ. ಈ ರೀತಿ ಭಜನೆಗಲ್ಲಾ ಎಂದು ಪ್ರಿಯಾಂಕ ಖರ್ಗೆ ಟ್ವೀಟ್ ಮಾಡಿದ್ದಾರೆ.

ರಾಜ್ಯಸಭೆಗೆ ಮಂಗಳವಾರ ಚುನಾವಣೆ ನಡೆದಿದ್ದು, ಕರ್ನಾಟಕದಿಂದ ಮೂವರು ಕಾಂಗ್ರೆಸ್ ಅಭ್ಯರ್ಥಿಗಳು ಮತ್ತು ಓರ್ವ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆಲುವನ್ನು ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳಾದ ಅಜಯ್ ಮಾಕನ್, ನಾಸಿರ್ ಹುಸೇನ್ ಹಾಗೂ ಜಿ.ಸಿ. ಚಂದ್ರಶೇಖರ್ ಅವರು ಜಯ ಗಳಿಸಿದ್ದರು. ನಾಸಿರ್ ಹುಸೇನ್ ಗೆಲುವಿನ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಸಿರ್ ಹುಸೇನ್ ಬೆಂಬಲಿಗರು ಸಂಭ್ರಮಾಚರಣೆ ಮಾಡಿದ್ದಾರೆ. ಈ ವೇಳೆ ‘ಪಾಕಿಸ್ತಾನ್ ಝಿಂದಾಬಾದ್ʼ ಘೋಷಣೆ ಕೂಗಿದ್ದಾರೆ ಎಂದು ಕನ್ನಡದ ಬಹುತೇಕ ಟಿವಿ ಚಾನಲ್ಗಳು ವರದಿ ಮಾಡಿದ್ದು, ಬಿಜೆಪಿ ನಾಯಕರು ವಿಭಿನ್ನ ಹೇಳಿಕೆಗಳನ್ನು ಕೊಟ್ಟಿದ್ದರು. ರಾಜ್ಯದ ವಿವಿಧೆಡೆ ಬಿಜೆಪಿ ಪ್ರತಿಭಟನೆಯನ್ನು ಮಾಡಿತ್ತು. ಆದರೆ ವಾಸ್ತವವಾಗಿ ಕಾಂಗ್ರೆಸ್ ಕಾರ್ಯಕರ್ತರು, ‘ನಾಸೀರ್ ಸಾಬ್ ಝಿಂದಾಬಾದ್’ ಎಂದು ಕೂಗಿದ್ದಾರೆ ಹೊರತು ಪಾಕಿಸ್ತಾನ ಝಿಂದಾಬಾದ್ ಎಂದು ಕೂಗಿಲ್ಲ ಎನ್ನುವುದು ವಿಡಿಯೋಗಳ ಪರಿಶೀಲನೆ ವೇಳೆ ಬಯಲಾಗಿತ್ತು.
