
ಗುಜರಾತ್ ಸರಕಾರವು ಶಾಲಾ ಮಕ್ಕಳಿಗೆ ‘ಭಗವದ್ಗೀತೆ’ ಕುರಿತು ಕಲಿಸಲು ಪೂರಕ ಪಠ್ಯಪುಸ್ತಕವನ್ನು ಬಿಡುಗಡೆ ಮಾಡಿದ್ದು, ಮುಂದಿನ ವರ್ಷದಿಂದಲೇ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಭಗವದ್ಗೀತೆ’ ಬೋಧಿಸುವುದಾಗಿ ಹೇಳಿದೆ.
ಗುಜರಾತ್ನಲ್ಲಿ ಮುಂಬರುವ ಶೈಕ್ಷಣಿಕ ವರ್ಷದಂದಲೇ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಪಾಠಗಳನ್ನು ಕಲಿಸಲಾಗುತ್ತಿದೆ. ಗೀತಾ ಜಯಂತಿಯಂದು ಈ ಘೋಷಣೆ ಮಾಡಲಾಗಿದೆ. ಗುಜರಾತ್ನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಭಗವದ್ಗೀತೆಯಲ್ಲಿರುವ ಆಧ್ಯಾತ್ಮಿಕ ತತ್ವಗಳನ್ನು ಪೂರಕ ಪಠ್ಯಪುಸ್ತಕದ ಮೂಲಕ ಬೋಧನಾ ಕಾರ್ಯ ನಡೆಯಲಿದೆ.

ಗುಜರಾತ್ನ ಶಿಕ್ಷಣ ರಾಜ್ಯ ಸಚಿವ ಪ್ರಫುಲ್ ಪನ್ಶೇರಿಯಾ ಈ ಕುರಿತು ಮಾಹಿತಿ ನೀಡಿದ್ದು, 6ರಿಂದ 8ನೇ ತರಗತಿಯ ಪಠ್ಯಕ್ರಮದಲ್ಲಿ ಭಗವದ್ಗೀತೆಯಿಂದ ಆಯ್ದ ಆಧ್ಯಾತ್ಮಿಕ ತತ್ವಗಳು ಮತ್ತು ಮೌಲ್ಯಗಳನ್ನು ಪೂರಕ ಪಠ್ಯಪುಸ್ತಕವಾಗಿ ಸೇರಿಸಲು ರಾಜ್ಯ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ನಿರ್ಧಾರವು 3 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿಯ ತತ್ವಗಳೊಂದಿಗೆ ಹೊಂದಿಕೆಯಾಗುತ್ತದೆ ಎಂದು ಹೇಳಿದ್ದಾರೆ.

ನಿರ್ಧಾರಕ್ಕಾಗಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರಿಗೆ ಕೃತಜ್ಞತೆಗಳು. ಈ ಮೂಲಕ ವಿದ್ಯಾರ್ಥಿಗಳಿಗೆ ಭಾರತದ ಶ್ರೀಮಂತ, ವೈವಿಧ್ಯಮಯ, ಪ್ರಾಚೀನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಜ್ಞಾನ ಸಿಗಲಿದೆ. ಪೂಜ್ಯ ಗ್ರಂಥವನ್ನು ಆಧರಿಸಿದ ಪೂರಕ ಪಠ್ಯಪುಸ್ತಕವು ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ತುಂಬುತ್ತದೆ. 6 ರಿಂದ 8ನೇ ತರಗತಿಗಳಿಗೆ ಮೊದಲ ಭಾಗವನ್ನು ಶೀಘ್ರದಲ್ಲೇ ದೇಶಾದ್ಯಂತ ಶಾಲೆಗಳಿಗೆ ವಿತರಿಸಲಾಗುವುದು ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020ರಡಿಯಲ್ಲಿ ತೆಗೆದುಕೊಂಡ ಈ ನಿರ್ಧಾರವು ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಪನ್ಶೇರಿಯಾ ಹೇಳಿದರು.