
ಇತ್ತೀಚೆಗೆ ತಡೆ ಹಿಡಿಯಲಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಪಟ್ಟಿಯನ್ನು ಅಳೆದು ತೂಗಿ ಕೊನೆಗೂ ಪರಿಷ್ಕರಿಸಿದ ರಾಜ್ಯ ಪೊಲೀಸ್ ಇಲಾಖೆ, ಕೆಲವರ ಹುದ್ದೆ ಬದಲಾವಣೆಗೊಳಿಸಿ 28 ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ಹಸಿರು ನಿಶಾನೆ ತೋರಿ ಬುಧವಾರ ಮರು ಆದೇಶ ಹೊರಡಿಸಿದೆ.
ಬೆಂಗಳೂರು (ಆ.10) : ಇತ್ತೀಚೆಗೆ ತಡೆ ಹಿಡಿಯಲಾಗಿದ್ದ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ ಪಟ್ಟಿಯನ್ನು ಅಳೆದು ತೂಗಿ ಕೊನೆಗೂ ಪರಿಷ್ಕರಿಸಿದ ರಾಜ್ಯ ಪೊಲೀಸ್ ಇಲಾಖೆ, ಕೆಲವರ ಹುದ್ದೆ ಬದಲಾವಣೆಗೊಳಿಸಿ 28 ಇನ್ಸ್ಪೆಕ್ಟರ್ಗಳ ವರ್ಗಾವಣೆಗೆ ಹಸಿರು ನಿಶಾನೆ ತೋರಿ ಬುಧವಾರ ಮರು ಆದೇಶ ಹೊರಡಿಸಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು, ಶಾಸಕರು ಹಾಗೂ ಮುಖಂಡರ ಆಕ್ಷೇಪಣೆ ಹಿನ್ನೆಲೆಯಲ್ಲಿ ಪೊಲೀಸ್ ವರ್ಗಾವಣೆಯು ಸರ್ಕಾರಕ್ಕೆ ಕಗ್ಗಂಟಾಗಿ ಪರಿಣಮಿಸಿತ್ತು. ಈ ಸಂಬಂಧ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ
ಜಿ.ಪರಮೇಶ್ವರ್ ಜತೆ ಚರ್ಚಿಸಿದ ಬಳಿಕ ಪಿಐ ವರ್ಗಾವಣೆ ಪಟ್ಟಿಯನ್ನು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಪರಿಷ್ಕರಿಸಿದ್ದು, ಅಂತೆಯೇ ತಡೆಹಿಡಿಯಲಾಗಿದ್ದ ಬೆಂಗಳೂರಿನ 69 ಇನ್ಸ್ಪೆಕ್ಟರ್ಗಳ ಪೈಕಿ 28 ಇನ್ಸ್ಪೆಕ್ಟರ್ಗಳನ್ನು ವರ್ಗಗೊಳಿಸಿದ್ದಾರೆ.

ಈ 69 ಇನ್ಸ್ಪೆಕ್ಟರ್ಗಳ ಪೈಕಿ ಠಾಣೆಗಳಿಗೆ 28 ಇನ್ಸ್ಪೆಕ್ಟರ್ಗಳನ್ನು ನಿಯೋಜಿಸಿದ್ದು, 12 ಮಂದಿಯ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿ ಹಳೆ ಹುದ್ದೆಯಲ್ಲೇ ಮುಂದುವರೆಯುವಂತೆ ಸೂಚಿಸಲಾಗಿದೆ. ಇನ್ನುಳಿದ 29 ಇನ್ಸ್ಪೆಕ್ಟರ್ಗಳಿಗೆ ಹಳೆ ಆದೇಶವೇ ಅನ್ವಯವಾಗಲಿದ್ದು, ಗುರುವಾರ ಅವರಿಗೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸಂದೇಶ ರವಾನೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.

ಪರಿಷ್ಕೃತ ಆದೇಶದ ವಿವರ
ಕೆ.ಜಿ.ಹಳ್ಳಿ ಸಂಚಾರ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಠಾಣೆಗಳು, ಸಿಟಿ ಮಾರ್ಕೆಟ್, ಜ್ಞಾನಭಾರತಿ, ಕೆ.ಆರ್.ಪುರ, ಪೀಣ್ಯ, ಯಶವಂತಪುರ ಸಂಚಾರ, ಕೆ.ಆರ್.ಪುರ ಸಂಚಾರ, ಮಾಗಡಿ ರಸ್ತೆ, ಪೀಣ್ಯ, ರಾಜಾಜಿನಗರ, ಯಲಹಂಕ ಹಾಗೂ ಜಿಗಣಿ ಠಾಣೆಗಳ ವರ್ಗಾವಣೆ ಆದೇಶದಲ್ಲಿ ಬದಲಾಗಿದೆ.
ಶಿವಾಜಿನಗರದ ಸಂಚಾರ ಠಾಣೆಯಿಂದ ಸಿಟಿ ಮಾರ್ಕೆಟ್ಗೆ ಸಂದೀಪ್, ಎಂ.ಎಸ್.ರವಿ ಅವರಿಗೆ ಸಿಸಿಆರ್ಬಿ ಬದಲು ಜ್ಞಾನಭಾರತಿ, ಹಲಸೂರು ಗೇಟ್ ಬದಲು ಕಬ್ಬನ್ ಪಾರ್ಕ್ನಿಂದ ಕೆ.ಆರ್.ಪುರ ಸಂಚಾರ ಠಾಣೆಗೆ ಸಿ.ಜೆ.ಚೈತನ್ಯ, ಕೆಂಪೇಗೌಡನಗರ ಠಾಣೆಯಲ್ಲಿ ಎ.ಕೆ.ರಕ್ಷಿತ್ ಮುಂದುವರಿಕೆ, ಬಸವನಗುಡಿ ಸಂಚಾರ ಠಾಣೆಯಿಂದ ಫಾರೂಕ್ ಪಾಷ ವಿಲ್ಸನ್ ಗಾರ್ಡನ್ ಠಾಣೆಗೆ, ರಾಜ್ಯ ಗುಪ್ತದಳದಿಂದ ಯಶವಂತಪುರ ಸಂಚಾರ ಠಾಣೆಗೆ ಬಿ.ಚಿದಾನಂದ್, ವಿಶ್ವನಾಥಪುರ ಬದಲು ಸಿಇಎನ್ ಠಾಣೆಗೆ ಟಿ.ಎಲ್.ಪ್ರವೀಣ್ ಕುಮಾರ್ ಹಾಗೂ ವಿಶ್ವನಾಥಪುರ ಠಾಣೆಗೆ ಟಿ.ಶ್ರೀನಿವಾಸ್ ಅವರ ಸ್ಥಾನ ಬದಲಾವಣೆಗೊಳಿಸಿ ನಿಯೋಜಿಸಲಾಗಿದೆ.