

ಪುತ್ತೂರು; ನಾನು ಒಬ್ಬ ತೆರಿಗೆ ಪಾವತಿದಾರ ಉದ್ಯಮಿ. ವರ್ಷಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ಕಟ್ಟುತ್ತಿದ್ದೇನೆ. ಬಿಜೆಪಿ ಸೋಲಿನ ಹತಾಶೆಗೆ ನನ್ನ ಮನೆ ಮೇಲೆ ಐಟಿ ದಾಳಿ ನಡೆಸಿದೆ. ಆದರೆ ಅಲ್ಲಿ ಅವರಿಗೆ ಏನೂ ಸಿಕ್ಕಿಲ್ಲ. ಬರಿಗೈಲಿ ಹಿಂತಿರುಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರು ಬುಧವಾರ ಪುತ್ತೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪ್ರಸ್ತುತ ಪುತ್ತೂರಿನ ಜನತೆ ಅಶೋಕ್ ರೈ ಪರವಾಗಿದ್ದು, ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ಕಂಡು ಬಿಜೆಪಿ ಈಗಾಗಲೇ ಸೋಲೊಪ್ಪಿಕೊಂಡಿದೆ. ಬೇರೆ ಆಯುಧಗಳಿಲ್ಲದೆ ಇನ್ನೊಂದು ಅಸ್ತ್ರವಾಗಿ ಐಟಿ ದಾಳಿ ಮಾಡಿಸಿದ್ದಾರೆ. ಈ ವಿಷಯದಲ್ಲಿಯೂ ಬಿಜೆಪಿ ಸಂಪೂರ್ಣವಾಗಿ ಸೋಲು ಕಂಡಿದೆ ಎಂದರು.

ಮೈಸೂರಿನಲ್ಲಿ ನನ್ನ ಸಹೋದರನ ಮನೆ ಮೇಲೆ ಐಟಿ ದಾಳಿ ನಡೆದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆವರ ವ್ಯವಹಾರವೇ ಬೇರೆ. ನನ್ನ ವ್ಯವಹಾರವೇ ಬೇರೆ. ಅವರೂ ಒಬ್ಬ ತೆರಿಗೆ ಪಾವತಿದಾರ. ಅದಕ್ಕೂ ನನಗೂ ಯಾವುದೇ ಸಂಬಂಧವೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ 5 ವರ್ಷದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅದನ್ನು ಪ್ರಶ್ನೆ ಮಾಡಿರುವ ನನ್ನ ಭಾಷಣವನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ನನ್ನ ತೇಜೋವಧೆಗೆ ಶ್ರಮಿಸುತ್ತಿದ್ದಾರೆ. ಯಾರಿಗೂ ಬುದ್ಧಿ ಕಲಿಸುತ್ತೇನೆ ಎಂದು ಹೇಳಿಲ್ಲ. ಬಡವರಿಗೆ ನ್ಯಾಯ ಕೊಡಿಸುವ ವಿಚಾರದಲ್ಲಿ ಯಾರೊಂದಿಗೂ ನನ್ನದು ರಾಜಿ ಇಲ್ಲ. ನಾನು ಓರ್ವ ಹಿಂದೂ ಆಗಿ ಹಿಂದುತ್ವವನ್ನು ಒಪ್ಪಿಕೊಂಡವ. ಆದರೆ, ನನ್ನ ಹಿಂದುತ್ವವು ನನ್ನ ಧರ್ಮವನ್ನು ಪ್ರೀತಿಸಿ ಇನ್ನೊಂದು ಧರ್ಮವನ್ನು ಗೌರವಿಸುವುದು ಎಂದರು.

ರಾಜಕೀಯದಲ್ಲಿ ನಾನೊಬ್ಬ ಸಣ್ಣ ವ್ಯಕ್ತಿ. ಡಿ.ವಿ. ಸದಾನಂದ ಗೌಡರು ಬಹಳಷ್ಟು ವರ್ಷಗಳಿಂದ ರಾಜಕೀಯದಲ್ಲಿ ಪಳಗಿದವರು. ರಾಜ್ಯದ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ದೇಶದ ರಾಜ್ಯದ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದವರು. ಅವರ ಬಗ್ಗೆ ಮಾತನಾಡುವಷ್ಟು ದೊಡ್ಡ ವ್ಯಕ್ತಿ ನಾನಲ್ಲ. ಅವರು ನನ್ನ ಬಗ್ಗೆ ಹೆಚ್ಚು ಮಾತಾಡಿಲ್ಲ. ಆದರೆ, ನಾನು ಮಿತ್ರನಲ್ಲ ಶತ್ರು ಎಂದಿದ್ದಾರೆ. ಡಿ.ವಿ. ಸದಾನಂದ ಗೌಡರು ನನಗೆ ಯಾವತ್ತೂ ಶತ್ರು ಅಲ್ಲ. ಆಪ್ತಮಿತ್ರರು. ನನಗೆ ಯಾರೂ ಶತ್ರುಗಳಿಲ್ಲ. ಎಲ್ಲರೂ ನನ್ನ ಮಿತ್ರರೇ ಎಂದು ಹೇಳಿದರು.