

ಬಂಟ್ವಾಳ : ಕಳೆದ ಸಲದ ಸೋಲಿಗೆ ಈ ಬಾರಿ ಬಡ್ಡಿ ಸಹಿತ ಗೆಲುವು ಕೊಡಿ ಎಂದು ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಬಿ.ರಮಾನಾಥ ರೈ ಕರೆ ನೀಡಿದರು. ಸಿದ್ದಕಟ್ಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಬಂಟ್ವಾಳದಲ್ಲಿ ಈಗ ಶಾಂತಿಯಿದೆ ಎನ್ನುತ್ತಾರೆ. ಆದರೆ, ಕಾಂಗ್ರೆಸ್ ಆಡಳಿತವಿರುವ ಸಂದರ್ಭದಲ್ಲಿ ಶಾಂತಿ ಕದಡಿದವರು ಯಾರು ಎಂಬುದು ಜನತೆಗೆ ಈಗ ಸ್ಪಷ್ಟವಾಗಿದೆ. ಯಾವುದೇ ಗಲಭೆಗಳಲ್ಲಿ ಕಾಂಗ್ರೆಸ್ ನ ಒಬನೇ ಒಬ್ಬ ಕಾರ್ಯಕರ್ತನ ಮೇಲೆ ಒಂದೇ ಒಂದು ಎಫ್ ಐ ಆರ್ ಆಗಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಬಂಟ್ವಾಳದ ಕೇಂದ್ರ ಸ್ಥಾನದಲ್ಲಿ ಆಗಿರುವ ಎಲ್ಲಾ ಸರಕಾರಿ ಕಟ್ಟಡಗಳು ನನ್ನ ಅವಧಿಯಲ್ಲಿ ಆಗಿರುವುದು. ಬಂಟ್ವಾಳದಲ್ಲಿ ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿದೆ. ಇದು ಜಿಲ್ಲೆಯಲ್ಲೇ ಅತ್ಯಧಿಕ. ನನ್ನ ಅವಧಿಯಲ್ಲಿ ಆಗಿರುವ ಈ ಯೋಜನೆಗಳಿಂದಾಗಿ ಇಂದು ಬಂಟ್ವಾಳದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ. ಆದರೆ, ಈ ಬಾರಿ ಅವಧಿಗೆ ಮುನ್ನವೇ ಆಣೆಕಟ್ಟುಗಳಿಂದ ನೀರು ಬಿಟ್ಟಿರುವ ಕಾರಣ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಉದ್ಭವವಾಗಿದೆ ಎಂದು ರೈ ಹೇಳಿದರು.
ಇವತ್ತು ಬಿಜೆಪಿಗೆ ಅಧಿಕಾರ ಕೊಟ್ಟು ನೋಡಿದ್ದೇವೆ. ಬೆಲೆ ಏರಿಕೆ ಗಗನಕ್ಕೇರಿದೆ. ಆದರೆ ಅದನ್ನು ನಿರ್ವಹಿಸುವಷ್ಟು ಆದಾಯ ಜನತೆಯಲ್ಲಿ ಇಲ್ಲ. ಜನ ಸಾಮಾನ್ಯರ ಬದುಕು ನಿರ್ವಹಣೆ ಕಷ್ಟವಾಗಿದೆ. ಇದನ್ನು ಮನಗಂಡ ಕಾಂಗ್ರೆಸ್ ಈ ಬಾರಿ ಜನತೆಯ ಬದುಕು ಸುಧಾರಿಸಲು ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಣೆ ಮಾಡಿದೆ. ಈ ಎಲ್ಲಾ ಗ್ಯಾರಂಟಿಗಳನ್ನು ಖಚಿತವಾಗಿ ನಮ್ಮ ಸರಕಾರ ಮೊದಲ ಸಚಿವ ಸಂಪುಟ ಸಭೆಯಲ್ಲೇ ಜಾರಿಗೊಳಿಸುತ್ತದೆ ಎಂದು ಖ್ಯಾತ ನ್ಯಾಯವಾದಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಭರವಸೆ ನೀಡಿದರು. ಅವರು ಇದೇ ವೇಳೆ ಮಾತನಾಡಿದರು.


ಕೆಪಿಸಿಸಿ ವಕ್ತಾರ ಪದ್ಮಪ್ರಸಾದ್ ಜೈನ್, ಕೆಪಿಸಿಸಿ ಸದಸ್ಯರುಗಳಾದ ಪಿಯೂಸ್ ಎಲ್. ರೊಡ್ರಿಗಸ್, ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್, ಪ್ರಮುಖರುಗಳಾದ ಜಗದೀಶ್ ಕೊಯಿಲ, ಪಿಎ ರಹೀಮ್, ಡಾ. ಪ್ರಭಾಚಂದ್ರ ಜೈನ್, ಸುದರ್ಶನ್ ಜೈನ್, ದಿನೇಶ್ ಶೆಟ್ಟಿಗಾರ್, ಮೊಹಮ್ಮದ್ ಜೂಬಿ, ದೇವಪ್ಪ ಕರ್ಕೇರ, ಜಯಕರ ಶೆಟ್ಟಿ, ಶಿವಾನಂದ ರೈ, ಅಶೋಕ ಆಚಾರ್ಯ, ಸೀತಾರಾಮ್ ಶೆಟ್ಟಿ, ರಾಜೇಶ್ ಪೂಜಾರಿ, ಅಶೋಕ ಪೂಜಾರಿ, ಬೆನೆಡಿಕ್ಟ್ ಡಿಕೊಸ್ತಾ, ಜಲಜ, ಚಂದ್ರಶೇಖರ್ ಪೂಜಾರಿ, ಅಬ್ಬಾಸ್ ಅಲಿ, ಇಬ್ರಾಹಿಂ ಕೈಲಾರ ಮತ್ತಿತರರು ಉಪಸ್ಥಿತರಿದ್ದರು.

