
ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯೊಳಗೆ ಏಕರೂಪ ನಾಗರಿಕ ನೀತಿ ಸಂಹಿತೆ (Uniform Civil Code) ಜಾರಿ ತರಲು ಕೇಂದ್ರ ಸರ್ಕಾರ ತಯಾರಿ ಆರಂಭಿಸಿದೆ. ಈ ತಯಾರಿ ಬೆನ್ನಲೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಹಲವು ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ. ಈ ನಡುವೆ ಎನ್ಡಿಎ ಒಕ್ಕೂಟದ ಭಾಗವಾಗಿರುವ ಎಐಎಡಿಎಂಕೆ ಕೂಡಾ ಇದನ್ನು ವಿರೋಧಿಸಿದೆ.

ಏಕರೂಪ ನಾಗರಿಕ ನೀತಿಸಂಹಿತೆಗೆ ಬಿಜೆಪಿ (BJP) ತನ್ನದೇ ಎನ್ಡಿಎ ಒಕ್ಕೂಟದ ಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಸಾಲಿನಲ್ಲಿ ಈಗ ಎಐಎಡಿಎಂಕೆ ಸೇರಿದೆ. ಹೊಸ ಕಾನೂನು ಭಾರತದ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಹಿನ್ನೆಲೆ ಯುಸಿಸಿ ಜಾರಿ ಮಾಡದಂತೆ ಅದು ಒತ್ತಡ ಹೇರಿದೆ.

ಇದಕ್ಕೂ ಮುನ್ನ ನಾಗಾಲ್ಯಾಂಡ್ನಲ್ಲಿ ಬಿಜೆಪಿಯ ಮತ್ತೊಂದು ಮಿತ್ರಪಕ್ಷವಾದ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (NDPP) ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು. ಒಂದು ಕಡೆ ವಿರೋಧ ಪಕ್ಷಗಳು ಮತ್ತೊಂದು ಕಡೆ ಮಿತ್ರ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನೆಲೆ ಬಿಜೆಪಿಗೆ ಈ ಪರಿಸ್ಥಿತಿ ಹೊಸ ಸವಾಲು ತಂದೊಡ್ಡಿದೆ.

ರಾಷ್ಟ್ರೀಯ ಕಾನೂನು ಆಯೋಗ ಸಲಹೆ ಕೋರಿ ಮನವಿ ಮಾಡಿದ ಬಳಿಕ ಏಕರೂಪ ನಾಗರಿಕ ನೀತಿಸಂಹಿತೆ ಬಗ್ಗೆ ಚರ್ಚೆ ಶುರುವಾಗಿದೆ. ಜೂನ್ 27 ರಂದು ಪ್ರಧಾನಿ ಮೋದಿ ಅವರು ಭೋಪಾಲ್ನಲ್ಲಿ ಯುಸಿಸಿ ಕುರಿತು ಮಾತನಾಡಿ ದೇಶವು ಎರಡು ಕಾನೂನುಗಳ ಮೇಲೆ ನಡೆಯಲು ಸಾಧ್ಯವಿಲ್ಲ ಮತ್ತು ಏಕರೂಪ ನಾಗರಿಕ ಸಂಹಿತೆಯು ಸಂವಿಧಾನದ ಭಾಗವಾಗಿದೆ ಎಂದು ಹೇಳಿದರು. ಬಿಜೆಪಿಯ ಚುನಾವಣೆ ಪ್ರಣಾಳಿಕೆಯೂ ಆಗಿದ್ದ ಹಿನ್ನೆಲೆ ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಬಹುದು ಎನ್ನಲಾಗುತ್ತಿದೆ.