| Edited By: Ashraf Kammaje
Updated on: Sep 09, 2023 | 11:02 AM

ಪರೀಕ್ಷಾ ಫಲಿತಾಂಶ, ಉಪನ್ಯಾಸಕರ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಕೋಮು ವಿಚಾರವಾಗಿಯೂ ವಿವಾದ ನಡೆಯುತ್ತಿದೆ. ಇತ್ತೀಚೆಗಷ್ಟೇ, ಕಾಲೇಜು ಕಾರ್ಯಕ್ರಮಕ್ಕೆ ಹಿಂದೂ ಮುಖಂಡನಿಗೆ ಆತಿಥ್ಯಕ್ಕೆ ಎನ್ಎಸ್ಯುಐ ವಿರೋಧ ವ್ಯಕ್ತಪಡಿಸಿತ್ತು. ಇದೀಗ, ಡಾ.ಶಂಸುಲ್ ಇಸ್ಲಾಂ ಉಪನ್ಯಾಸಕ್ಕೆ ಎಬಿವಿಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದ ಕಾಲೇಜಿನಲ್ಲಿ ಡಾ.ಶಂಸುಲ್ ಇಸ್ಲಾಂ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ. ಆದರೆ ಇದಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿರೋಧ ವ್ಯಕ್ತಪಡಿಸುತ್ತಿದೆ. ಶಂಸುಲ್ ಇಸ್ಲಾಂ ಉಪನ್ಯಾಸವನ್ನು ವಿರೋಧಿಸಿ ಆವರಣದಲ್ಲಿ ಎಬಿವಿಪಿ ಕಾರ್ಯಕರ್ತರ ಧರಣಿ ನಡೆಸುತ್ತಿದ್ದು, ಗೋ ಬ್ಯಾಕ್ ಶಂಸುಲ್ ಎಂದು ಘೋಷಣೆ ಕೂಗುತ್ತಿದ್ದಾರೆ.

ಶಂಸುಲ್ ಇಸ್ಲಾಂ ಉಪನ್ಯಾಸ ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಕಾಲೇಜಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ವಿವಾದಗಳಿಂದಲೇ ಹೆಚ್ಚು ಸುದ್ದಿ ಮಾಡುವ ಮಂಗಳೂರು ವಿಶ್ವವಿದ್ಯಾಲಯ, ಪ್ರತಿಭಾ ದಿನಾಚರಣೆ ಮತ್ತು ಕಾಲೇಜು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಎಬಿವಿಪಿ ಹಿಂದೂ ಮುಖಂಡನಿಗೆ ಆತಿಥ್ಯ ನೀಡಿತ್ತು. ಇದಕ್ಕೆ ಎನ್ಎಸ್ಯುಐ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಕಾಲೇಜಿನಲ್ಲಿ ಕೋಮು ವಿಷಬೀಜ ಭಿತ್ತಲು ಯತ್ನ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಾರ್ಯಕ್ರಮ ನಡೆಯಲು ಬಿಡಲ್ಲ ಅಂತ ಎನ್ಎಸ್ಯುಐ ಹೇಳಿತ್ತು. ಇದು ಎನ್ಎಸ್ಯುಐ ಮತ್ತು ಎಬಿವಿಪಿ ನಡುವೆ ಗುದ್ದಾಟಕ್ಕೆ ಕಾರಣವಾಗಿತ್ತು. ವಿವಾದದ ಬೆನ್ನಲ್ಲೇ ಎಚ್ಚೆತ್ತ ಮಂಗಳೂರು ವಿವಿ ಕಾಲೇಜು ಕಾರ್ಯಕ್ರಮವನ್ನು ಮುಂದೂಡಿತ್ತು.