
ನವದೆಹಲಿ: ರಾಜಸ್ಥಾನದ ಇಬ್ಬರು ವ್ಯಕ್ತಿಗಳ ಹತ್ಯೆ ಹಾಗೂ ಜುಲೈನಲ್ಲಿ ನುಹ್ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಕಾಗಿದ್ದ ಗೋರಕ್ಷಕ ಮೋನು ಮಾನೇಸರ್ನನ್ನು (Monu Manesar) ಹರಿಯಾಣ ಪೊಲೀಸರು ಬಂಧಿಸಿದ್ದಾರೆ.

ಭಜರಂಗದಳದ ಕಾರ್ಯಕರ್ತನಾಗಿರುವ ಈತ ರಾಜಸ್ಥಾನದ ಮುಸ್ಲಿಂ ಸಮುದಾಯದ ಇಬ್ಬರು ವ್ಯಕ್ತಿಗಳ ಹತ್ಯೆಯಲ್ಲಿ ಪ್ರಮುಖ ಆರೋಪಿಯಾಗಿದ್ದ. ಫೆಬ್ರವರಿಯಲ್ಲಿ ಹರಿಯಾಣದಲ್ಲಿ ಕಾರಿನಲ್ಲಿ ಶವ ಪತ್ತೆಯಾಗಿದ್ದವು

ಫೆಬ್ರವರಿ 15 ರಂದು ರಾಜಸ್ಥಾನದ ಭರತ್ಪುರ ಜಿಲ್ಲೆಯ ಹಳ್ಳಿಯೊಂದರ ನಿವಾಸಿಗಳಾದ ನಾಸಿರ್ (25) ಮತ್ತು ಜುನೈದ್ (35) ಇಬ್ಬರನ್ನೂ ಹಿಂದುತ್ವ ಕಾರ್ಯಕರ್ತರು ಅಪಹರಿಸಿದ್ದರು ಎಂದು ಹೇಳಲಾಗಿದೆ. ಮರುದಿನ ಹರಿಯಾಣದ ಲೋಹರುದಲ್ಲಿ ಸುಟ್ಟು ಹಾಕಲಾಗಿದ್ದ ಕಾರಿನೊಳಗೆ ಅವರ ಶವಗಳು ಪತ್ತೆಯಾಗಿದ್ದವು.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಜಾಮೀನು ಪಡೆಯಬಹುದಾದ ಸೆಕ್ಷನ್ಗಳ ಅಡಿಯಲ್ಲಿ ಮಾನೇಸರ್ನನ್ನು ಮಂಗಳವಾರ ಬಂಧಿಸಲಾಗಿದೆ ಎಂದು ಹರಿಯಾಣ ಪೊಲೀಸ್ ಮೂಲಗಳು ತಿಳಿಸಿವೆ. ಸಂಜೆ ವೇಳೆಗೆ ಆತನಿಗೆ ಜಾಮೀನು ಸಿಗುವ ಸಾಧ್ಯತೆ ಇದ್ದು, ಡಬಲ್ ಮರ್ಡರ್ ಪ್ರಕರಣದಲ್ಲಿ ರಾಜಸ್ಥಾನ ಪೊಲೀಸರು ಆತನನ್ನು ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹರಿಯಾಣದ ನುಹ್ನಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪವೂ ಮಾನೇಸರ್ ಮೇಲಿದೆ. ಹಿಂಸಾಚಾರದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದರು. ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ‘ಜಲ್ ಅಭಿಷೇಕ್ ಯಾತ್ರೆ’ ವೇಳೆ ಹಿಂಸಾಚಾರ ನಡೆಯಿತು. ಬಳಿಕ ಅದು ಗುರುಗ್ರಾಮ್ ಸೇರಿದಂತೆ ಪಕ್ಕದ ಪ್ರದೇಶಗಳಿಗೆ ಹರಡಿತ್ತು.