
ನವದೆಹಲಿ: ಉತ್ತರ ಪ್ರದೇಶದ (Uttar Pradesh) ಮುಜಾಫರ್ ನಗರದ (Muzaffarnagar) ಶಾಲೆಯೊಂದರಲ್ಲಿ ಶಿಕ್ಷಕಿಯೊಬ್ಬರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ವಿದ್ಯಾರ್ಥಿಗೆ (Student) ತನ್ನ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ಆದೇಶಿಸಿದ ಘಟನೆಯ ಹೊಣೆಗಾರಿಕೆಯನ್ನು ರಾಜ್ಯವೇ ಹೊರಬೇಕು ಎಂದು ಸುಪ್ರೀಂಕೋರ್ಟ್ (Supreme Court) ಸೋಮವಾರ ಹೇಳಿದೆ.

ಘಟನೆಯ ವೀಡಿಯೋ ಕಳೆದ ತಿಂಗಳು ವೈರಲ್ ಆಗಿ, ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು. ನಂತರ ಶಿಕ್ಷಕಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಈ ಬಗ್ಗೆ ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು ಮೌಖಿಕ ಅವಲೋಕನವನ್ನು ಮಾಡಿತು.

ಶಿಕ್ಷಕರ ಸೂಚನೆಯ ಮೇರೆಗೆ ಶಾಲಾ ಮಕ್ಕಳು ಅಳುತ್ತಿರುವ, ಮುಸ್ಲಿಂ ವಿದ್ಯಾರ್ಥಿಯನ್ನು ಸರದಿಯಲ್ಲಿ ಹೊಡೆಯುವ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಎಫ್ಐಆರ್ ದಾಖಲಿಸಿದ ರೀತಿಗೆ ಗಂಭೀರ ಆಕ್ಷೇಪವಿದೆ ಎಂದು ಹೇಳಿದೆ. ಇಂತಹ ಘಟನೆಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಹೇಳಿತು.

ಶಿಕ್ಷಕರು ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಕಲಿಸುವ ವಿಧಾನ, ಇದು ಗುಣಮಟ್ಟದ ಶಿಕ್ಷಣವೇ? ಈ ಘಟನೆಗೆ ರಾಜ್ಯವು ಹೊಣೆಗಾರಿಕೆಯನ್ನು ತೆಗೆದುಕೊಳ್ಳಬೇಕು. ಶಾಲೆಯು ಮಗುವಿಗೆ ಕೆಲವು ಸಲಹೆಗಾರರನ್ನು ನೇಮಿಸಿದೆಯೇ? ಈ ಘಟನೆ ರಾಜ್ಯದ ಆತ್ಮಸಾಕ್ಷಿಯನ್ನು ಅಲ್ಲಾಡಿಸುತ್ತದೆ. ಇದು ಗಂಭೀರ ವಿಷಯ ಎಂದು ಪೀಠ ಹೇಳಿದೆ.