
ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಕೃತ್ಯ; ವೀಡಿಯೋ ವೈರಲ್
ಲಕ್ನೋ: ಇಬ್ಬರು ಅಪ್ರಾಪ್ತ ಬಾಲಕರಿಗೆ ಬಲವಂತವಾಗಿ ಮೂತ್ರ ಕುಡಿಸಿ (Urine Case), ಅವರ ಖಾಸಗಿ ಭಾಗಕ್ಕೆ ಹಸಿರು ಮೆಣಸಿನಕಾಯಿ ಉಜ್ಜಿ ದೌರ್ಜನ್ಯ ಎಸಗಿರುವ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ಕಳ್ಳತನದ ಶಂಕೆಯ ಮೇಲೆ 10 ಮತ್ತು 15 ವರ್ಷದ ಬಾಲಕರ ಮೇಲೆ ದೌರ್ಜನ್ಯ ಎಸಗಲಾಗಿದೆ. ಈ ಭಯಾನಕ ದೃಶ್ಯದ ವೀಡಿಯೋಗಳು ವೈರಲ್ ಆಗಿದೆ. ಹಣ ದೋಚಿದ್ದಾರೆ ಎಂದು ಆರೋಪಿಸಿ ಗೂಂಡಾಗಳು ಹುಡುಗರನ್ನು ಹಿಡಿದು ಕಟ್ಟಿ ಹಾಕಿದ್ದರು ಎನ್ನಲಾಗಿದೆ.

ವೀಡಿಯೋದಲ್ಲಿ ಹುಡುಗರಿಗೆ ಹಸಿರು ಮೆಣಸಿನಕಾಯಿ ತಿನ್ನಿಸುತ್ತಿರುವ, ಬಾಟಲಿಯಲ್ಲಿ ತುಂಬಿದ ಮೂತ್ರದೊಂದಿಗೆ ಅದನ್ನು ಸೇವಿಸಲು ಬಲವಂತಪಡಿಸುತ್ತಿರುವ ದೃಶ್ಯ ಇದೆ. ಪುಂಡರ ಗುಂಪು ಬಾಲಕರನ್ನು ನಿಂದಿಸುವುದರ ಜೊತೆಗೆ ಮೂತ್ರವನ್ನು ಕುಡಿಯದಿದ್ದರೆ ಥಳಿಸುವುದಾಗಿ ಬೆದರಿಕೆ ಹಾಕುತ್ತಿರುವ ದೃಶ್ಯ ಸೆರೆಯಾಗಿದೆ.
ಮತ್ತೊಂದು ವೀಡಿಯೋದಲ್ಲಿ, ಹುಡುಗರು ತಮ್ಮ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡು, ಪ್ಯಾಂಟನ್ನು ಕೆಳಕ್ಕೆ ಎಳೆದುಕೊಂಡು ನೆಲದ ಮೇಲೆ ಮಲಗಿರುವುದನ್ನು ತೋರಿಸಲಾಗಿದೆ. ಒಬ್ಬ ವ್ಯಕ್ತಿ ಅವರ ಖಾಸಗಿ ಭಾಗಕ್ಕೆ ಹಸಿರು ಮೆಣಸಿನಕಾಯಿ ಉಜ್ಜಿದ್ದಾನೆ. ನೋವಿನಿಂದ ಬಾಲಕರು ಚೀರಾಡುತ್ತಿರುವ ದೃಶ್ಯವಿದೆ.

ಆಗಸ್ಟ್ 4 ರಂದು ಈ ವೀಡಿಯೋಗಳನ್ನು ಚಿತ್ರೀಕರಿಸಲಾಗಿದೆ. ಜಿಲ್ಲೆಯ ಪತ್ರಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಕಟಿ ಚೌರಾಹಾ ಬಳಿಯ ಅರ್ಶನ್ ಚಿಕನ್ ಶಾಪ್ನಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇಬ್ಬರು ಮಕ್ಕಳ ಕುರಿತಾದ ಆಕ್ಷೇಪಾರ್ಹ ಕೃತ್ಯದ ವೀಡಿಯೋಗಳನ್ನು ಗಮನಿಸಿದ್ದೇವೆ. ಕಾನೂನಿನ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ಹಲ್ಲೆ ನಡೆಸಿದವರನ್ನು ಗುರುತಿಸಿ, ಈಗಾಗಲೇ 6 ಮಂದಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.