
ಅದು ಬರೋಬ್ಬರಿ 30 ಕೋಟಿ ರೂಪಾಯಿ ಯೋಜನೆ. ಆದ್ರೆ ಅಧಿಕಾರಿಗಳು, ಪಾಲಿಕೆ ಸದಸ್ಯರ ನಿರ್ಲಕ್ಷ್ಯದಿಂದಾಗಿ ಜನರ ಪ್ರಯೋಜನಕ್ಕೆ ಬಾರದಂತಾಗಿದೆ. ಆಡಳಿತ ನಡೆಸುವವರ ವೈಫಲ್ಯ ಕಂಡು ಜನರು ಆಕ್ರೋಶ ಹೊರಹಾಕ್ತಿದ್ದಾರೆ.
ಮಂಗಳೂರು (ಡಿ.2): ಅದು ಬರೋಬ್ಬರಿ 30 ಕೋಟಿ ರೂಪಾಯಿ ಯೋಜನೆ. ಆದ್ರೆ ಅಧಿಕಾರಿಗಳು, ಪಾಲಿಕೆ ಸದಸ್ಯರ ನಿರ್ಲಕ್ಷ್ಯದಿಂದಾಗಿ ಜನರ ಪ್ರಯೋಜನಕ್ಕೆ ಬಾರದಂತಾಗಿದೆ. ಆಡಳಿತ ನಡೆಸುವವರ ವೈಫಲ್ಯ ಕಂಡು ಜನರು ಆಕ್ರೋಶ ಹೊರಹಾಕ್ತಿದ್ದಾರೆ.
ಕಸ ಸಂಗ್ರಹಿಸುವ ವಾಹನದ ಬಾಗಿಲನ್ನ ಹಗ್ಗದಲ್ಲಿ ಕಟ್ಟಿದ ಚಾಲಕ ಕಿಟಕಿ ಮೂಲಕ ಒಳಪ್ರವೇಶಿಸುತ್ತಿದ್ದಾನೆ. ಕೆಲ ದಿನಗಳ ಹಿಂದೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಸ್ಥಳಿಯರೊಬ್ಬರು ಸಿಎಂ ಕಚೇರಿಗೂ ವಿಡಿಯೋ ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ರು.

ತ್ಯಾಜ್ಯ ವಿಲೇವಾರಿಗೆಂದೇ ಖರೀದಿಸಿದ್ದ ನೂರಾರು ಹೊಸ ವಾಹನಗಳು ಮೈದಾನದಲ್ಲಿ ಧೂಳು ಹಿಡಿಯುತ್ತಿವೆ. ಈ ಅವ್ಯವಸ್ಥೆಗೆಲ್ಲ ಕಾರಣ ಮಂಗಳೂರು ಪಾಲಿಕೆ ನಿರ್ಲಕ್ಷ್ಯ.
ಕಳೆದ ಏಳು ವರ್ಷಗಳಿಂದ ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಅ್ಯಂಟೋನಿ ವೇಸ್ಟ್ ಮ್ಯಾನೆಜ್ಮೆಂಟ್ ಕಂಪನಿ(Antony Waste Management Company) ಕಸ ವಿಲೇವಾರಿ ನಿರ್ವಹಣೆ ಮಾಡ್ತಿದೆ. ಆದ್ರೆ ಇನ್ಮುಂದೆ ಪಾಲಿಕೆಯಿಂದಲೇ ಕಸದ ವಿಲೇವಾರಿ ಮಾಡಬೇಕೆಂದು 30 ಕೋಟಿ ರೂಪಾಯಿ ವೆಚ್ಚದಲ್ಲಿ 154 ಹೊಸ ವಾಹನ ಖರೀದಿ ಮಾಡಲಾಗಿದೆ. ಹೊಸ ವಾಹನ ಖರೀದಿಸಿದ್ದೇನೋ ಬಂತು. ಆದ್ರೆ ಅವುಗಳ ಬಳಕೆ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳದೇ ಇರುವುದರಿಂದ ವಾಹನಗಳು ಮಣ್ಣಗುಡ್ಡೆ ಮತ್ತು ಬೈಕಂಪಾಡಿಯ ಮೈದಾನಗಳಲ್ಲೇ ತುಕ್ಕು ಹಿಡಿಯುತ್ತಿವೆ

ತ್ಯಾಜ್ಯ ವಿಲೇವಾರಿ ವಾಹನಗಳನ್ನ ರಸ್ತೆಗಿಳಿಸದೆ ಮೈದಾನದಲ್ಲೇ ನಿಲ್ಲಿಸಿದ್ರೆ ಬಿಸಿಲು, ಮಳೆಯ ಕಾರಣದಿಂದ ಹಾಳಾಗಲಿವೆ. ಒಟ್ನಲ್ಲಿ ಜನರ ತೆರಿಗೆ ಹಣದಲ್ಲಿ ವಾಹನಗಳ ಖರೀದಿಸಿದ ಪಾಲಿಕೆ, ಅವುಗಳ ಬಳಕೆ ಮಾಡದೇ ಬೇಜವಾಬ್ದಾರಿ ತೋರಿದೆ. ಸದ್ಯ ಕಸ ವಿಲೇವಾರಿ ನಿರ್ವಹಿಸುತ್ತಿರೋ ಕಂಪನಿ ಗುತ್ತಿಗೆ ಡಿಸೆಂಬರ್ ಅಂತ್ಯಕ್ಕೆ ಮುಗಿಯಲಿದ್ದು, ಜನವರಿ ವೇಳೆಗಾದ್ರೂ ಹೊಸ ವಾಹನಗಳನ್ನ ರಸ್ತೆಗಿಳಿಸಲು ಪಾಲಿಕೆ ಸಿದ್ಧವಾಗಬೇಕಿದೆ.
