

ಬೆಂಗಳೂರು: ರಾಜ್ಯದಲ್ಲಿಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು, ಲೋಕಾಯುಕ್ತ (Lokayukta Raid) ಅಧಿಕಾರಿಗಳು ಹಲವರ ಮನೆ ಬಾಗಿಲು ತಟ್ಟಿದ್ದಾರೆ. ಈ ಪೈಕಿ ಬಿಬಿಎಂಪಿ (BBMP) ಎಡಿಟಿಪಿ ಗಂಗಾಧರಯ್ಯ ಮನೆಯೂ ಒಂದು. ಇವರ ಮನೆಯಲ್ಲಿ ತಲಾಷ್ ನಡೆಸಿದಾಗ ಕೋಟ್ಯಾಂತರ ರೂಪಾಯಿ ನಗದು, ಚಿನ್ನಾಭರಣ, ಆಸ್ತಿಗಳು ಪತ್ತೆಯಾಗಿವೆ. ಇಂದು ಬೆಳಗ್ಗೆ ಗಂಗಧಾರಯ್ಯಗೆ ಸಂಬಂಧಿಸಿದ ಒಟ್ಟು 7 ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳ ತಂಡ ಏಕಕಾಲದಲ್ಲಿ ದಾಳಿ ನಡೆಸಿದ್ದರು. ಈ ವೇಳೆ ಏನೆಲ್ಲಾ ಪತ್ತೆಯಾಯ್ತು? ಚಿನ್ನಾಭರಣ ಎಷ್ಟು ಸಿಕ್ಕಿತು? ಎಷ್ಟು ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ? ಇತ್ಯಾದಿ ಮಾಹಿತಿ ಇಲ್ಲಿದೆ.

ದಾಳಿ ವೇಳೆ ಗಂಗಾಧರಯ್ಯ ಅವರು ಯಲಹಂಕ, ಜೆಸಿ ನಗರ, ನಾಗವಾರ ಮತ್ತು ಹೆಬ್ಬಾಳದಲ್ಲಿ 14 ಫ್ಲಾಟ್ಗಳು, ಮನೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇದಲ್ಲದೆ, ನೆಲಮಂಗಲದಲ್ಲಿ 1.5 ಕೋಟಿ ಮೌಲ್ಯದ 5 ಎಕರೆ ಕೃಷಿ ಭೂಮಿ, ಮಲ್ಲೇಶ್ವರದಲ್ಲಿ 3.65 ಕೋಟಿ ಮೌಲ್ಯದ ನಿವೇಶನ ಇರುವುದು ತಿಳಿದುಬಂದಿದೆ. ಇದರಲ್ಲದೆ, ಎರಡು ಬ್ಯಾಂಗ್ಗಳಲ್ಲಿ 2 ಲಾಕರ್ಗಳನ್ನು ಹೊಂದಿದ್ದಾರೆ.
ದಾಳಿ ವೇಳೆ ಗಂಗಾಧರಯ್ಯ ನಿವಾಸದಲ್ಲಿ 1.431 ಕೆಜಿ ಚಿನ್ನ, 8.7 ಕೆಜಿ ಬೆಳ್ಳಿ, ಮತ್ತು 73 ಲಕ್ಷ ಮೌಲ್ಯದ ಡೈಮಂಡ್ ಪತ್ತೆಯಾಗಿದೆ. ಅಲ್ಲದೆ, 1,47,16,000 ರೂ. (ಒಂದು ಕೋಟಿ ನಲವತ್ತೇಳು ಲಕ್ಷ ಹದಿನಾರು ಸಾವಿರ) ಪತ್ತೆಯಾಗಿದೆ. ಮಾತ್ರವಲ್ಲದೆ, ವಿದೇಶಿ ಕರೆನ್ಸಿಗಳು ಕೂಡ ಪತ್ತೆಯಾಗಿವೆ. USD 10,298, ಧೀರಮ್ ದುಬೈ 1180, ಈಜಿಪ್ಟ್ ಪೌಂಡ್ 35 ಪತ್ತೆಯಾಗಿವೆ. ಗಂಗಾಧರಯ್ಯ ಕಚೇರಿ, ಕುಟುಂಬಸ್ಥರು, ಅಳಿಯದಿಂರ ನಿವಾಸಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಶಾಕ್ ಕೊಟ್ಟಿದ್ದಾರೆ. ಕುಟುಂಬಸ್ಥರ ಮನೆಗಳಲ್ಲಿ ಮಹತ್ವದ ದಾಖಲೆಗಳು ಪತ್ತೆಯಾಗಿದ್ದು, ಅಧಿಕಾರಿಗಳು ದಾಳಿ ಮುಂದುವರೆಸಿದ್ದಾರೆ.
