
ಕೊಲ್ಲಂ(ತಿರುವನಂತಪುರ): ಆರು ಮಂದಿ ಕಿಡಿಗೇಡಿಗಳು ತನ್ನನ್ನು ಅಪಹರಿಸಿ, ನಿರ್ಧಯವಾಗಿ ಥಳಿಸಿ ಬೆನ್ನಿನ ಮೇಲೆ ಪಿಎಫ್ ಐ ಎಂದು ಬರೆದಿರುವುದಾಗಿ ದೂರು ನೀಡಿದ್ದ ಯೋಧ ಹಲ್ವೀಲ್ ಶೈನ್ ಕುಮಾರ್ ಹಾಗೂ ಗೆಳೆಯನನ್ನು ವಶಪಡೆದುಕೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಇಬ್ಬರನ್ನೂ ವಿಚಾರಣೆಗೊಳಪಡಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಫೇಮಸ್ ಆಗಲು ಕಥೆ ಕಟ್ಟಿದ ಯೋಧ!
ಯೋಧ ಶೈನ್ ಕುಮಾರ್ ಮತ್ತು ಆತನ ಗೆಳೆಯ ನೀಡಿರುವ ಹೇಳಿಕೆ ಆಧಾರದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ತಾನು ಭಾರೀ ಹೆಸರುಗಳಿಸಬೇಕು ಎಂಬ ಉದ್ದೇಶದಿಂದ ಯೋಧ ಶೈನ್ ಕುಮಾರ್ ಈ ಕಥೆಯನ್ನು ಹೆಣೆದಿರುವುದಾಗಿ ಗೆಳೆಯ ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿರುವುದಾಗಿ ವರದಿ ತಿಳಿಸಿದೆ.

ಇಡೀ ನಾಟಕದ ಸೂತ್ರಧಾರಿ ಶೈನ್ ಕುಮಾರ್ ಎಂಬುದಾಗಿ ಗೆಳೆಯ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾನೆ. ಗೆಳೆಯನ ಮನೆಯಲ್ಲಿ ಹಸಿರು ಪೈಂಟ್, ಬ್ರಷ್ ಹಾಗೂ ಟೇಪ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕುಮಾರ್ ಮನೆಯ ಸಮೀಪದ ರಬ್ಬರ್ ತೋಟದೊಳಗೆ ಹೋಗಿ ಬೆನ್ನಿನ ಮೇಲೆ ಪಿಎಫ್ ಐ ಎಂದು ಬರೆದು, ಥಳಿಸುವಂತೆ ಗೆಳೆಯನಿಗೆ ಸೂಚನೆ ನೀಡಿದ್ದ. , ಆರಂಭದಲ್ಲಿ ಡಿಎಫ್ ಐ ಅಂತ ಬರೆದಿದ್ದ, ಆದರೆ ಕುಮಾರ್ ಪಿಎಫ್ ಐ ಎಂದು ಬರೆಯುವಂತೆ ಸೂಚಿಸಿದ್ದ. ನಂತರ ತನಗೆ ಹೊಡೆಯುವಂತೆ ಹೇಳಿದ್ದ. ಮದ್ಯ ಸೇವಿಸಿದ್ದರಿಂದ ತನಗೆ ಹೊಡೆಯಲು ಆಗಲಿಲ್ಲ. ಆಗ ಕುಮಾರ್ ನೆಲದ ಮೇಲೆ ಹಾಕಿ ಎಳೆದೊಯ್ಯುವಂತೆ ಹೇಳಿದ. ಅದೂ ಕೂಡಾ ತನ್ನಿಂದ ಸಾಧ್ಯವಾಗಲಿಲ್ಲ. ಕೊನೆಗೆ ಕೈಯನ್ನು ಹಿಂದಕ್ಕೆ ಕಟ್ಟಿ, ಬಾಯಿಗೆ ಟೇಪ್ ಹಾಕಿ ತೆರಳುವಂತೆ ಹೇಳಿದ್ದ ಎಂಬುದಾಗಿ ಗೆಳೆಯ ಪೊಲೀಸರಿಗೆ ವಿವರಣೆ ನೀಡಿರುವುದಾಗಿ ವರದಿ ತಿಳಿಸಿದೆ.

ಆರು ಮಂದಿ ದುಷ್ಕರ್ಮಿಗಳು ತನ್ನನ್ನು ಅಪಹರಿಸಿ ಮನೆ ಸಮೀಪದ ರಬ್ಬರ್ ತೋಟಕ್ಕೆ ಎಳೆದೊಯ್ದು, ಹಿಗ್ಗಾಮುಗ್ಗಾ ಥಳಿಸಿ ಬೆನ್ನಿನ ಮೇಲೆ ಪಿಎಫ್ ಐ ಎಂದು ಪೈಂಟ್ ನಿಂದ ಬರೆದಿರುವುದಾಗಿ ಯೋಧ ಶೈನ್ ಕುಮಾರ್ ಪೊಲೀಸರಿಗೆ ಸುಳ್ಳು ದೂರು ನೀಡಿದ್ದ.