Ashraf Kammaje |
Updated on: Aug 26, 2023 | 9:00 PM

ಧಾರ್ಮಿಕ ಪ್ರಾರ್ಥನೆಗೆ ವಸತಿ ಗೃಹಗಳನ್ನು ಬಳಸಲು ಯಾವುದೇ ನಿರ್ಬಂಧವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿದೆ. ಆ ಮೂಲಕ ತಮ್ಮ ತಮ್ಮ ಮನೆಗಳಲ್ಲಿ ಧಾರ್ಮಿಕ ನಂಬಿಕೆಗಳನ್ನು ಆಚರಿಸುವ ನಾಗರಿಕರ ಹಕ್ಕನ್ನು ಎತ್ತಿ ಹಿಡಿದಿದೆ.
ಬೆಂಗಳೂರು, ಆಗಸ್ಟ್ 26: ಧಾರ್ಮಿಕ ಪ್ರಾರ್ಥನೆಗೆ ವಸತಿ ಗೃಹಗಳನ್ನು ಬಳಸಲು ಯಾವುದೇ ನಿರ್ಬಂಧವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿದೆ. ಆ ಮೂಲಕ ನಗರದ ಎಚ್ಬಿಆರ್ ಲೇಔಟ್ನ ವಸತಿ ಮನೆಯನ್ನು ಪ್ರಾರ್ಥನೆಗೆ ಬಳಸಲಾಗುತ್ತಿದೆ ಎಂದು ಆರೋಪಿಸಿ ಕೆಲವು ನಿವಾಸಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಹೈಕೋರ್ಟ್ ವಜಾಗೊಳಿಸಿದೆ. ತೀರ್ಪಿನ ಪ್ರತಿಯನ್ನು ನ್ಯಾಯಾಲಯ ಇನ್ನು ಬಿಡುಗಡೆ ಮಾಡಿಲ್ಲ.

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಲೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ವಿಭಾಗೀಯ ಪೀಠವು ಇತ್ತೀಚೆಗೆ ಪಿಐಎಲ್ ಅನ್ನು ವಜಾಗೊಳಿಸಿತ್ತು. ಪೀಠವು ಅರ್ಜಿಯನ್ನು ವಜಾಗೊಳಿಸಿ ಪ್ರಾರ್ಥನೆಗೆ ಹಾಜರಾಗುವವವರಿಂದ ಉಂಟಾಗಬಹುದೆನ್ನಲ್ಲಾದ ಅಡ್ಡಿಗಳ ಬಗ್ಗೆ ಸಾಕಷ್ಟು ಪುರಾವೆಗಳ ಕೊರತೆಯಿದೆ ಎಂದು ಅಭಿಪ್ರಾಯಪಟ್ಟಿದೆ.

ಸ್ಯಾಮ್ ಪಿ ಫಿಲಿಪ್, ಕೃಷ್ಣ ಎಸ್ಕೆ, ಜಗಯೀಸನ್ ಟಿಪಿ ಮತ್ತು ಇತರ ಐವರು ಎಚ್ಬಿಆರ್ ಲೇಔಟ್ ನಿವಾಸಿಗಳಾಗಿದ್ದು, ಈ ವಿಚಾರವಾಗಿ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ, ಬಿಬಿಎಂಪಿ ಮತ್ತು ಮಸೀದಿ ಇ-ಅಶ್ರಫಿತ್ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಸತಿ ಪ್ರದೇಶವನ್ನು ಪ್ರಾರ್ಥನಾ ಮಂದಿರವಾಗಿ ಬಳಸಲಾಗುತ್ತಿದ್ದು, ಇದರಿಂದ ನೆರೆಹೊರೆಯವರಿಗೆ ತೊಂದರೆಯಾಗುತ್ತಿದೆ ಎಂದು ವಾದಿಸಿದ್ದರು. ಈ ಹಿಂದೆ ಬಿಬಿಎಂಪಿ ಅನುಮತಿಯಿಲ್ಲದೆ ಮಸೀದಿ ಟ್ರಸ್ಟ್ ಕಟ್ಟಡ ನಿರ್ಮಿಸಿದಾಗ ಈ ವಿಷಯ ನ್ಯಾಯಾಲಯದ ಮೆಟ್ಟಿಲೇರಿದ್ದು, ಬಿಬಿಎಂಪಿಯಿಂದ ಅಗತ್ಯ ಮಂಜೂರಾತಿ ಪಡೆದ ನಂತರವಷ್ಟೇ ಮದರಸಾ ಕಟ್ಟಡ ನಿರ್ಮಿಸಬಹುದು ಎಂದು ಕೋರ್ಟ್ ಸೂಚಿಸಿತ್ತು. ನಂತರ ಕಟ್ಟಡವನ್ನು ನಿರ್ಮಿಸಿ ಬಡ ಮಕ್ಕಳ ಮದರಸಾವಾಗಿ ಬಳಕೆ ಮಾಡಲಾಗುತಿತ್ತು. ಬಳಿಕ ಹೊಸ ಕಟ್ಟಡ ನಿರ್ಮಾಣವಾದ ನಂತರ ಪಿಐಎಲ್ ಸಲ್ಲಿಸಲಾಗಿತ್ತು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಪ್ರಾರ್ಥನೆಗಳನ್ನು ನಡೆಸುವುದರಿಂದ ಅಪಾಯವಿದೆ ಎಂದ ಅರ್ಜಿದಾರರ ಪರ ವಕೀಲರು ಮಂಡಿಸಿದ ವಾದವನ್ನು ನ್ಯಾಯಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಹೇಳಿಕೆಗಳಿಗೆ ನಾವು ಅವಕಾಶ ನೀಡುವುದಿಲ್ಲ. ಇಂತಹ ಹೇಳಿಕೆಗಳನ್ನು ನೀಡಲು ನಿಮಗೆ ಯಾವುದೇ ಹಕ್ಕಿಲ್ಲ. ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಧಿಕಾರಿಗಳು ಮಾತ್ರ ಹೇಳಬಹುದು. ಯಾರಾದರೂ ಪ್ರಾರ್ಥನೆ ಸಲ್ಲಿಸುವುದು ಬೆದರಿಕೆಯ ಚಟುವಟಿಕೆ ಎಂದು ನೀವು ಹೇಗೆ ಹೇಳುತ್ತೀರಿ ಎಂದು ನ್ಯಾಯಾಲಯ ಪ್ರಶ್ನಿಸಿದೆ.