
ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಆಟಗಾರ ಮುಹಮ್ಮದ್ ರಿಜ್ವಾನ್ ಡ್ರೆಸ್ಸಿಂಗ್ ರೂಮ್ಗೆ ತೆರಳುತ್ತಿದ್ದಾಗ ಕೆಲ ಪ್ರೇಕ್ಷಕರು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುವ ವೀಡಿಯೊಗಳು ವೈರಲ್ ಆಗಿದ್ದು, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅಭಿಮಾನಿಗಳ ವರ್ತನೆಯನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಉದಯನಿಧಿ ಸ್ಟಾಲಿನ್, ಭಾರತವು ಕ್ರೀಡಾ ಮನೋಭಾವ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಾಕಿಸ್ತಾನದ ಆಟಗಾರರ ಜೊತೆ ನಡೆದುಕೊಂಡ ರೀತಿ ಸ್ವೀಕಾರಾರ್ಹವಲ್ಲ. ಕ್ರೀಡೆಗಳು ದೇಶವನ್ನು ಒಗ್ಗೂಡಿಸಬೇಕು. ದೇಶಗಳ ನಡುವೆ ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ದ್ವೇಷವನ್ನು ಹರಡುವ ಸಾಧನವಾಗಿ ಬಳಸುವುದು ಖಂಡನೀಯ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಪಾಕಿಸ್ತಾನದ ವಿಕೆಟ್ ಕೀಪರ್ ಹಾಗೂ ಬ್ಯಾಟರ್ ಮುಹಮ್ಮದ್ ರಿಜ್ವಾನ್ ಡ್ರೆಸ್ಸಿಂಗ್ ಕೊಠಡಿಗೆ ಹಿಂತಿರುಗುತ್ತಿದ್ದಾಗ ಪ್ರೇಕ್ಷಕರು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುವುದನ್ನು ವೈರಲ್ ವೀಡಿಯೊದಲ್ಲಿ ಕಾಣಬಹುದು.
ಈ ವರ್ಷದ ಆರಂಭದಲ್ಲಿ ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸಿದ್ದರು, ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಅಭಿಮಾನಿಗಳು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದರು.

ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಕ್ರಿಕೆಟ್ ಅಭಿಮಾನಿಗಳ ದುರ್ವರ್ತನೆ ಎಂದು ಕರೆದಿದ್ದಾರೆ.
ಚಲನಚಿತ್ರ ವಿಮರ್ಶಕ ಮತ್ತು ಐಐಟಿ ಹಳೆಯ ವಿದ್ಯಾರ್ಥಿ ವೆಂಕಿ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ಅಭಿಮಾನಿಗಳ ವರ್ತನೆ ಖಂಡನೀಯ ಎಂದು ಹೇಳಿದರು. ನೀವು ಆಟಗಾರನನ್ನು ಅವಮಾನಿಸಲು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗುತ್ತಿದ್ದರೆ, ನೀವು ಆಟಗಾರನನ್ನು ಮಾತ್ರ ಅವಮಾನಿಸುತ್ತಿಲ್ಲ, ನಮ್ಮ ದೇವರಾದ ರಾಮನನ್ನೂ ಅವಮಾನಿಸಿದ್ದೀರಿ ಎಂದು ಅವರು ಹೇಳಿದ್ದಾರೆ.