
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಬಸ್ ಸ್ಟ್ಯಾಂಡ್ನಲ್ಲಿ ವಿದ್ಯಾರ್ಥಿನಿ ಜೊತೆ ನಿಂತಿದ್ದ ಅನ್ಯಕೋಮಿನ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆದಿದೆ.
ಮಂಗಳೂರು ಅ.13: ಇನ್ಮುಂದೆ ಅನೈತಿಕ ಪೊಲೀಸ್ ಗಿರಿ (Moral police giri) ಇರಲ್ಲ, ಇದಕ್ಕೆ ನಾವು ಅಂತ್ಯ ಹಾಡುತ್ತೇವೆ ಎಂದು ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಖಡಕ್ ಸಂದೇಶ ರವಾನಿಸಿದ್ದರು. ಆದರೂ ಕರವಾಳಿ ಭಾಗದಲ್ಲಿ ಪದೇ ಪದೇ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದೀಗ ಮತ್ತೊಂದು ಪ್ರಕರಣ ವರದಿಯಾಗಿದೆ. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwala) ತಾಲೂಕಿನ ಪೆರುವಾಯಿ ಬಸ್ ಸ್ಟ್ಯಾಂಡ್ನಲ್ಲಿ ವಿದ್ಯಾರ್ಥಿನಿ ಜೊತೆ ನಿಂತಿದ್ದ ಅನ್ಯಕೋಮಿನ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ ನಡೆದಿದೆ.

ಓರ್ವ ವಿದ್ಯಾರ್ಥಿನಿ ಮತ್ತು ಇಬ್ಬರು ಅನ್ಯಕೋಮಿನ ಯುವಕರು ಕುದ್ದುಪದವುನಿಂದ ಬಸ್ನಲ್ಲಿ ಬಂದು ಪೆರುವಾಯಿ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ. ಮೂವರು ಬಸ್ ನಿಲ್ದಾಣದಲ್ಲಿ ಇದ್ದರು ಇದನ್ನು ಕಂಡ ಸ್ಥಳೀಯ ಯುವಕರು ವಿದ್ಯಾರ್ಥಿಗಳನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಮೂವರು ಕಾಸರಗೋಡಿನ ಉಪ್ಪಳಗೆ ತೆರಳಲು ಬಸ್ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಮೂವರೂ ವಿದ್ಯಾರ್ಥಿಗಳಾಗಿದ್ದು, ಕಾಸರಗೋಡಿನ ಪೆರ್ಲ ಆಸುಪಾಸಿನವರೆಂಬ ಮಾಹಿತಿ ದೊರೆತಿದೆ. ಇದೇ ವೇಳೆ ಸ್ಥಳೀಯ ಯುವಕರು ವಿದ್ಯಾರ್ಥಿಗಳ ವಿಡಿಯೋ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ. ಸದ್ಯ ವಿದ್ಯಾರ್ಥಿಗಳ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ.
